ಸೋಮವಾರ, ಅಕ್ಟೋಬರ್ 31, 2022

101. ನೀವೊಂದು ಬಾರಿ ನೋಡಬೇಕು ಈ ನಾಯಿ ಹಾಸ್ಟೆಲ್

ನೀವೊಂದು ಬಾರಿ ನೋಡಲೇ ಬೇಕು ಈ ನಾಯಿ ಹಾಸ್ಟೆಲ್..

           ತನ್ನ ಜೀವನದಲ್ಲಿ ಏನಾದರೂ ಒಳ್ಳೆಯ ಕಾರ್ಯ ಮಾಡಬೇಕು ಅನ್ನಿಸಿ ಅನಾಥ ಮಕ್ಕಳಿಗಾಗಿ, ವೃದ್ಧರಿಗಾಗಿ, ವಿಧವೆಯರಿಗಾಗಿ, ಭಿಕ್ಷುಕರಿಗಾಗಿ ಆಶ್ರಮಗಳನ್ನು ತೆರೆದು, ಅವರ ಸೇವೆ ಮಾಡುವ ನಿಜವಾದ ಉತ್ತಮ ವ್ಯಕ್ತಿಗಳು ಒಂದೆಡೆಯಾದರೆ, ದುಡ್ಡಿಗಾಗಿ ಅದನ್ನು ನಡೆಸುವ ಕೆಲವರೂ ಇದ್ದಾರೆ. ಆದರೆ ಯಾರಿಂದಲೂ ಯಾವುದೇ ಪ್ರತಿಫಲ ಬಯಸದೆ, ತನ್ನ ಜೀವನವನ್ನೇ ಬೀದಿ ನಾಯಿಗಳ ಜೀವನಕ್ಕೆ ಮುಡಿಪಾಗಿಟ್ಟ ಅತಿ  ವಿರಳ ಗುಣದ ಯುವಕನೋರ್ವ ಇಲ್ಲಿದ್ದಾರೆ. ಹೌದು, ನೀವು ನಂಬಲೇ ಬೇಕು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ಬಳಿಯ ಸುಮ್ಮ ಬಂಡಸಾಲೆ, ಪೆಜತ್ತ ಗುರಿ ಇಲ್ಲಿನ ವೀರು ಅಲಿಯಾಸ್ ವಿರಂಜಯ ಹೆಗ್ಗಡೆ ಅವರೇ ಈ ಅನಾಥ ನಾಯಿಗಳ ಆಶ್ರಮ ನಡೆಸುತ್ತಿರುವ ಮಹಾನುಭಾವ. 

        "ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್" ಎಂಬ ಹೆಸರಿನಿಂದ ಈ ಶ್ವಾನಾಶ್ರಮ  ನಡೆಸಲ್ಪಡುತ್ತಿದೆ. ಆದರೂ ಇದು ವಿರoಜಯ ಹೆಗ್ಗಡೆ ಅವರ ಪ್ರಾಣಿ ಪ್ರೀತಿಯ ದ್ಯೋತಕವಾಗಿ ನಡೆದು ಬಂದ ದಾರಿ ಆಗಿದೆ. ಒಂದಲ್ಲ, ಎರಡಲ್ಲ, ವಿವಿಧ ತಳಿಯ, ಹೆಚ್ಚಾಗಿ ಬೀದಿ ನಾಯಿಗಳನ್ನೂ  ಸೇರಿ ಇನ್ನೂರ ಅರವತ್ತಕ್ಕಿಂತಲೂ ಹೆಚ್ಚು ನಾಯಿಗಳಿವೆ ಇಲ್ಲಿ! 

      ಬೀದಿ ನಾಯಿ ಎಂದರೆ ಕಲ್ಲು ಹೊಡೆದು ಓಡಿಸುವ ನಾವು ಈ ಯುವಕನ ಔದಾರ್ಯತೆಗೆ ಮೆಚ್ಚಲೇ ಬೇಕು. ಕಾರಣ ಪ್ರತಿದಿನ 25 ಕಿ. ಗ್ರಾಂ. ಅಕ್ಕಿಯಂತೆ ದಿನಕ್ಕೆ ಎರಡು ಸಲ ಮೊಸರು ಕಲೆಸಿ ಊಟ ಕೊಡಲಾಗುತ್ತದೆ. ನಡು ನಡುವೆ ಸಣ್ಣ ಮರಿಗಳಿಗೆ ಬಿಸ್ಕೆಟ್, ಜಾತಿ ನಾಯಿಗಳಿಗೆ ಪೆಡಿಗ್ರಿ , ಆರೋಗ್ಯ ಸರಿ ಇಲ್ಲದ ನಾಯಿಗಳಿಗೆ ಮದ್ದಿನ ಜೊತೆ ಅದಕ್ಕೆ ಬೇಕಾದ ಆಹಾರ ಕೊಡುತ್ತಾರೆ. ಅದನ್ನು ನೋಡಿಕೊಳ್ಳಲು ಮೂರು ನಾಲ್ಕು ಜನರಿರುವರು. ಅವರಿಗೆ ಪ್ರತಿ ತಿಂಗಳಿಗೂ ಸಂಬಳ ಪಡೆಯುವ ಕರ್ತವ್ಯ ಕೂಡಾ ಇದಾಗಿದೆ. ಇದನ್ನೆಲ್ಲ ವಿರoಜಯ ಅವರೇ ಖುದ್ದಾಗಿ ಮುಂದೆ ನಿಂತು ನೋಡಿಕೊಳ್ಳುತ್ತಾರೆ.

    ಇಂತಹ ಪ್ರಾಣಿ ಪ್ರೇಮ ಎಲ್ಲಿ ಕಾಣುವಿರಿ ನೀವು? ಬೀದಿ ನಾಯಿಗಳಿಗಾಗಿ ತನ್ನ ಬದುಕನ್ನೇ ಮುಡಿಪಾಗಿ ಇಟ್ಟ ಜನರನ್ನು? ಖಾಯಿಲೆಯ ಹಾಗೂ ದಿಕ್ಕಿಲ್ಲದ ಸಣ್ಣ ಮರಿಗಳಿಗೆ ,ಯಾರಾದರೂ ದಾರಿಯಲ್ಲಿ ಎಸೆದು ಹೋದ, ಅಪಘಾತವಾದ ಹಲವಾರು ನಾಯಿಗಳಿಗೆ ಆಶ್ರಯ ಕೊಟ್ಟು  ತಮ್ಮ ದುಡಿತದಲ್ಲಿ ಸಾಕುವ ಜನರನ್ನು ಈ ಕಾಲದಲ್ಲಿ? ಎಷ್ಟೇ ಕೋಟಿ ಹಣವಿದ್ದರೂ ಮಕ್ಕಳು, ಮೊಮ್ಮಕ್ಕಳು ಮರಿ ಮಕ್ಕಳ ಕಾಲಕ್ಕೂ ದುಡಿಯದೆ ತಿನ್ನುವ ಹಾಗೆ ಮಾಲ್, ಹೋಟೆಲ್, ವ್ಯಾಪಾರ ಎಂದು ವ್ಯಾಪಾರಿ ಮನೋಭಾವ ಹೊತ್ತು ಬದುಕುವ  ಜನರೇ ಹೆಚ್ಚಾಗಿ ಇರುವ ಈ ಕಾಲದಲ್ಲಿ ಇವರೊಬ್ಬ ತುಂಬಾ ದಯಾಮಯಿ ವ್ಯಕ್ತಿ ಅನ್ನಿಸುವುದಿಲ್ಲವೇ? ತನ್ನ ಮನೆಯ ಸುತ್ತಮುತ್ತ ಜಾಗದಲ್ಲೇ ನಾಯಿಗಳನ್ನು ಸಾಕುತ್ತಿರುವ ಇವರಿಗೆ ಹಲವು ದಾನಿಗಳು ಉದಾರ ನೆರವು ನೀಡಿದ್ದಾರೆ. ನಾಯಿಗಳ ಗೂಡುಗಳನ್ನು ಕಟ್ಟಲು, ಎಲ್ಲಾ ನಾಯಿಗಳಿಗೆ ಕೆಂಪು ಅಕ್ಕಿ ಅಥವಾ ಕುಚ್ಲಕ್ಕಿ ಅನ್ನ ಕೊಡುವ ಕಾರಣ ಕೆಲವರು ಅನ್ನಕ್ಕೆ ಬೇಕಾದ ಅಕ್ಕಿ, ಬ್ರೆಡ್, ಮೊಸರು, ತಮ್ಮ ಹುಟ್ಟು ಹಬ್ಬವನ್ನು ಅಲ್ಲಿಗೆ ಏನಾದರೂ ಕೊಡುವ ಮೂಲಕ ಆಚರಿಸಿಕೊಂಡ ಮಹನೀಯರು ಕೂಡಾ ಇದ್ದಾರೆ. ಅವರೆಲ್ಲರನ್ನೂ , ಅವರ ಸಹಕಾರಗಳನ್ನು ವಿರಂಜಯ ಹೆಗ್ಗಡೆ ಅವರು ನೆನೆಯಲು ಮರೆಯುವುದಿಲ್ಲ.

      ಇಲ್ಲಿನ ನಾಯಿಗಳಿಗೆ ಸ್ವಾತಂತ್ರ್ಯವೂ ಇದೆ. ಸಂಜೆ ಸ್ವಲ್ಪ ಹೊತ್ತು ಅಲ್ಲೇ ತಿರುಗಾಡಿ ಬರಬಹುದು. ಆದರೆ ಕೆಲವು ಮನುಷ್ಯರ ಹಾಗೇ ಈ ನಾಯಿಗಳಿಗೆ ಶಿಸ್ತು ಕೂಡಾ ಇದೆ. ಸಣ್ಣ ಮರಿಗಳು ಗೂಡಿನಿಂದ ಹೊರ ಬಂದರೆ ಸಿಕ್ಕಿ ಸಿಕ್ಕಿದಲ್ಲಿ ಓಡುವುದಿಲ್ಲ. ಒಂದೋ ಬೇರೆ ದೊಡ್ಡ ನಾಯಿಗಳು ಕಚ್ಚುತ್ತವೆ ಎಂದೋ, ತನ್ನ ಜಾಗ ಇದೇ ಎಂದೋ ಮತ್ತೆ ಬಂದು ಗೂಡು ಸೇರುತ್ತವೆ. ಹೊಸದಾಗಿ ಬಂದ ಮರಿಗಳು ಓಡಿದರೆ ಅಲ್ಲಿರುವ ಜನ ಮತ್ತೆ ಅವುಗಳನ್ನು ನಾಯಿ ತನ್ನ ಮರಿಗಳನ್ನು ಹಿಡಿದು ತರುವ ಹಾಗೆ ಕುತ್ತಿಗೆಯ ಹಿಂಭಾಗದಲ್ಲಿ ಹಿಡಿದು ತಂದು ಗೂಡಿಗೆ ಬಿಡುತ್ತಾರೆ. 

