ಸೋಮವಾರ, ಆಗಸ್ಟ್ 30, 2021

ಮುದ್ದು ಮಾಧವ

ಮುದ್ದು ಮಾಧವ

ಮುದ್ದು ಮಾಧವ
ಕದ್ದು ನುಂಗಿದ
ಪೆದ್ದನಂತೆ ಅಮ್ಮನೊಡನೆ
ಸದ್ದಿಲ್ಲದೆ ಓಡಿದ

ಬೆಣ್ಣೆ ಕದಿಯುತ
ಸನ್ನೆ ಮಾಡಿ
ಕನ್ಯೆಯರ ಕೂಡಿ
ಕೆನ್ನೆ ಕೆಂಪಾಗಿಸಿ..

ಕಳ್ಳ ನೋಡಿ
ಸುಳ್ಳ ಹೇಳುತ
ಗಲ್ಲ ಹಿಡಿದು
ಮೆಲ್ಲ ನಡೆಯುತ

ವಿಶ್ವ ಬಾಯಲಿ
ಪರ್ವ ಕಾಲದಿ
ಗರ್ವವಿಲ್ಲದೆ
ಸರ್ವರೊಡನೆಯೂ

ಜ್ಞಾನ ವಿದ್ಯೆಯ
ಮಾನ ಪ್ರಾಣವ
ಕೋಣನಂತಿಹ ಎನಗೆ
ಜಾಣ ಪಾಲಿಸೋ ನಿತ್ಯವೂ..

ಭಜಿಪೆ ನಿನ್ನನೇ
ಸುಗಿಪೆ ನಿತ್ಯವೂ
ಮನದಿ ಭಕ್ತಿಯ
 ಬೇಳೆಸೋ ಮಾಧವ..
@ಪ್ರೇಮ್@
30.08.2021

ಗುರುವಾರ, ಆಗಸ್ಟ್ 12, 2021

ವಿಮರ್ಶೆ

ಹಸಿರೇ ಉಸಿರು ಎಂಬ ನಿತ್ಯ ಓದುವ ಸಾಲಿನ ಅನಾವರಣ...

ಶ್ರೀಮತಿ ಲತಾಮಣಿ  ಎಂ.ಕೆ ಅವರ ಕವನ ಸಂಕಲನ ವಸಂತ ಗಾನ ದ ಎಲ್ಲಾ ಕವನಗಳೂ ಅನುಭವಿಸಿಕೊಂಡು  ಓದುವುದಕ್ಕೆ ತುಂಬಾ ಸುಂದರವಾಗಿವೆ. ನಾನು ಪರಿಸರದ ಮೇಲೆ ಅತೀವ ಕಾಳಜಿ ಇರುವವಳಾದ ಕಾರಣ ನನ್ನ ಇತಿಮಿತಿಯಲ್ಲಿ ಓದುಗಳಾಗಿ '... ಉಸಿರು' ಎಂಬ ಕವನದ ಬಗ್ಗೆ ಒಂದೆರಡು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುವೆ. 

ಎಲ್ಲಾ ಜೀವಿಗಳಿಗೆ ಹಸಿರೇ ಉಸಿರಾಗಿರುವ ನಮ್ಮ ಜಗದಲಿ ಇಂದು ಮನುಜರಾದ ನಾವು ಹಸಿರ ನಾಶಗೊಳಿಸಿ ನಮ್ಮ ಸ್ವಾರ್ಥಕ್ಕೆ ಬಳಸಿ, ಎಲ್ಲಾ ಜೀವಿಗಳ ನಾಶಕ್ಕೆ ಕಾರಣ ಮಾನವ. ಅವನಿಗೆ ಪ್ರಶ್ನಿಸುವ ಬದಲು ಹಸಿರಿಗೇ ಪ್ರಶ್ನಿಸುವ ಕವನವಿದು. ವ್ಯಕ್ತೀಕರಣ ಅಥವಾ ವ್ಯಕ್ತಿಚಿತ್ರ ಬಿಂಬಿತ ಕಾವ್ಯ ಪ್ರಕಾರವೂ ಆದ ಈ ಕವನ ಮನುಜನ ಇಂದಿನ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲುವ ಹಾಗಿದೆ. 