      ಹೊಸಬರು, ಬೇರೆ ಹೊಸ ನಾಯಿಗಳನ್ನು ಕಂಡಾಗ, ಹಸಿವಾದಾಗ ಆ ನಾಯಿಗಳ ಗಲಾಟೆ ಮೇರೆ ಮೀರುತ್ತದೆ. ಒಂದು ನಾಯಿ ಕಿರುಚಲು ಶುರುವಿಟ್ಟರೆ ಸಾಕು ಕೆಲವೊಮ್ಮೆ ಎಲ್ಲಾ ನಾಯಿಗಳೂ ಒಟ್ಟಿಗೆ ಬೊಗಳುತ್ತವೆ. ಅದನ್ನು ಯಾವುದೇ ಕಿರಿ ಕಿರಿ ಇಲ್ಲದೆ ಸಹಿಸಿ ಎಲ್ಲಾ ನಾಯಿಗಳನ್ನು ಒಂದೇ ರೀತಿಯಾಗಿ ಇಲ್ಲಿ ನೋಡಿಕೊಳ್ಳಲಾಗುತ್ತದೆ. 
  
       ಇಲ್ಲಿನ ದೊಡ್ಡ ನಾಯಿಗಳಿಗೆ ಹೆಸರುಗಳಿವೆ. ಎಲ್ಲಾ ದೊಡ್ಡ ನಾಯಿಗಳನ್ನು ಆಯಾ ಹೆಸರಿನಿಂದಲೇ ಕರೆಯಲಾಗುತ್ತದೆ. ಹಾಗೆಯೇ ಖಾಯಿಲೆಯ ನಾಯಿಗಳನ್ನು ಬೇರೆಯೇ ಕೋಣೆಯಲ್ಲಿ ಇರಿಸಿ ಅವುಗಳಿಗೆ ಹೆಚ್ಚು ಸಮಯ, ಬೇರೆಯೇ ಊಟ, ಮದ್ದು ಕೊಟ್ಟು ನೋಡಿಕೊಳ್ಳಲಾಗುತ್ತದೆ. ಇಲ್ಲಿರುವ ನಾಯಿಗಳಲ್ಲದೇ ಬೇಕೆಂದರೆ  ಊರಿನ ಎಲ್ಲಾ ಸಾಕಿರುವ  ಹೆಣ್ಣು ಬೀದಿ (ಲೋಕಲ್) ನಾಯಿಗಳಿಗೂ ಉಚಿತವಾಗಿ ಸಂತಾನ ಹರಣ ಚಿಕಿತ್ಸೆಯನ್ನು ಉಚಿತವಾಗಿ ತಿಂಗಳಿಗೆ  ಒಮ್ಮೆ  ಇವರು ಕೊಡಿಸುತ್ತಾರೆ. 

    ನಾಯಿಯೊಂದು ಖಾಯಿಲೆ ಬಂದು ಇಲ್ಲಿ ಸತ್ತರೆ ಅದರ ಸಂಸ್ಕಾರ ಮಾಡಿ ಅದರ ಫೋಟೋ ತೆಗೆದು "ಮಿಸ್ಸಿಂಗ್"  ಅಂತ ಫ್ಲೆಕ್ಸ್ ನಲ್ಲಿ ಹಾಕಿ ಇಡುತ್ತಾರೆ, ಇಲ್ಲಿ ನಾವು ಇವರ ಪ್ರಾಣಿ ಪ್ರೀತಿಯನ್ನು ನೆನೆಯಬಹುದು. ಯಾವುದೇ ಪ್ರಶಸ್ತಿಗಳ  ಹಿಂದೆ  ಹೋದವರು ಇವರಲ್ಲ. ಇವರು ಉತ್ಕಟ ಪ್ರಾಣಿ ಪ್ರೇಮಿ.  ಮನುಷ್ಯರ ಹಾಗೆಯೇ ಇಲ್ಲಿ ಭಾವನಾತ್ಮಕ ಸಂಬಂಧ ನಾಯಿಗಳೊಂದಿಗೆ ವಿರಂಜಯರಿಗೆ ಇದೆ. ಹಾಗಾಗಿ ನಾಯಿಗಳೂ ಎಲ್ಲೇ ಹೋದರೂ ಮತ್ತೆ ತಿರುಗಿ ಇಲ್ಲೇ ಬರುತ್ತವೆ.  ಹೇಳಿ ಕೇಳಿ ನಾಯಿ ಮನುಷ್ಯರಿಗಿಂತಲೂ ನಿಯತ್ತಿನ ಪ್ರಾಣಿ. ಈಗ ಲೋಕಲ್ ತಳಿಯ ಬೆಕ್ಕುಗಳನ್ನು ಉಳಿಸಲು ಅವುಗಳನ್ನೂ ಕೂಡಾ ಸಾಕಲಾಗುತ್ತಿದೆ.

   ಪ್ರತಿ ನಾಯಿಯನ್ನು ಸಹ ಪ್ರತಿದಿನ ಸ್ನಾನ ಮಾಡಿಸುತ್ತಾರೆ. ಅವುಗಳು ಇರುವ ಜಾಗವನ್ನು ತೊಳೆದು ಬೆಳಗ್ಗೆ ಹಾಗೂ ಸಾಯಂಕಾಲ ಶುದ್ಧಗೊಳಿಸಲಾಗುತ್ತದೆ. ಕೆಲವು ಸಲ ಮಲ, ಮೂತ್ರ, ವಾಂತಿ ಅಲ್ಲೇ ಮಾಡಿಕೊಳ್ಳುವ ನಾಯಿಗಳನ್ನು ಬೇರೆಯೇ ಕಟ್ಟಿ ಶುಚಿಯಾಗಿ ಇಡಲಾಗುತ್ತದೆ. ಒಟ್ಟಿನಲ್ಲಿ ಇಲ್ಲಿನ ನಾಯಿಗಳು ಶುದ್ಧವಾಗಿ ಇರುತ್ತವೆ. ಮಾತ್ರವಲ್ಲ ಆಗಾಗ ಇಲ್ಲಿ ನಾಯಿಗಳಿಗೆ ರೇಬೀಸ್ ವಿರುದ್ಧ, ಬೇರೆ ಬೇರೆ ರೋಗಗಳ ವಿರುದ್ಧ ಲಸಿಕೆಗಳನ್ನು ಕೂಡಾ ನೀಡಲಾಗುತ್ತದೆ. ಈ ಪ್ರಾಣಿಗಳ ಆರೋಗ್ಯಕ್ಕಾಗಿ ಪಶು ವೈದ್ಯರು ನಿರಂತರ, ನೇರ ಸಂಪರ್ಕದಲ್ಲಿಯು, ಆಗಾಗ ಅಲ್ಲಿಗೆ ಕರೆತಂದು ಸದಾ ಅವುಗಳ ಆರೋಗ್ಯದ ಬಗ್ಗೆ ಗಮನ ಕೊಡುತ್ತಾರೆ. ಅವರ ಆಟೋ ರಿಕ್ಷಾವನ್ನು ಪೆಟ್ ಆಂಬುಲೆನ್ಸ್ ಆಗಿ ಬಳಸಲಾಗುತ್ತದೆ. ಅದರಲ್ಲಿ ನಾಯಿಗಳನ್ನು ದೂರದ ಊರಿನ ಆಸ್ಪತ್ರೆಗಳಿಗೆ ಕೊಂಡೊಯ್ದು ಆಪರೇಶನ್, ಹಾಗೂ ವಿವಿಧ ಚಿಕಿತ್ಸೆ ಕೊಡಿಸಲಾಗುತ್ತದೆ. 

    ಇಲ್ಲಿ ಇನ್ನೊಂದು ವಿಶೇಷತೆ ಇದೆ. ಎಲ್ಲಾ ನಾಯಿಗಳ ಗುಣ ಒಂದೇ ಆಗಿಲ್ಲ. ನಾಯಿ ಭಾಷೆಯನ್ನು ಅರಿಯುವುದು ಬೇರೆಯೇ ಇದೆ. ನಾಯಿಗಳ ಮುಖದ ಆಕಾರವನ್ನು ನೋಡಿ ಅವುಗಳ ಭಾವನೆಗಳನ್ನು ಓದುವ ಒಂದು ಚಾರ್ಟ್ ಇಲ್ಲಿನ ಗೋಡೆಯ ಮೇಲಿದೆ. ಕೆಲವು ನಾಯಿಗಳಿಗೆ (ಬೀದಿ ನಾಯಿ ಆದ ಕಾರಣವೋ ಏನೋ) ಬೆಳಿಗ್ಗೆ ಸಂಜೆ ಊರಿನ ರಸ್ತೆಯಲ್ಲಿ ಒಂದು ರೌಂಡ್ ಓಡಿ ಒಂದೆರಡು ಹತ್ತಿರದ ಮನೆಗೆ ಹೋಗಿ ಬಂದರೆ ಸಮಾಧಾನ. ಇಲ್ಲಿ ಅದಕ್ಕೂ ಅವಕಾಶ ಇದೆ. ಕೆಲವು ನಾಯಿಗಳಿಗೆ ಅವರು ಒಮ್ಮೆ ತನ್ನನ್ನು ಎತ್ತಿಕೊಂಡರೆ ಇಷ್ಟ. ಇನ್ನು ಕೆಲವು ನಾಯಿಗಳಿಗೆ ಇವರು ಬೆನ್ನ ಮೇಲೆ ಕೈಯಾಡಿಸಿದರೆ ಖುಷಿ. ಮತ್ತೆ ಕೆಲವು ನಾಯಿಗಳ ಬಳಿ ಅವರು ಮಾತನಾಡಿದರೆ ಅವುಗಳಿಗೆ ನೆಮ್ಮದಿ! ನಾಯಿಗಳು ಅವರ ಆಟೋದ ಮುಂದೆ ಬಂದು ನೃತ್ಯ ಮಾಡುವುದು ನೋಡಲು ಚಂದ. ಎಲ್ಲಾ ನಾಯಿಗಳನ್ನು ಕೂಡಾ ತನ್ನ ಮನೆಯ ಸದಸ್ಯರಂತೆ ಕಾಣುತ್ತಾರೆ ಅವುಗಳ ಭಾವನೆಯನ್ನು ಅರಿತ ವಿರಂಜಯ ಹೆಗ್ಗಡೆ ಅವರು. 

    ನಿಮಗೆ ಏನಾದರೂ ಅಲ್ಲಿಂದ ನಾಯಿ ಮರಿಗಳು ಬೇಕೆಂದರೆ ಚೆನ್ನಾಗಿ ಸಾಕುವವರಿಗೆ ಯಾವುದೇ ಹಣ ಕೊಡದೇ ತರುವ ಅವಕಾಶವೂ ಇದೆ.ಚೆನ್ನಾಗಿ ಸಾಕಿದರೆ ಆಯಿತು. ನಿಮ್ಮ ಮನೆಯಲ್ಲಿ ನಾಯಿ ತುಂಬಾ ಮರಿ ಹಾಕಿದೆ ಎಂದರೆ ಅಲ್ಲಿ ಬಿಟ್ಟು ಬರಲೂ ಬಹುದು. ದೊಡ್ಡ ಸಾಕು ನಾಯಿಗಳನ್ನು ಅಲ್ಲಿ ಬಿಟ್ಟು ಬರಲು ಈಗ ಅವಕಾಶ ಇಲ್ಲ ಕಾರಣ ಅಲ್ಲಿ ಜಾಗದ ಕೊರತೆ ಇದೆ. ಆದರೂ ರೋಗ ಪೀಡಿತ, ಅಪಘಾತವಾದ, ಅನಾಥ, ಸಣ್ಣ ಮರಿಗಳನ್ನು ಇಲ್ಲಿ ತೆಗೆದು ಇರಿಸಿಕೊಂಡು ಸಲಹಲಾಗುತ್ತದೆ. 

      ಹಲವಾರು ಉತ್ತಮ ತಳಿಯ ನಾಯಿಗಳೇ ಅಲ್ಲದೆ ಲೋಕಲ್ ನಾಯಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವೆ . ರೋಗಗ್ರಸ್ತ ಹಾಗೂ ಅನಾಥ ನಾಯಿ ಮರಿಗಳಿಗೆ ಇದೊಂದು ಆಶ್ರಯ ತಾಣವಾಗಿ ಬೆಳೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನ ಯುವಕರು ದುಡಿಯುವುದರ ಜೊತೆಗೆ, ಉತ್ತಮ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರೂ ಇದ್ದಾರೆ ಎಂಬುದಕ್ಕೆ ವಿರಂಜಯ ಹೆಗ್ಗಡೆ ಅವರು ಉತ್ತಮ ಉದಾಹರಣೆ. ಜೈನ ಧರ್ಮದ ಅಹಿಂಸಾ ತತ್ವವನ್ನು ಸರಿಯಾಗಿ ಪಾಲಿಸುವ ಕಾರ್ಯವಿಲ್ಲಿ ನಡೆದಿದೆ ಎಂದು ಹೇಳಬಹುದು. ಹಾಗೆಯೇ ಇಲ್ಲಿನ ನಾಯಿಗಳಿಗೆ ಯಾವುದೇ ಮಾಂಸಾಹಾರಕ್ಕೆ ಅವಕಾಶ ಇಲ್ಲ. 


     ಇಂತಹ ಅಪರೂಪದ ನಾಯಿಗಳ ಆಶ್ರಮಕ್ಕೆ ಒಮ್ಮೆ ನೀವು ಭೇಟಿ ಕೂಡಲೇ ಬೇಕು. ಶೃಂಗೇರಿಯಿಂದ ಕಾರ್ಕಳಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಮಾಳ ಗೇಟ್ ಕಳೆದು ಸ್ವಲ್ಪ ದೂರಕ್ಕೆ ಇದೆ ಸುಮ್ಮ ಬಂಡಸಾಲೆ. ಅಲ್ಲೊಂದು ಟೆನ್ನಿಸ್ ಕೋಚಿಂಗ್ ಸೆಂಟರ್ ಕೂಡಾ ಇದೆ. ಅಲ್ಲದೆ ರಾಜ್ಯ ಮಟ್ಟದಲ್ಲಿ ಆಡ ಬಹುದಾದ ಉತ್ತಮ ಒಳಾಂಗಣ ಟೆನ್ನಿಸ್ ಕೋರ್ಟ್ ಕೂಡಾ ಇಲ್ಲಿದೆ. ರಜಾ ದಿನ ಹಾಗೂ ಆದಿತ್ಯವಾರ ಇಲ್ಲಿ ಕೋಚಿಂಗ್ ಕೂಡಾ ಕೊಡಲಾಗುತ್ತದೆ. ವಿರಂಜಯ ಅವರು ಉತ್ತಮ ಟೆನ್ನಿಸ್ ಆಟಗಾರರೂ ಹೌದು. ಹಿರಿಯರಿಗೆ ಹಾಗೂ ಮಕ್ಕಳಿಗೂ ಇಲ್ಲಿ ಟೆನ್ನಿಸ್ ಆಟವನ್ನು ಹೇಳಿ ಕೊಡಲಾಗುತ್ತದೆ. ಹಾಗೆಯೇ ಧರ್ಮಸ್ಥಳದಿಂದ ಉಡುಪಿ , ಕಾರ್ಕಳ ಮಾರ್ಗದಿಂದ ಬರುವವರು ಬಜಗೋಳಿಯಲ್ಲಿ ಬಲಕ್ಕೆ ತಿರುಗಿ ಕುದುರೆಮುಖ ರಸ್ತೆಯಲ್ಲಿ ಒಂದೆರಡು ಕಿಲೋ ಮೀಟರ್ ಮುಂದೆ ಸಾಗಬೇಕು. ಅಲ್ಲಿಯೇ ಪಕ್ಕದಲ್ಲಿ ಅಂದರೆ ಮಂಗಳೂರು - ಸೋಲಾಪುರ ಹೈ ವೇ ಯಿಂದ ಎರಡು ಕಿ.ಮೀ ಒಳಗೆ ಸಾಗಿದರೆ ಮುಡ್ರಾಲು ದುರ್ಗಾ ಪರಮೇಶ್ವರಿ ದೇವಸ್ಥಾನ ಇದೆ. ತುಂಬಾ ಸುಂದರವಾದ ಪ್ರಶಾಂತ ಪ್ರದೇಶವಿದು. ಹಸಿರು ಪ್ರಕೃತಿಯ ಮಡಿಲು. 9611944763 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ವಿರಂಜಯ ಹೆಗ್ಗಡೆ ಅವರು ಸಂಪರ್ಕಕ್ಕೆ ಸಿಗುತ್ತಾರೆ. https://youtu.be/C87mhXwdIyU ಇಲ್ಲಿ ಸ್ಥಳೀಯ ವಾರ್ತಾ ವಾಹಿನಿ ನೀಡಿದ ಸುದ್ದಿ ಮಾಹಿತಿ ಯು ಟ್ಯೂಬ್ ನಲ್ಲಿಯು ನೋಡಲು ಲಭ್ಯವಿದೆ.  ಧರ್ಮಸ್ಥಳ, ಶೃಂಗೇರಿ, ಉಡುಪಿ, ಕಾರ್ಕಳ ಪ್ರವಾಸ ಬರುವವರು ತಪ್ಪದೆ ಒಮ್ಮೆ ಭೇಟಿ ಕೊಡಬಹುದಾದ  ಜಾಗವಿದು. ಮನುಜರಂತೆ ಪ್ರಾಣಿಗಳೂ ಪ್ರೀತಿಗೆ, ಶಿಸ್ತಿಗೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಣ್ಣಾರೆ ಕಂಡು ಹೋಗುವ ಅವಕಾಶ ನಿಮ್ಮದಾಗಲಿದೆ. ಮಿಸ್ ಮಾಡಿಕೊಳ್ಳದೇ ಒಮ್ಮೆ ವಿರಂಜಯ ಹೆಗ್ಗಡೆ ಅವರ ಪ್ರಾಣಿ ಪ್ರೇಮ ನೋಡಿದರೆ ಮನ ಹರ್ಷಿತಗೊಳ್ಳುತ್ತದೆ. ಸಹಾಯ ಮಾಡುವ ಮನಸ್ಸಿದ್ದರೆ ಅದಕ್ಕೂ ಅವಕಾಶ ಇದೆ. ಮನುಷ್ಯರಿಗೆ ಅನಾಥಾಶ್ರಮ ಕಟ್ಟಿ ಅದನ್ನು ಸರಿಯಾಗಿ ನೋಡಿಕೊಳ್ಳುವುದೇ ಕಷ್ಟ ಆಗಿರುವ ಈ ಕಾಲದಲ್ಲಿ ಬೀದಿ ನಾಯಿಗಳಿಗೆ ಆಶ್ರಮ ಕಟ್ಟಿ ಅವುಗಳನ್ನು ನೋಡಿಕೊಳ್ಳುವ ಕಾರ್ಯ ಸಾಧಾರಣದ್ದೇ? ಇವರ ಕಾರ್ಯಕ್ಕೆ ನಾವು ಮೆಚ್ಚಲೇ ಬೇಕಲ್ಲವೇ? ನೀವೇನಂತೀರಿ? 
@ಹನಿಬಿ0ದು@
23.10.2021

ಬುಧವಾರ, ಅಕ್ಟೋಬರ್ 12, 2022

ಜೀವಾಮೃತ

ಜೀವಾಮೃತ

ನಿನ್ನನೆಲ್ಲಿ  ಅದೆಲ್ಲಿ ಬದುಕ ಬಿಟ್ಟಿಹರು
ಜೀವಾಮೃತವೇ ಈ ಕೆಟ್ಟ ಜನರು?
ತಮ್ಮಾರೋಗ್ಯ ಕೆಟ್ಟರೂ ಬಿಡಲಿಲ್ಲ
ಜಲ ಮಾಲಿನ್ಯವ ನಿಲ್ಲಿಸಲೇ ಇಲ್ಲ!