ಹಸಿರಿನೊಡನೆಯೇ ಕವಯತ್ರಿ ನೀನೇಕೆ ಕಳೆದು ಹೋದೆ ಎಂಬುದಾಗಿ ಪ್ರಶ್ನಿಸುವ ಸನ್ನಿವೇಶ ಕರುಳು ಹಿಂಡುತ್ತದೆ. ಹಿರಿಯರು ಸಾವನ್ನಪ್ಪಿದ್ದಾಗ ಮಕ್ಕಳು "ನೀ ನನ್ನ ಬಿಟ್ಟು ಏಕೆ ಹೋದೆ?" ಎಂದು ಕೇಳುವ ಹಾಗಿದೆ ಈ ಸಾಲು.

ಪಲ್ಲವಿ ಪ್ರಶ್ನೆಯಾದರೆ ಚರಣ ಹೊಗಳುವಿಕೆ. ಅಲ್ಲಿ ಪರಿಸರದ ಸಾರವನ್ನು ಎತ್ತಿ ಹಿಡಿಯಲಾಗಿದೆ. ವ್ಯಕ್ತಿಚಿತ್ರ ಇಲ್ಲೂ ಬಿಂಬಿತವಾಗಿದೆ . 

ಮೂರನೇ ಚರಣದ  ಸಾಲುಗಳು ತನ್ನ ತಪ್ಪನ್ನು ಮಾನವ ಒಪ್ಪಿಕೊಳ್ಳುವಂತೆ ಆಗಿದೆ. 

ತನ್ನ ನಾಲ್ಕನೇ ಚರಣದಲ್ಲಿ ಕವಿ ತನಗೂ ತನ್ನಂತಿರುವ ಮಾನವರಿಗೂ ನಮ್ಮ ಹೇಯ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.

ಅಂತರ್ಜಲ ಬರಿದಾಗಿರುವ ಬಗ್ಗೆ ಬೇಸರ ಪರಿಸರದ ಹಸಿರಿನ ಕಾಳಜಿಯನ್ನು ತೋರಿಸುತ್ತದೆ. ಬರಿದಾಗಿ ಅನ್ನಲು ಹೋಗಿ ಬರಡಾದ ಅಂದಿರ ಬಹುದೇ ಅನ್ನಿಸಿತು ಒಮ್ಮೆ. 

ಹಸಿರೇ ಉಸಿರು, ಉಸಿರೇ ಹಸಿರು ಎಂಬ ಚಿತ್ರ ಕಾವ್ಯ ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ಎಲ್ಲಾ ಚರಣಗಳಲ್ಲಿ ಪುನರಾವರ್ತಿತವಾಗಿ ಕವನದ ಅಂದವನ್ನು ಹೆಚ್ಚಿಸಿದರೆ, ಅಂತ್ಯಪ್ರಾಸ ಖುಷಿ ಕೊಡುತ್ತದೆ. ನೈಜ ಸನ್ನಿವೇಶದ ಪ್ರತೀಕ ಈ ಕವನ. 

ಒಟ್ಟಿನಲ್ಲಿ ಕವಯತ್ರಿಯವರ ಪರಿಸರವನ್ನು ಪ್ರೀತಿಸುವ ಕವನ ಅಂದವಾಗಿದ್ದು, ಚೊಕ್ಕವಾಗಿ ಮೂಡಿ ಬಂದು ಜನರ ಕಣ್ ತೆರೆಸುವಂತಿದೆ, ನಾವೂ ಪರಿಸರ ಹಸಿರು ಉಳಿಸೋಣ ಎನ್ನುವಂತಿದೆ. 
@ಪ್ರೇಮ್@
11.08.2021

ಗುರುವಾರ, ಜುಲೈ 29, 2021

ನಾನು ನಾನಲ್ಲ

ನಾನು ನಾನಲ್ಲ

ನಾನು ನಾನಲ್ಲ
ನೀನು ನೀನಲ್ಲ
ನಿನ್ನೊಳಗಿನ ನೀನಿಗೆ ಜೀವ 
ತುಂಬಿದ ದೇಹ ನೀನು
ನನ್ನೊಳಗಿನ ನಾನೆಂಬ 
ಆತ್ಮದ ಹಕ್ಕುದಾರ ನೀನೇ!

ನಾನೂ ನೀನೇ
ನೀನೂ ನೀನೇ
ಅವನೂ ನೀನೇ
ಅವಳೂ ನೀನೇ
ಅದೂ ನೀನೇ
ಇದೂ ನೀನೇ
ಮತ್ತೆ ನಾನು ಯಾರು?

"ನಾನು" ಹೋದರೆ ತಿಳಿವುದು
ನಾನಾರೆಂಬ ಪ್ರಶ್ನೆಗುತ್ತರ!
ಮೊದಲು ತಿಳಿಸಿದ ಕನಕ
ನಿಮಗಿದೋ ನಮಸ್ಕಾರ!