ಕಾರ್ಖಾನೆ ಕಸಗಳ ಸುರಿಯುವುದು
ಮನೆಯ ಚರಂಡಿಗಳ ಜೋಡಿಸುವುದು
ನದಿಯ ಕೈಗಳ ಬತ್ತಿಸುವುದು
ಜೆಸಿಬಿಯಲಿ ಗುಂಡಿಯನು ಅಗೆಯುವುದು

ಉಸಿರು ಕಟ್ಟಿಸಿ ಬಿಟ್ಟರು ತಿಳಿನೀರೆ
ಕೊಳಕು ಚೆಲ್ಲಿ ಮಲಿನಗೊಳಿಸಿದರು ಸಿಹಿನೀರೆ
ಮಿತವಾಗಿ ಬಳಸೆಂದರೆ ಕಿವಿ ಮುಚ್ಚಿಕೊಂಡರು
ಜನ ಸಂಖ್ಯೆ ಹೆಚ್ಚಿಸಿ ಬೋರು ಕೊರೆದರು

ಶುದ್ಧಗೊಳಿಸುವವರು ಇನ್ಯಾರು ಜಗದಲಿ
ನೆಟ್ಟರೆ ತಾನೇ ಹಸಿರನು ಪರಿಸರದಲಿ
ಹಸಿರ ಹಾಸಿಗೆ ಹಾಡಿದರೆ ಹೆಸರು
ಬಸಿರ ಕೂಸಿಗೆ ಬೇಕಲ್ಲ ಉಸಿರು?
@ಹನಿಬಿಂದು@
13.10.2022

ಶನಿವಾರ, ಅಕ್ಟೋಬರ್ 8, 2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -152

ಒಂದಿಷ್ಟು  ರಿಲ್ಯಾಕ್ಸ್ ತಗೊಳ್ಳಿ -152

   " ಸತ್ಯದೊಂದಿಗೆ ನನ್ನ ಪರಿಕಲ್ಪನೆಗಳು"(ಮೈ ಎಕ್ಸ್ಪರಿಮೆಂಟ್ಸ್ ವಿತ್ ಟ್ರುಥ್) ಇದು ಗಾಂಧೀಜಿ ಅವರ ಜೀವನದ ಬಗ್ಗೆ ಅವರೇ ಬರೆದ ಜೀವನ ಚರಿತ್ರೆಯ ಪುಸ್ತಕ. ಹಾಗೆ ನೋಡಿದರೆ ನಮ್ಮ ಬದುಕು ಕೂಡಾ ಇದೇ ಸತ್ಯ ಅಸತ್ಯಗಳ ನಡುವೆ ಇದೆ ಅಲ್ಲವೇ? ಸೋಲು ಗೆಲುವುಗಳ ನಡುವೆ. ನಂಬಿಕೆ ದ್ರೋಹಗಳ ನಡುವೆ. ನ್ಯಾಯ ಅನ್ಯಾಯಗಳ ನಡುವೆ. ಇವೆಲ್ಲವನ್ನು ಅನುಭವಿಸದ ಮನುಷ್ಯ ಜಗತ್ತಿನಲ್ಲಿ ಇದ್ದಾನೆ ಎಂದಾದರೆ ಅವನು ಪಶುವಿಗೂ ಸಮಾನನಲ್ಲ. ಅವುಗಳ ಬದುಕಲ್ಲೂ ಇದೆ ನೋವು-ನಲಿವು. 

ಇಂದು ಗಾಂಧೀಜಿ ಅವರು ಬದುಕಿರುತ್ತಿದ್ದರೆ ಅವರಿಗೆ ನೂರ ಐವತ್ತ ಮೂರು ವರ್ಷ ತುಂಬುತ್ತಿತ್ತು. ಅವರ ತತ್ವಾದರ್ಶಗಳಿಗೆ ಅಷ್ಟು ವರ್ಷ ಆಗಿರದೇ ಇದ್ದರೂ, ಇನ್ನೂ ಸಾವಿರ ವರ್ಷ ಕಳೆದರೂ ಆವು ಸಾಯಲಾರವು. ಆದರೆ ವಿಪರ್ಯಾಸ ಎಂದರೆ ಗಾಂಧೀ ತತ್ವಗಳು ಇಂದು ಒಂದು ರಾಜಕೀಯ ಪಕ್ಷಕ್ಕೆ ಸೀಮಿತಗೊಂಡು, ಅವರನ್ನೂ ಪಕ್ಷದ ಒಳಗೆ ಸೇರಿಸಿಕೊಳ್ಳಲಾಗಿದೆ. ಅವರ ಸ್ವಚ್ಛತೆಯ ಸಂದೇಶ ಜನರ ಮನಸ್ಸಿಗೆ ಅದೊಂಚೂರು ನಾಟಿದ್ದಿದ್ದರೆ ಇಂದು ಸ್ವಚ್ಛ ಭಾರತ್ ಅಭಿಯಾನ್ ಮಾಡಿ ನಾವೆಲ್ಲರೂ ಆ ಸೆಸ್ ಕಟ್ಟಲು ಇರುತ್ತಿರಲಿಲ್ಲ. ಅಲ್ಲದೆ ಗಾಂಧಿ ಜಯಂತಿಯ ದಿನ ಎಲ್ಲರೂ ರಸ್ತೆಗೆ ಇಳಿದು ಪ್ಲಾಸ್ಟಿಕ್ ಬಾಟಲಿಗಳು, ಕುರ್ಕುರೆ ಲೇಸ್ ಗಳ ಪ್ಯಾಕೆಟ್ಗಳು, ಚಾಕಲೇಟಿನ ರ್ಯಾಪರ್ ಗಳು ಇವುಗಳನ್ನೆಲ್ಲ ಹೆಕ್ಕುವ ಕಾಲ ಬರುತ್ತಿರಲಿಲ್ಲ. ಅದು ಬಿಡಿ, ಭಾರತೀಯರು ಅನೇಕರು ವಯಸ್ಸಾದ ಬಳಿಕ ತಮ್ಮ ಹೆತ್ತ ತಾಯಿಯನ್ನೇ ತಮಗೆ ಭಾರ ಎಂದು ವೃದ್ಧಾಶ್ರಮಕ್ಕೆ ಅಟ್ಟಿ ಬರುವವರು. ಇನ್ನು ಹೊತ್ತ ಭೂಮಿ ತಾಯಿಯನ್ನು ಅದೆಷ್ಟು ನೋಡಿಯಾರು? ತಮ್ಮನ್ನು ಹೊತ್ತ ಭೂಮಿಯ ಮೇಲೆ ಯಾವ ಕಾಳಜಿಯೂ ಜನರಿಗೆ ಇದ್ದಂತೆ ತೋರುತ್ತಿಲ್ಲ. ಕಾರಣ ವಿಪರೀತ ಚಟುವಟಿಕೆ ಮಾಡುವ ಮೂಲಕ ನೀರು, ಗಾಳಿ, ಮಣ್ಣು, ಆರೋಗ್ಯ ಎಲ್ಲವನ್ನೂ ಕೆಡಿಸಿ ಮುಂದಿನ ಜನಾಂಗಕ್ಕೆ ಸ್ವಲ್ಪ ವಿಷರಹಿತ ಆಹಾರ ಉಳಿಸುವ ಕಾರ್ಯವನ್ನೂ ಮಾಡಿಲ್ಲ ನಾವು.  ವಿಪರೀತ ರಾಸಾಯನಿಕಗಳನ್ನು, ರಸಗೊಬ್ಬರ -ಕೀಟ ನಾಶಕ ರೂಪದಲ್ಲಿ ಮಣ್ಣಿಗೆ ಕೊಟ್ಟು, ಅದರ ನೈಸರ್ಗಿಕ ಶಕ್ತಿಯನ್ನು ಕುಗ್ಗಿಸಿ, ವಿಷ ಬೆರೆಸಿದ್ದೆ ಅಲ್ಲದೆ, ಇರುವ ಬೃಹತ್ ಮರಗಳನ್ನೂ ಕಡಿದು ಹಾಕಿ ಕಟ್ಟಡ, ಕಾರ್ಖಾನೆ, ಅಗಲಗಳ ರಸ್ತೆ ನಿರ್ಮಿಸುವ ನಮಗೆ ಗಾಂಧೀಜಿಯವರ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಚರಕಗಳ ತಾಳ್ಮೆ ಇದೆಯೇ. ನಮಗೆ ಹೆಚ್ಚು ಉತ್ಪತ್ತಿ, ಹೆಚ್ಚು ಹೆಚ್ಚು ಲಾಭ ಬರಬೇಕು ಅಷ್ಟೇ. ಗಾಂಧೀಜಿ ಅವರ ಮೂಲ ಶಿಕ್ಷಣದ ಬಗ್ಗೆ ನಾವು ಗಮನಿಸದೆ, ಆಂಗ್ಲರ ಕಲಿಕಾ ಪದ್ದತಿ ಅನುಸರಿಸಿ ಪದವಿ ಪಡೆದವನಿಗೂ ಯಾವ ಕೆಲಸವನ್ನೂ ಮಾಡದ ರೀತಿ ತರಬೇತಿ ಕೊರತೆ ಆಗಿಲ್ಲವೇ? 

ವರ್ಷಕ್ಕೆ ಒಂದು ದಿನ ಗಾಂಧೀ ಜಯಂತಿ ಎಂದು ಬಾರ್ ಗಳನ್ನು ಮುಚ್ಚಿ, ಮೊದಲೇ ಶೇಖರಿಸಿ ಇಟ್ಟ ಬಾಟಲಿ ಹಿಡಿದುಕೊಂಡು ದೇವಾಲಯಗಳಿಗೆ ಪ್ರವಾಸ ಮಾಡಿ, ರಾತ್ರಿ ಅಲ್ಲಿನ ರೂಮುಗಳಲ್ಲೂ ಕುಡಿತದ ಕಾಯಕ ಮಾಡುತ್ತಾ ಅದನ್ನು ಬಿಟ್ಟಿರಿಲಾರದ ಮಟ್ಟಿಗೆ ಹೋಗಿದ್ದೇವೆ. ಹೀಗಿದ್ದು ಗಾಂಧೀ ಜಯಂತಿ ಆಚರಿಸಿದರೆ ಏನಾದರೂ ಪ್ರಯೋಜನ ಆದೀತೆ? ಗಾಂಧೀಜಿ ಅವರ ಆತ್ಮಕ್ಕೆ ಶಾಂತಿ ದೊರಕೀತೆ?