ನನ್ನೊಳಗಿನ ನಾನು
ಹೋಗುವವರೆಗೆ ನಾ ಬೆಳೆಯಲಾರೆ
ನಿನ್ನೊಳಗೆ ಸೇರುವ ಕಾಲ
ಬರುವವರೆಗೆ  ನಾ ಸಾಯಲಾರೆ!

ನಾನು ನಾನು ಹೇಗೋ
ಹಾಗೆಯೇ ನಾನು ನೀನು ಕೂಡಾ
ನೀನು ಸತ್ಯ ಹೇಗೋ
ಹಾಗೆಯೇ ನಾನು 
ಮಿಥ್ಯ ಕೂಡಾ
ನೀನು ನಿತ್ಯ!
ನನ್ನೊಳಗೆ ಪಿತ್ತ!

ನೀನು ಬೆಳೆಸಿದಂತೆ
ನಾ ಬೆಳೆದೆ
ನಿನ್ನ ನೋಡಿದರೂ 
ನಂಬದೆ ಬೆಳೆದೆ
ಸತ್ಯವರಿಯದೆ!
ಅಂತರಾತ್ಮ ತೆರೆಯದೆ!
ಕದ ತಟ್ಟಿ ನಾನೇ ಮೇಲೆ ಎಂದೆ
ಬಳಿಕ ತಿಳಿಯಿತು
ನೀ ಮೇಲಿನವನೆಂದು
ಆಗ ನಾನು ಸಿದ್ಧವಾಗುತಲಿದ್ದೆ
ನಿನ್ನೆಡೆಗೆ ಮೇಲೆ ಸಾಗಲು!
@ಪ್ರೇಮ್@
29.07.2021

ಮಂಗಳವಾರ, ಜುಲೈ 27, 2021

ಕುಬುದ್ಧಿ ಗೆಲ್ಲುವುದೆ?

ಕುಬುದ್ಧಿ ಗೆಲುವುದೆ?

ಹುಟ್ಟಿನಿಂದಲೂ ಸಾವಿನವರೆಗೂ
ಕೆಟ್ಟದ್ದೇ ಮಾಡುತ್ತಾ ಬಂದ ದುರ್ಯೋಧನ!
ಪಾಂಡವರಿಗೆ ಸಿಗಬೇಕಾದ ರಾಜ್ಯ ಕೊಡದೆ!
ಮೋಸದಿ ಸೋಲಿಸಿ, ಪತ್ನಿಯ ಹಂಗಿಸಿ
ಇದ್ದ ರಾಜ್ಯವ ಕಿತ್ತುಕೊಂಡು, ಕಾಡು ಭೂಮಿಯ ಕೊಟ್ಟು!

ಆದರೂ ಎದೆಗುಂದದೆ ದೇವರ ಕೃಪೆಯಲ್ಲಿ ಬದುಕಿದರು ಐವರು
ಅವಮಾನ ಅಪಮಾನ ಎಲ್ಲವ ಸಹಿಸಿ
ಅರ್ಧ ರಾಜ್ಯ ಬೇಡ ಒಂದು ಹಳ್ಳಿಯಾದರೂ ಕೊಡೆನುತ ವಿನಂತಿಸಿದರು
ನರಬಲವ ಉಡುಗಿಸಿದ, ಮಾತಲ್ಲೇ ಕಟ್ಟಿ ಹಾಕಿದ
ಸತ್ಯ ಧರ್ಮವ ಪರೀಕ್ಷಿಸಿದ
ತಾ ಮೆರೆದ! ಜಗತ್ತಿಗೆ ಹಠವ ಸಾರಿದ
ಸರ್ವರ ದೃಷ್ಟಿಯಲ್ಲಿ ಹಠಕ್ಕೆ ಸಾರಥಿಯಾಗಿ ನಿಂತ
ತಾನೇ ಹೀರೊ ಆದ!
ಅವ ಮಾಡಿದ್ದೇ ಸರಿ ಎಂದರು ಜನರು!
ಅವನ ಹೊಗಳಿ ಅಟ್ಟಕ್ಕೇರಿಸಿದರು!

ಹೇಳಿ, ಈ ಜಗತ್ತಿನಲ್ಲಿ ಹೀರೋ ಎನಿಸಿಕೊಳ್ಳಲು ಕೆಟ್ಟದ್ದನ್ನೇ ಮಾಡಬೇಕೇ?
ತನ್ನ ಹಠವ ಸಾಧಿಸಲು ಪರರ ಬಲಿ ಪಡೆದವನೆ ಯೋಗ್ಯನೆ?
ಪರರ ನೋಯಿಸಿ ಬದುಕ ಕಟ್ಟಿದ ಹಟಮಾರಿಯೇ ಸರ್ವೋತ್ತಮನೆ?
ಸತ್ಯ, ಧರ್ಮ, ನ್ಯಾಯಪರತೆಗೆ ಬೆಲೆಯೇ ಇಲ್ಲವೇ?
ಹೀರೋಗಳ ಮರೆತು ವಿಲನ್ ಗಳೆ ದೇಶವಾಳುವ ದೇಶವೇ ನಮ್ಮದು?
ಸತ್ಯವಂತರಿಗೆ ಕಾಲವೇ ಇಲ್ಲವೇ ಇಂದು?
ದುಡ್ಡಿದ್ದವ, ಶಕ್ತಿ ಇದ್ದವ, ಆಸ್ತಿವಂತನೇ ದೊಡ್ಡಪ್ಪನೆ!

ಅತ್ಯಾಚಾರ, ಕೊಲೆ, ಸುಲಿಗೆ, ಅನ್ಯಾಯ, ಅನಾಚಾರ, ದಬ್ಬಾಳಿಕೆ, ದೂರ್ತತನಕ್ಕೆ,ನೋವು ಕೊಟ್ಟು ನಗುವ ಅಟ್ಟಹಾಸಕ್ಕೆ ಕೊನೆಯೇ ಇಲ್ಲವೇ?
ಅಂಥವನ ಹಿಂದೆಯೇ ಬಾಲ ಮುದುರಿ ಓಡಾಡುವ ಜನಕ್ಕೆ, 
ಅವನನ್ನೇ ದೇವರೆಂದು ಆರಾಧಿಸುವ ಕುಲಕ್ಕೆ , ಈ ಅಂಧಕಾರಕ್ಕೆ ಕೊನೆಯೆಂದು?
ಕೆಟ್ಟದು ಮಾಡಿ ಗೆದ್ದವನೇ ನಾಯಕನೇ?
@ಪ್ರೇಮ್@
28.07.2021

ಭಾನುವಾರ, ಜುಲೈ 25, 2021

ಆಷಾಢದಲ್ಲಿ ಒಂದು ದಿನ

ಆಷಾಡದೊಂದು ದಿನ

ಹೋಗುತ್ತಲಿದ್ದೆ ರಸ್ತೆಯ ಮೇಲೆ ನಡೆಯುತಲಿ
ಮನದಲಿ ಬೇರೆಯೇ ಲೀಲೆಯ ತಾನು ಗುನುಗುತಲಿ
ದಾರಿಯ ಉದ್ದಕೂ ನಾಯಿಯ ಹಿಂಡನು ನೋಡುತಲಿ
ಹೆಣ್ಣನ್ನು ಕೆದಕುವ ಗಂಡಿನ ದಂಡಿನ ಹಾಗಿರುತಲಿ

ಒಂಟಿ ಹೆಣ್ಣದು ರಸ್ತೆಯಲ್ಲಿದ್ದರೆ ಮಾನವ ವರ್ತನೆ ಹೀಗೆಯೇ ಅಲ್ಲವೇ?
"ತನಗೂ ಒಮ್ಮೆ ಸಿಗಲಿ" ಎನುತ ಕಾಲೆತ್ತಿ ಬರುವ ಗಂಡಿನ ಮದವೇ!
ಅಷಾಡವಾದರೆ ಶ್ವಾನದ ಹಿಂಡದು ವಕ್ಕರಿಸುವುದು
ನಾ ಮುಂದೆ ತಾ ಮುಂದೆ0ದು ಸದಾ ಬೀಗುವುದು!

ಜಗಳದಿ ತನ್ನ ಕಾರ್ಯವ ಮಾಡಲು ಹಾತೊರೆಯುವುದು
ಜನಗಳ ಹಾಗೆ ಗಲಾಟೆಯ ಮಾಡುತ ಮೆರೆಯುವುದು
ಒಂದರ ಮೇಲೊಂದು ಕೋಪದಿ ಹಾರಾಡುವುದು!
ತನ್ನ  ಮಂತ್ರಿಗಿರಿ ಕುರ್ಚಿಗೆ ತಾನೇ ಹೋರಾಡುವುದು!
@ಪ್ರೇಮ್@
26.07.2021

ಶನಿವಾರ, ಜುಲೈ 24, 2021

ಪ್ರಶಸ್ತಿ ಬೇಕೆ?