ಗಾಂಧೀಜಿ ಹುಟ್ಟಿದ ದಿನಾಂಕದಂದೇ ಶ್ರೀಯುತ ಲಾಲ್ ಬಹದೂರ್ ಶಾಸ್ತ್ರೀ ಅವರೂ ಜನಿಸಿರುವರು. ಭಾರತ ಕಂಡ ಮಹಾನ್ ಮುಖಂಡರಲ್ಲಿ ಇವರೂ ಒಬ್ಬರು. ಅವರ ತ್ಯಾಗ, ತಾಳ್ಮೆ, ದೂರ ದೃಷ್ಟಿಯ ಆಡಳಿತ, ರೈಲ್ವೆ ಮಂತ್ರಿಯಾಗಿ, ಪ್ರಧಾನಿಯಾಗಿ ನಿರ್ವಹಿಸಿದ ಸೇವೆ ಅನನ್ಯ. ಎರಡನೇ ಪ್ರಧಾನಿಯಾಗಿ, ಆರನೇ ಗೃಹ ಮಂತ್ರಿಯಾಗಿ, ರೈಲ್ವೆ ಮಂತ್ರಿಯಾಗಿ ಭಾರತದಲ್ಲಿ ಅವರ ದಿಟ್ಟ ನಿರ್ಧಾರ, ಪಾಕಿಸ್ತಾನದ ಯುದ್ಧಕ್ಕೆ ಉತ್ತರವಾಗಿ ಅವರು ಸೈನಿಕರಿಗೆ ಕೊಟ್ಟ ಸ್ವಾತಂತ್ರ್ಯ ಎಲ್ಲವೂ ಅತ್ಯದ್ಭುತ. 

ಇಂತಹ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮ ದಿನವಾದ ಇಂದು ಅವರಿಗಿಂತ ಕಿರಿಯರಾದ ನಾಸ್ವು ಅವರ ಉತ್ತಮ ಗುಣಗಳನ್ನು ಪಾಲಿಸೋಣ. ನಮ್ಮ ಹುಟ್ಟುಹಬ್ಬವನ್ನು ನಮ್ಮ ಮುಂದಿನ ತಲೆಮಾರಿನ ಜನತೆ ಆಚರಿಸಬೇಕು ಹಾಗೆ ಬದುಕೋಣ. ಹಾಗೆಯೇ ನಾಳೆಯಿಂದ ಶಾಲಾ ಮಕ್ಕಳಿಗೆ ದಸರಾ ರಜೆ ಪ್ರಾರಂಭ. ತದ ನಂತರ ಪರೀಕ್ಷೆಗಳು. ಹಾಗಾಗಿ ಪರೀಕ್ಷೆಯನ್ನು ಬರೆಯಲು ಮಕ್ಕಳಿಗೆ ತಯಾರಿ ಮಾಡಿಸೋಣ. ಅವರನ್ನು ಮಕ್ಕಳಾಗಿ ಆಟವಾಡಿ ಅವರಷ್ಟಕ್ಕೆ ಸ್ವಲ್ಪ ಬಿಟ್ಟು ಬಿಡೋಣ. ಅವರೂ ಸಂತಸ ಪಡಲಿ. ಕಾರಣ ಭಾರತದ ಮುಂದಿನ ನಾಯಕರು ಅವರಿಯಲ್ಲವೇ? ಗಾಂಧಿ ಶಾಸ್ತ್ರೀ ಜೀ ಅವರಂತಹ ಮಹಾನ್ ನಾಯಕರ ಗುಣಗಳು ನಮ್ಮ ಮಕ್ಕಳಲ್ಲೂ ಬರಲಿ ಅಲ್ಲವೇ?
@ಹನಿಬಿ0ದು@
02.10.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -151

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -151

ಮಾತು ಬೆಳ್ಳಿ ಮೌನ ಬಂಗಾರ ಎಲ್ಲರೂ ತಿಳಿದಿರುವ ಗಾದೆ. ಇಂತಹ ಹೆಚ್ಚಿನ ಗಾದೆಗಳು ಈಗಿನ ಕಾಲಘಟ್ಟಕ್ಕೆ ಅನ್ವಯಿಸುವುದಿಲ್ಲ ಎಂದಾದರೆ ಅವುಗಳ ಸಾಲಲ್ಲಿ ಈ ಗಾದೆಯೂ ಸೇರಬೇಕು ಅಲ್ಲವೇ? ಇಂದು ಮಾತನಾಡದೆ ಮೌನವಾಗಿ ಕುಳಿತವನನ್ನು ಜನ ಏನು ಬೇಕಾದರೂ ಮಾಡಿಯಾರು..ಇಂದಿನ ಗಾದೆ ಮಾತು ಬಲ್ಲವನಿಗೆ ಜಗಳವಿಲ್ಲ, ಬದುಕಬಲ್ಲ! "ಅಯ್ಯೋ..ಅವರು ಬಾರಿ ಒಳ್ಳೆ ಜನ, ಎಲ್ಲಿ ನೋಡಿದರೂ ಮಾತನಾಡದೆ ಹೋಗುವುದಿಲ್ಲ .." ಎನ್ನುವುದಿಲ್ಲವೇ? ಹಾಗೆಯೇ ನೀವು ಬಾಯಿ ಮುಚ್ಚಿಕೊಂಡೆ ಇದ್ದರೆ ನಿಮ್ಮ ಅನುಭವಗಳು, ಮಾತಿನ ವೈಖರಿ, ನಿಮ್ಮ ನೋವು ನಲಿವುಗಳು, ಆಲೋಚನೆಗಳು ಪರರಿಗೆ ತಿಳಿಯುವುದು ಹೇಗೆ? ಪ್ರಾಣಿಗಳು, ಮರ ಹುಟ್ಟಿ, ಮರವಿದ್ದು ಮರ ಸತ್ತ ಹಾಗೆ. ಅದು ಕೆಟ್ಟದೇನೂ ಅಲ್ಲ ಬಿಡಿ, ಆದರೆ ಭೂಮಿಗೆ ಬಂದ ಮೇಲೆ ನಮ್ಮ ಅಸ್ತಿತ್ವದ ಛಾಪನ್ನು  ಉಳಿಸಿ ಹೋಗಬೇಕಲ್ಲ!

ನಾವು ಎಷ್ಟು ಪದವಿಗಳನ್ನು ಪಡೆದಿದ್ದೇವೆ, ಎಷ್ಟು ಜನ ಫಾಲೋವರ್ಸ್ ಗಳನ್ನು ಹೊಂದಿದ್ದೇವೆ ಎನ್ನುವುದಕ್ಕಿಂತಲೂ ನಮ್ಮ ಮಾತು ಎಷ್ಟು ಜನರಿಗೆ ಖುಷಿ ಕೊಡುತ್ತದೆ, ನಮ್ಮ ಮೌನ ಅದೆಷ್ಟು ಜನರಲ್ಲಿ ಬೇಸರ  ಮೂಡಿಸುತ್ತದೆ ಎಂಬುದು ಮುಖ್ಯ ಅಲ್ಲವೇ? ಮೂರು ದಿನದ ಬದುಕಲ್ಲಿ ನಮ್ಮ ಮಾತು ನೂರು ಮನಗಳಲ್ಲಿ ನಗು ಅದಕ್ಕಿಂತ ಬದುಕಿನ ಸಾರ್ಥಕತೆಗೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು ಅಲ್ಲವೇ? ಸಾಧ್ಯವಾದರೆ ಸಹಾಯ, ಇಲ್ಲದೆ ಹೋದರೆ ಮೌನ. ಬೆಸ್ಟ್ ಅಲ್ಲವೇ?

ಬದುಕು ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ಯಾರ ಸಮಯ ಹೇಗೆ ಬರುವುದು ಎಂದು ಯಾರೂ ಹೇಳಲು ಸಾಧ್ಯವೇ ಇಲ್ಲ. ಕಚ್ಚಾ ಬಾದಾಮ್ ಹಾಡುಗಾರನ ಹಾಗೆ ಒಮ್ಮೆ ಜೀಕುಯ್ಯಾಲೆಯಲ್ಲಿ ನಿಮ್ಮ ಒಳ್ಳೆಯ ಗುಣ, ಹವ್ಯಾಸ ನಿಮ್ಮನ್ನು ಮೇಲಕ್ಕೆ ಎತ್ತಲೂ ಬಹುದು, ಗಾಳಿಪಟದಂತೆ ನೀವು ಗಾಳಿಯಲ್ಲಿ ಹಾರಲೂ ಬಹುದು. ಮತ್ತೊಮ್ಮೆ ನೂಲು ತುಂಡಾದ ಗಾಳಿಪಟ ನೆಲಕ್ಕೆ ಉದುರಿದ ಹಾಗೆ ಬೀಳಲೂ ಬಹುದು, ಅದೃಷ್ಟ ಚೆನ್ನಾಗಿ ಇದ್ದರೆ ಕೆಳಗೆ ಬೀಳದೆ ಮರದ ಮೇಲೆ ನೇತಾಡಿಕೊಂಡು ಇರಬಹುದು. 

ಮೌನಕ್ಕೆ ಶರಣಾದವ ಎಲ್ಲಿ ಹೇಗೆ ಇರುತ್ತಾನೆ ಎಂದು ಗೊತ್ತೆ ಆಗುವುದಿಲ್ಲ.  ಅತಿ ನೋವು, ಅತಿ ಬೇಸರವೂ ಮೌನಕ್ಕೆ ಕಾರಣ ಆಗ ಬಲ್ಲದು. ನಾವು ನೋಡುವ ನಗು ಮುಖಗಳ ಹಿಂದೆ ದೊಡ್ಡದಾದ ನೋವಿರಬಹುದು. ನಾವು ಅಂದುಕೊಂಡ ಹಾಗಿಲ್ಲ ಯಾರ ಬದುಕೂ ಕೂಡಾ. ಸದಾ ಏನೂ ಮಾಡದೆ ಇರುವವರನ್ನು ಸೋಮಾರಿಗಳು ಎನ್ನುತ್ತೇವೆ. ಆ ಸೋಮಾರಿತನಕ್ಕೂ ಕಾರಣ ಇಲ್ಲವೇ? ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ ತೊಂದರೆಗಳು ಮಾನವನ ಬೇಕು ಬೇಡಗಳನ್ನು ಸರಿಯಾಗಿ ತೂಗಿಸಲು ಸಾಧ್ಯ ಆಗದೆ ಜನ ಕೆಟ್ಟ ಅಥವಾ ಒಳ್ಳೆಯ ಅಥವಾ ಅಸಾಧಾರಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಆಗ ಮೌನವೂ ಗೆಳೆಯನಾಗಿ ಬಿಡುತ್ತದೆ.

 ಕೆಲವರು ಮಾತಲ್ಲಿ ಮೌನವಾಗಿ ಇದ್ದರೂ ಕೂಡಾ ಕೆಲಸದಲ್ಲಿ, ಬರವಣಿಗೆಯಲ್ಲಿ ತಮ್ಮ ಶಕ್ತಿಯನ್ನು ತೋರುತ್ತಾರೆ, ಇನ್ನು ಕೆಲವರು ತೋರಿಕೆಗಾಗಿ ಬದುಕುತ್ತಾರೆ. ಒಟ್ಟಿನಲ್ಲಿ ಬದುಕಿನ ಘಟನೆಗಳು ಮಾನವನಿಗೆ ಎಲ್ಲವನ್ನೂ ಕಲಿಸುತ್ತವೆ. ಹಾಗಾಗಿ ವಯಸ್ಸು ಹೆಚ್ಚಾದಷ್ಟು ಅನುಭವ ಹೆಚ್ಚು. ಮಾತು ಆಡಬೇಕೋ ಬೇಡವೋ ಎಂಬ ತಿಳುವಳಿಕೆ ಬರುತ್ತದೆ. ಚಿಲ್ಲರೆ ಸದ್ದು ಮಾಡುತ್ತದೆ,  ನೋಟಲ್ಲ. ಹೀಗೂ ಒಂದು ಮಾತಿದೆ, ಅಂದರೆ ಹೆಚ್ಚಿನ ವಿಷಯ ತಿಳಿದುಕೊಂಡವ ಮೌನಕ್ಕೆ ಶರಣಾಗುವನು. ಹೆಚ್ಚು ತಿಳುವಳಿಕೆ ಉಳ್ಳವ ಇನ್ನೂ ಹೆಚ್ಚು ಕೇಳುಗನಾಗುವನು. 
ನಮಗೆ ಅನ್ನಿಸಿದ್ದನ್ನೆಲ್ಲಾ ಹೇಳಲು ಅವಕಾಶ ಇದ್ದಿದ್ದರೆ, ಪ್ರತಿಯೊಬ್ಬರೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ತಿಳಿದಿದ್ದರೆ ಮೌನಕ್ಕೆ ಎಲ್ಲಿ ಬೆಲೆ ಇರುತ್ತಿತ್ತು? ಮೌನ ಬಂಗಾರ ಎಲ್ಲಿ ಆಗುತ್ತಿತ್ತು? ಹಾಗಂತ ಮೌನ ಬಂಗಾರವೇ ಆದರೂ ಪ್ರಪಂಚ ಮಾತಿನಲ್ಲೇ ನಡೆಯುತ್ತಿದೆ. ಸಂಜೆ ಐದರ ಬಳಿಕ ಯಾರ ಫೋನಿಗೆ ಕರೆ ಮಾಡಿದರೂ, "ನೀವು ಕರೆಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ.." ಅಲ್ಲವೇ? ಹಾಗಾದರೆ ಬೆಳ್ಳಿ ಅಂತ ಮಾತು ಬಿಟ್ಟಿದ್ದೇವೆಯೇ ನಾವು? 

ಮಾತು ಮಾನವನ ಗುಣ. ಮಾತು ಬಾರದ ಪ್ರಾಣಿಗಳೂ ಕೂಡಾ ಶಬ್ದಗಳಿಂದ ಸಾಧ್ಯವಾಗದ ಅದೆಷ್ಟೋ ಭಾವನೆಗಳನ್ನು ಆರಚುವುದು, ಕಿರುಚುವುದು, ಚೀರುವುದು, ಬೊಗಳುವುದರ ಮೂಲಕ ನಮಗೆ ತಿಳಿಯ ಪಡಿಸುತ್ತವೆ. ತಮ್ಮ ವಿಚಾರಗಳನ್ನು ದೇಹದ ಅಂಗಾಂಗಗಳನ್ನು ಅಲ್ಲಾಡಿಸುವ ಮೂಲಕವಾದರೂ ಹೇಳುತ್ತವೆ. ಅಕ್ಷರ ಅಕ್ಷರಗಳನ್ನು ಪೋಣಿಸಿ ಶಬ್ದ, ಶಬ್ದಗಳ ಆಗರ ವಾಕ್ಯ ಮಾಡುವ ಮನುಷ್ಯ ತಾನು ತನ್ನ ಮನದ ಭಾವನೆಗಳನ್ನು ಪ್ರಕಟಿಸದೇ ಇದ್ದಾಗ ನಾವು ಇದ್ದೂ ಇಲ್ಲದವರ ಹಾಗೆ ಆಗಿ ಬಿಡುತ್ತೇವೆ.

ಸ್ವಲ್ಪ ಮಾತಿರಲಿ. ಅದು ಸಮಯಕ್ಕೆ ತಕ್ಕ ಹಾಗಿರಲಿ. ಮೌನವೂ ಇರಲಿ ಆದರೆ ಆ ಮೌನ ಹಾಗೂ ಮಾತಿನಿಂದ ಇತರರ ಮನ ನೋಯದೆ ಇರಲಿ. ಬದುಕಿಗೆ ಸಹಾಯಕ ಆಗುವಲ್ಲಿ ಮೌನ ಮತ್ತು ಮಾತಿಗೆ ಸ್ಥಳ ಖಂಡಿತಾ ಇರಲಿ. ಮಾತು ಮನೆ ಕೆಡಿಸದೆ ಇರಲಿ, ಮೌನಕ್ಕೆ ಇರುವ  ಬಂಗಾರದ ಬೆಲೆ ಕಡಿಮೆ ಆಗದೆ ಇರಲಿ. ನೀವೇನಂತೀರಿ?
@ಹನಿಬಿಂದು@
22.09.2022


I Feel

ɪ ꜰᴇᴇʟ ᴍᴀɴy ᴛɪᴍᴇ 
ᴛʜᴀᴛ ᴡʜy ᴅᴏɴ'ᴛ yᴏᴜ
ᴀʀᴇ ɴᴇᴀʀ ᴛᴏ ᴍᴇ?
ᴡʜy ᴄᴀɴᴛ yᴏᴜ ᴡʜɪꜱᴩᴇʀ
ɴᴏᴡ ɪɴ ᴍy ᴇᴀʀꜱ? 

ᴡʜy ᴄᴀɴᴛ ɪ ʜᴏʟᴅ
 yᴏᴜʀ ʜᴀɴᴅꜱ ꜱᴏꜰᴛʟy?
ᴡʜy ᴅᴏɴ'ᴛ yᴏᴜ ᴋɪꜱꜱ
ᴏɴ ᴍy ꜱᴡᴇᴇᴛ ʟɪᴩꜱ?

ᴡʜy ᴄᴀɴ'ᴛ yᴏᴜ ᴊᴜᴍᴩ
ᴀɴᴅ ᴄᴏᴍᴇ ᴏᴜᴛ ᴏꜰ
ᴍy ʜᴇᴀʀᴛ ɴᴏᴡ ɪᴛꜱᴇʟꜰ?
ᴡʜy ᴄᴀɴᴛ ꜱɪᴛ ᴛᴏɢᴇᴛʜᴇʀ
ᴀɴᴅ ꜱʜᴀʀᴇ ᴏᴜʀ ꜰᴇᴇʟɪɴɢꜱ?

ᴡʜy ᴄᴀɴᴛ ᴡᴇ ᴇɴᴊᴏy ɪɴ 
ʀᴜɴɴɪɴɢ ᴡᴀᴛᴇʀ ᴛᴏɢᴇᴛʜᴇʀ?
ᴡʜy ᴅᴏɴ'ᴛ yᴏᴜ ʜᴏʟᴅ ᴍy ᴍɪɴᴅ
ᴜɴ yᴏᴜʀ ᴀʀᴍꜱ ꜱᴡɪꜰᴛʟy?
@ᴩʀᴇᴍ@
16.09.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -150

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -150

ಇಂದು ಸಂಭವಿಸುತ್ತಿರುವ ಎಲ್ಲಾ ಪ್ರಾಕೃತಿಕ ವಿಕೋಪಗಳು ಮಾನವನ ಕೊಡುಗೆಯೇ? ಮಾನವನಿಂದಾಗಿಯೇ ಎಲ್ಲಾ ಪ್ರಾಣಿ ಪಕ್ಷಿ, ಹುಳ ಹುಪ್ಪಟೆ ಕೀಟ ಜನತುಗಳಿಗೆ ತೊಂದರೆ ಆಗುತ್ತಿದೆ. ಅವುಗಳು ತಾಳಿಕೊಳ್ಳಲು ಆಗದ ಮಟ್ಟಕ್ಕೆ ಪ್ರಕೃತಿಯನ್ನು ಬದಲಾಯಿಸಿ ಬಿಟ್ಟಿದ್ದಾನೆ ಮಾನವ. ಕೆಲವೊಂದು ಪ್ರಾಣಿ, ಪಕ್ಷಿಗಳು ಈ ಭೂಮಿಯ ಮೇಲೆ ಬದುಕಲು ಸಾಧ್ಯವೇ ಇಲ್ಲ. ಜಲ ಮಾಲಿನ್ಯದಲ್ಲಿ ನಿತ್ಯ ನೀರಿನಲ್ಲಿ ಸಾಯುತ್ತಿರುವ ಜಲಜೀವಿಗಳ ಸಂಖ್ಯೆ ಲೆಖ್ಖಕ್ಕೇ ಸಿಗದು. 

ಮಾನವ ತನಗೆ ತಾನೇ ಹೇಳಿಕೊಳ್ಳುವ ಮಾತೆಂದರೆ ತಾನು ಉನ್ನತ ಮಟ್ಟದ, ಬುದ್ಧಿ ಇರುವ ಪ್ರಾಣಿ ಎಂದು. ಆದರೆ ಮಾಡುವ ಕಾರ್ಯ ಮಾತ್ರ ಯಾವ ಪ್ರಾಣಿಯೂ ಮಾಡದ, ಪರ ಪ್ರಾಣಿಗಳಿಗೆ ನೋವು ಕೊಡುವ, ಸಾಯಿಸುವ ಕಾರ್ಯ. ಇಂತಹ ಹಲವಾರು ಘಟನೆಗಳಿಗೆ ಮಾನವನ ಕೀಳು ಮಟ್ಟದ ಕೆಲಸಗಳೇ ಕಾರಣ. ಇವು ಪ್ರಕೃತಿ ವಿಕೋಪವನ್ನೂ ತರುತ್ತವೆ. 

ಎಲ್ಲಾ ಪ್ರಾಣಿಗಳೂ ಆಹಾರ, ನಿದ್ದೆ, ಸಂತಾನೋತ್ಪತ್ತಿ ಮತ್ತು ಬದುಕಲು ಹೋರಾಡುತ್ತವೆ, ಸಿಟ್ಟಿಗೆ ಒಳಗಾಗುತ್ತವೆ, ಕಚ್ಚುತ್ತವೆ, ಹೆದರಿಸುತ್ತವೆ, ಓಡಿಸುತ್ತವೆ. ಆದರೆ ಮಾನವನ ಹೋರಾಟವೇ ಬೇರೆ. ನ್ಯಾಯಕ್ಕಾಗಿ, ಹಣಕ್ಕಾಗಿ, ಹೆಣ್ಣಿಗಾಗಿ, ಹಲವಾರು ತಲೆಮಾರುಗಳ ವರೆಗೆ ಕುಳಿತು ತಿನ್ನುವ ಆಸ್ತಿಗಾಗಿ, ಶೋಕಿಗಾಗಿ! ಕಷ್ಟ ಪಟ್ಟರೆ ತಾನೆ ದುಃಖದ ಬೆಲೆ ಗೊತ್ತಾಗುವುದು? ಈಗಿನ ಕಾಲದ ಯುವಕರ ಮನಸ್ಥಿತಿ ಹೇಗಿದೆ ಎಂದರೆ ಯಾರಾದರೂ ನೆಂಟರ, ಗೆಳೆಯರ, ಬಂಧುಗಳ ಮನೆಗೆ ಹೋಗುವಾಗ ಅಲ್ಲಿನ ಮಕ್ಕಳಿಗೆ, ಹಿರಿಯರಿಗೆ ಒಂಚೂರು ತಿಂಡಿ ತೆಗೆದುಕೊಂಡು ಹೋಗುವ ಪರಿಪಾಠವೂ ಅವರಿಗೆ ಇಲ್ಲ. ಇದನ್ನು ಅತಿಯಾದ ಮುದ್ದಿನಿಂದ ಪೋಷಕರು ಅವರಲ್ಲಿ ಬೆಳೆಸಿಲ್ಲವೋ, ಮನೆ, ಕಚೇರಿ ಇಷ್ಟೇ ಪ್ರಪಂಚವೋ, ತಾನಿರುವ ಮನೆಗೆ ಏನಾದರೂ ತೆಗೆದುಕೊಂಡು ಹೋದರೆ ಏನೇನ್ನೂವರೋ ಎಂಬ ಭಯವೋ ಗೊತ್ತಾಗದು! ಹೊರಗಿನ, ಬೇಕರಿ ತಿಂಡಿ ತಿಂದರೆ ಆರೋಗ್ಯ ಹಾಳಾಗುತ್ತದೆ, ಹಾಗಾಗಿ ಹೊರಗೆ ಚಾಟ್ಸ್, ಚೈನೀಸ್ ಫುಡ್ ತಿನ್ನುವ ನಮ್ಮ 

ಮಕ್ಕಳಿರುವಾಗ ತಿಂಡಿ, ಮಹಿಳೆಯರು ಇರುವಾಗ ಬಟ್ಟೆ, ಪಾತ್ರೆ, ಮೇಕ್ ಅಪ್ ಐಟಂ ಇವೆಲ್ಲ ನಾವು ಹೋದ ಮನೆಗೆ ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ.ಆದರೆ ಈಗಿನ ಜನರೇಷನ್ ತೀರಾ ವಿರುದ್ಧ. ಹೆಚ್ಚು ತಿನ್ನಲ್ಲ. ಬ್ರೆಡ್, ಬನ್ ಅವರಿಷ್ಟದ ಊಟ. ಎರಡು ಸಣ್ಣ ಚಪಾತಿ, ಎರಡೇ ಇಡ್ಲಿ. ಹೀಗೆ..ಆದರೆ ಹೊಟ್ಟೆ ತುಂಬ ತಿಂದು ಬೆಳೆದವರು ನಾವು. ನಮಗೆ ಹಸಿವು ತಡೆಯಲು ನಮ್ಮ ಈ ಜೆನರೇಷನ್ ಗ್ಯಾಪ್ . ಎಲ್ಲರ ಬದುಕಲ್ಲೂ ಇದೆ. ಅಮ್ಮ ಒಳ್ಳೆಯ ಮಹಿಳೆ, ಮುಗ್ದೆ. ಮಗನಿಗೆ ಪ್ರತಿಯೊಂದು ವಿಷಯವನ್ನೂ ತಿಳಿ ಹೇಳಿ ಹೇಳಿ ಸಾಕಾಗಿ ಹೋಗುತ್ತದೆ. ಆದರೆ ಅಮ್ಮ ಅಲ್ವಾ..ಹೇಗೋ ಬೈದು ಹೇಳಿ ಸಹಿಸಿಕೊಳ್ಳುತ್ತಾನೆ. "ಇವರ ಗುಣವೇ ಹೀಗೆ, ಏನೂ ಮಾಡಲು ಆಗದು " ಅಂದುಕೊಳ್ಳುತ್ತಾನೆ. 

ನಮ್ಮ ಪಕ್ಕದ ಮನೆಯ ಸಂತು ಅಂತೂ ಇಂಜಿನಿಯರಿಂಗ್ ಆದ ಕೂಡಲೇ ಅಮ್ಮನಿಗೆ ಹೇಳಿದ್ದ, "ನಾನು ಮದುವೆ ಆದರೆ ನನ್ನ ಮಡದಿಯನ್ನು ಕರೆತಂದು ನಿನ್ನ ಜೊತೆಗೆ ಬಿಡಲಾರೆ. ಅದಕ್ಕೆ ನನಗೊಂದು ಮನೆ ಬೇಕು. ನೀನು ಅಮ್ಮ, ಅವಳು ನಂಬಿ ಬಂದ ಹೆಂಡತಿ. ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದರೆ ನಾ ಒಂದೇ ಕಡೆ ತಿರುಗಲು ಕಷ್ಟ. ನೀವಿಬ್ಬರೂ ಕಿತ್ತಾಡಿಕೊಂಡರೆ  ಮಧ್ಯೆ ನಾನು ಯಾರ ಕಡೆ ಮಾತಾಡಲಿ? ಅದಕ್ಕೆ ನಾ ತಿಂಗಳಿಗೊಮ್ಮೆ ನೆಂಟರ ತರಹ ಬಂದು ಹೋಗುವೆ " ದೂರಾಲೋಚನೆ. ಇದೆ ಅಲ್ಲವೇ ಜನರೇಷನ್ ಗ್ಯಾಪ್! ತಾಯಿಗಾಗಿ, ತಂದೆಗಾಗಿ ಮಡದಿಯನ್ನು ಬಿಟ್ಟವರು ಅನೇಕ ಮಂದಿ. ಮಡದಿಗಾಗಿ, ಗಂಡನಿಗಾಗಿ ಹೆತ್ತವರನ್ನು ತೊರೆಯುವವರೂ ಕೆಲವರು. 

ಕಾಲ ಬದಲಾಗದು. ಜನರ ಮನಸ್ಸಿನ ಭಾವನೆಗಳು ಬದಲಾಗಿವೆ. ಬಸ್ಸಿನ ಬದಲು ಕಾರುಗಳು ಬಂದು ಮನಸ್ಸುಗಳೂ ಸಣ್ಣದಾಗಿವೆ. ಪರರ ಜೊತೆ ಹೊಂದಾಣಿಕೆ ಮಾಡಿಕೊಂಡು ಬಾಳುವ ಗುಣ ಈಗಿಲ್ಲ.  ನಾನು, ನನ್ನ ಮಕ್ಕಳು, ನನ್ನ ಕುಟುಂಬ ಅಷ್ಟೇ. ಅಕ್ಕ ತಂಗಿಯರಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಎಂದು ಅವರನ್ನು ಬಡಿಗೆಯಲ್ಲಿ ಬಡಿದು ಅವರ ಕಾಲು ಮುರಿದು ತವರು ಮನೆಗೆ ಅವರು ಬಾರದ ಹಾಗೆ ಕಾರ್ಯ ಅಣ್ಣ ಅತ್ತಿಗೆಯರು ಇರುವ ಈ ಕಾಲ. ಇನ್ನು ಪರಿಸರ ಬಿಟ್ಟಾರೆಯೇ. ತಾವು ಉಗಿಯಲು, ತಿಂದು ಬೇಡದ್ದ ಬಿಸಾಕಲು, ಪ್ಲಾಸ್ಟಿಕ್ ಬಾಟಲಿಗಳ ಎಸೆಯಲು ಭೂಮಿ. ಮತ್ತೆ ಅದನ್ನು ದುಡ್ಡು ಕೊಟ್ಟು ಕೊಳ್ಳುವುದು, ಮಾರುವುದು . ಭೂುಮಿ ತಾಯಿ ನೋವುಂಡ ಹಡೆದವ್ವನಂತೆ. ಅವಳಿಗೆ ಮತ್ತೂ ಮಕ್ಕಳಿಂದ ನೋವೇ. 
ಇನ್ನು ಇದನ್ನು ಸರಿ ಮಾಡುವವರು ಯಾರು? ಬುದ್ದಿವಂತ ಮಾನವನೇ ಮಾಡಿದ ದುಷ್ಟ ಕಾರ್ಯಕ್ಕೆ ಪರರು ಸರಿ ಮಾಡಲುಂಟೆ? ಅಲ್ಲವೇ? ನೀವೇನಂತೀರಿ?
@ಹನಿಬಿಂದು@
17.09.2022 

ಕವನ -ಕೊಂದು ಹಾಕಿದರು

ಕೊಂದು ಹಾಕಿದರು

ಹೆಮ್ಮರವನು ಕೊಂದು ಹಾಕಿದರು
ಇಂದಿಲ್ಲಿ ಸಮಾಜದ ನಡುವೆ
ಬಿರು ಬಿಸಿಲಿನಲ್ಲಿ, ಸರ್ವರ ಸಮ್ಮುಖದಲ್ಲಿ!
ಯಾರೊಬ್ಬರೂ ತಡೆಯಲಿಲ್ಲ ನನ್ನ ಸಾವನಿಲ್ಲಿ!

ನಾ ಹೆಮ್ಮರವಾಗಿ ಬೆಳೆದಿದ್ದೆ
ಅಗಲ, ಎತ್ತರ ದಷ್ಟಪುಷ್ಟ
ದೇಹದಲ್ಲಿ ಮಾತ್ರವಲ್ಲ, ಮನಸ್ಸಿನಲ್ಲೂ..

ಯಾರಿಗೂ ಕೇಡು ಬಯಸದೆ
ಓದಿ ಬರೆಯುತ್ತಾ, ಲೆಕ್ಕ ಮಾಡುತ್ತಾ
ವಯಸ್ಸನ್ನು ಎನಿಸುತ್ತಾ, ನೆರಳು ಕೊಡುತ್ತಾ..
ಕಿರಿಯರ ಆಶೀರ್ವಾದಿಸುತ್ತಾ, ಹಿರಿಯರ ನೆನೆಯುತ್ತಾ

ನನ್ನಷ್ಟಕ್ಕೆ ನಾನೇ ಬದುಕುತ್ತಿದ್ದೆ
ಹಲ್ಲಿಲ್ಲದಿದ್ದರೂ ನಗುತ್ತಿದ್ದೆ
ಜ್ಞಾನದ ಅಮೃತ ಉಣಬಡಿಸುತ್ತಿದ್ದೆ
ತಾಂತ್ರಿಕ ಯುಗ ಬಂತು ನೋಡಿ!

ಬರೆಯಲು, ಓದಲು ಯಂತ್ರಗಳೇ
ನಮ್ಮ ಮೆದುಳಿನ ಶಕ್ತಿಗೆ ಬೆಲೆ ಇಲ್ಲ
ಸಾವಿರ ಮೆದುಳು ಒಂದೇ ಯಂತ್ರದಲ್ಲಿ ಇದೆಯಂತೆ
ಇನ್ನು ನಾನು ನೀವು ಯಾಕೆ ಬೇಕು?

ರಸ್ತೆ ಅಗಲಿಸ ಬೇಕಂತೆ
ಚತುಷ್ಪಥ, ಅಷ್ಟಪಥ ಬೇಕು
ಅವರು ಮುಂದುವರೆಯಬೇಕಂತೆ ಜನರಿಗೆ!
ನಾ ಹಿರಿಯ, ಎಂದು ಬೀಳುವೇನೋ ಎಂಬ ಭಯ ಅವರಿಗೆ!

ಅಷ್ಟೇ ಅಲ್ಲ, ನನ್ನ ಎಲೆಗಳು!
ಹಿಂದೆ ಗೊಬ್ಬರವಾಗುತ್ತಿದ್ದವು
ಈಗ ಕಸ! ಗುಡಿಸಲು ಕೆಲಸದವರಿಲ್ಲ!
ಸಮಯವೂ ಇಲ್ಲ, ಮನೆ ಪರಿಶುದ್ಧ!
ಮನವೋ! ಅದರ ವಿರುದ್ಧ!

ಜೆಸಿಬಿ ಇಟಾಚಿ ಕ್ರೇನ್ ಎಲ್ಲಾ ಬಂತು
ಜನರೂ ಬಂದರು!
ಕತ್ತಿ, ಕೊಡಲಿ, ಗರಗಸ, ಯಂತ್ರಗಳು
ಅದೆಷ್ಟು ಜನ! ಸಂತಸ ಮೊಗದಿ
ಈಗಿನ ರಾಕ್ಷಸರು!
ಇಷ್ಟು ವರ್ಷ ನೆರಳು ವಿದ್ಯೆ ಕೊಟ್ಟು
ಬಾಳಿ ಬದುಕಿದ, ಬದುಕಿಸಿದ ಹಿರಿಜೀವ
ಈಗ ಕಸ, ವೇಸ್ಟ್, ಡೇಂಜರ್, ಕಿಲ್ಲರ್!
ಅಬ್ಬಾ ! ಈ ಪದಗಳು ನನಗೆ!
ನಾ ದುಡಿದು ಉತ್ತಮ ಗಾಳಿ, ನೀರು, ನೆರಳು, ಮಳೆ, ಹಣ್ಣು, ಹೂವು, ಕಾಯಿ, ಕೊಟ್ಟದ್ದನ್ನು ತಿಂದು
ನನ್ನಾಸರೆಯಲ್ಲಿ ಬೆಳೆದ ಕಿರಿಯರ
ಬೃಹತ್ ಹೆಸರುಗಳು ನನಗೆ! 

ನಾ ಸಾಯುತ್ತಿಲ್ಲ, ನನಗೆ ಸಾವು ಬೇಕಿಲ್ಲ
ಆದರೆ ಸಾಯಿಸುತ್ತಾ, ಕೊಲ್ಲುತ್ತಾ ಇದ್ದಾರೆ ನನ್ನ!
ನನ್ನ ಕೊಲ್ಲಲು ಅದೆಷ್ಟು ಜನ!
ಅದೆಷ್ಟು ಯೋಜನೆಗಳು!

ಇಂಗು ತುಂಬಿಸುತ್ತಾರಂತೆ ದೇಹದ ಒಳಗೆ
ಖರ್ಚಿನ ಬಗ್ಗೆ ಲೆಕ್ಕಾಚಾರ ಹೊರಗೆ!
ಆಸ್ಪತ್ರೆ, ಮದ್ದು, ಕಷಾಯ ಬೇಕಿಲ್ಲ ನನಗೆ
ಸಾಕುವವರೂ ಬೇಡ, ಜಾಗವಿದೆಯಲ್ಲ ಸ್ವಂತ!
ನನ್ನ ದೇಹವ ಮಾರಿದ ಹಣ ಬೇಕು ಅವರಿಗೆ!
ಬದುಕು ಈಗ ವ್ಯವಹಾರ, ಕಾಸೇ ಮುಖ್ಯ!

ಕಳೆದ ಹಗಲೆಷ್ಟೋ, ಇರುಳೆಷ್ಟೋ
ನಾ ನೆರಳಿತ್ತು  ಕೈ ಹಿಡಿದು ಸಲಹಿದ ಜನರೆಷ್ಟೋ
ನಡೆದ ಹಾದಿ ಎನಿತು ದೂರವೋ?
ಅದ್ಯಾವುದೂ ಪರಿವೆಯೇ ಇಲ್ಲ ಇಂದು
ಜ್ಞಾನ ಸಂಘ, ಪರಿವಾರ, ಯಂತ್ರಗಳ ಎದುರು ಲೆಕ್ಕಕ್ಕಿದ್ದರೆ ತಾನೇ!

ನಾ ಹಿರಿಯ ಎಂಬುದಕ್ಕೆ ಬೆಲೆ ಇಲ್ಲ
ನನ್ನ ಜ್ಞಾನಕ್ಕೂ ಬೆಲೆ ಇಲ್ಲ
ಬದುಕಿನ ಪಾಠಕ್ಕೂ ಬೆಲೆಯೇ ಇಲ್ಲ
ಕಲಿತ ವಿದ್ಯೆಗೂ ಒಲವಿಲ್ಲ
ವಯಸ್ಸು, ಓದು, ಊಹೂಹ್ಜ಼ೂ..
ನಾ ಕಾಡು ಬಿದ್ದು, ಬಿದ್ದು ಹೋಗುವ, ಮುದಿ ಜೀವ

ಇಂಗು ತುಂಬಿಸ ಬೇಕಂತೆ ನನ್ನೊಳಗೆ!
ಗರಗಸದ ಹರಿತ ಸಾಲದಂತೆ ನನಗೆ!
ಕೊಡಲಿ ಚಿಕ್ಕದಾಯಿತಂತೆ! 
ಮುರಿದ ಕೊಂಬೆಗಳಿಂದ ದನ, ಜನ, ಮನೆಗೆ ಹಾನಿಯಂತೆ!
ಅದಕ್ಕೆ ನನ್ನ ನಿಧಾನವಾಗಿ ಯಂತ್ರಗಳಿಂದ ಸಾಯಿಸಬೇಕಂತೆ!

ನನ್ನ ಯಾತನೆ! ನನ್ನ ನೋವು! 
ಯಾರಿಗೆ ಬೇಕಿದೆ ಅದು?
ಯಾಕಾಗಿ ಬೇಕಿದೆ! ನನ್ನ ಮಾರುವವ ಒಬ್ಬ, ಕತ್ತರಿಸುವವ ನಿತ್ಯ ಹೊಟ್ಟೆ ಪಾಡಿಗಾಗಿ ದುಡಿವ ಕೂಲಿ ಕೆಲಸದವ! 
ಹಣ ಮಾಡುವವ ಮಧ್ಯವರ್ತಿ
ಆಜ್ಞೆ ಮಾಡಿದವ ಇನ್ನೊಬ್ಬ!

ಯಾರನ್ನು ದೂರಲಿ ನಾನು?
ಮರ ಕಡಿಸಬೇಕು ಎಂದವನನ್ನೇ?
ಮರ ಹಳತಾಯಿತು, ಬೀಳಬಹುದು ಎನ್ನುವವನನ್ನೇ!
ಮರದ ಎಲೆಗಳು ಕಸ ಎಂದು ಜರುಗಿದವನನ್ನೇ!
ಹಳೆ ಮರವ ಕತ್ತಸರಿಸಿ ಎಂದು ಆಜ್ಞೆ ಕೊಟ್ಟವನನ್ನೇ?
ಹೊಟ್ಟೆ ಪಾಡಿನ ಬದುಕಿಗಾಗಿ ನನ್ನ ಕತ್ತರಿಸಿದವನನ್ನೇ?
ನನ್ನ ಮಾರಿ ಹಣ ಪಡೆದು ಸಾರಾಯಿ ಕುಡಿದವನನ್ನೇ?
ನನ್ನ ಬೆಂಕಿಯಿತ್ತು ಉರಿಸಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸಿದ ತಾಯನ್ನೇ?
ನನ್ನಾಸರೆಯಲ್ಲೇ ಬೆಳೆದು ನನಗೆ ಎರಡು ಬಗೆದವನನ್ನೇ?

ಸಾಯಿಸಿಬಿಟ್ಟರು ನನ್ನ!
ನಾ ಮುದುಕ! ನಾ ಹಳೆ ಮರ!
ನನ್ನಿಂದ ಪ್ರಯೋಜನವಿಲ್ಲ!
ನಾ ಬದುಕಿದ್ದರೂ ಆದಾಯ ಇಲ್ಲ!
ತುಂಡು ತುಂಡಾಗಿ ಕತ್ತರಿಸಿ!
ಮನವ ಛಿದ್ರ ಛಿದ್ರವಾಗಿಸಿ
ದೇಹದ ಹಾಗೆಯೇ!
@ಹನಿಬಿಂದು@
19.08.2022