ಪ್ರಶಸ್ತಿ ಬೇಕೆ?

ಅವರವರ ಭಾವಗಳು ಅವರಿಗೆ ಮಿಗಿಲು
ಭಾವ ಬಳ್ಳಿಯ ಕೂಸು ತಾನೇ ಮುಗಿಲು
ಭಾವ ತೀವ್ರತೆಯ ಅಳೆಯಲು ಮಾಪನವಿದೆಯೇ
ಕಾವ್ಯ ಕವನ ಸ್ಪರ್ಧೆಗಳಿಗೆ ಅರ್ಥವಿದೆಯೇ?

ಪದ ಬಳಕೆ ಸಂಪತ್ತು ಮನಸ್ಸಿನಾಳದಲಿ
ಸದಾ ಬರೆವ ಕವಿಗದು ಹೃದಯದಲಿ
ಕದ್ದು ಸಾಲುಗಳ ಸೇರಿಸಿ ತಾನೇ ಗೆದ್ದ ಭರದಲಿ
ಸರ್ವೆಡೆ ಹಂಚಿದರು ಕರಪತ್ರವ ಸಂತಸದಲಿ..

ಭಾವ ಬರಿದಾಗದು ಬಹುಮಾನ ಬರದ ಬೇಸರಕೆ
ಕವಿಯು ಬರೆವುದು ತನ್ನ ಮನದ ಸಂತಸಕೆ
ಹಾರ ತುರಾಯಿ ಕುರ್ಚಿಯ ಆಸೆಯಿಂದಲ್ಲ
ಭಾವಗಳು ಸ್ಪುರಿಸೆ ಯಾವುದೂ ಬೇಕಿಲ್ಲ..

ಸಮಾಜ ತಿದ್ದುವ ಪ್ರೀತಿ ಉಕ್ಕಿಸುವ
ನಲಿವ ಹೇಳುವ ನೋವು ಹಂಚುವ
ತನ್ನ ಪದಗಳ ಓದುಗರಿಗೆ ತಲುಪಿಸುವ
ಓದಿ ಚಪ್ಪಾಳೆ ತಟ್ಟಿದೊಡೆ ಸಿಗುವ ಸಂತಸವ

ಕವಿಗೇನು ಬೇಕು ಮತ್ತೆ ಓದುಗ ಮನಗಳ ಹೊರತು
ತನ್ನ ಭಾವವ ಪರರಿಗೆ ಹಂಚಿದೊಡೆ ಒಳಿತು
ಸ್ಪರ್ಧೆ ಬಹುಮಾನಕೆ ಬಾಗದು ಪದ ಸಂಪತ್ತು
ಭಾವ ಬಳ್ಳಿಗೆ ಕವನವಾದ ಗಮ್ಮತ್ತೇ ಕಿಮ್ಮತ್ತು!
@ಪ್ರೇಮ್@
25.07.2021

ನವ ಭಾವ

*ನವ ಭಾವ*

ಓದದೇ ಬರೆಯಲದು ವ್ಯರ್ಥವೆನುವರು ಜನರು
ಓದಿ ಬರೆದಾಗ ಸಾಹಿತ್ಯ ತೂಕವಂತೆ
ಬದುಕ ಪ್ರತ್ಯಕ್ಷ ಅನುಭವವದು ಓದಿಗಿಂತಲೂ ಶ್ರೇಷ್ಠ
ಬದುಕ ಓದಿದವ ಬರೆಯಬಲ್ಲ ಗಟ್ಟಿ
ಬರವಣಿಗೆ ಪದಗಳ ಒಟ್ಟು ಮುದ್ದೆಯಲ್ಲ
ಅದು ಬಾಳಿನ ಅನುಭವದ ಚಿನ್ನದ ಗಟ್ಟಿ
ಓದಿಗಿಂತಲೂ ಹೆಚ್ಚು ಅನುಭವದ ಸಾರ
ನೋವುಂಡ ಜೀವಕೆ ಬಾರದೆ ಪದಗಳ ರಾಶಿ
ಮನದ ನೋವನು ಬಿತ್ತಲು ಗದ್ದೆ ಸಾಹಿತ್ಯ ಕ್ಷೇತ್ರ
ತನು ಮನವ ಹಸನುಗೊಳಿಸಿ..
ಮತ್ತೆ ಮುಂದಿನ ಬದುಕಿಗೆನ್ನ ಒರೆ ಹಚ್ಚಿ ಸರಿಪಡಿಸೆ
ನವ ಭಾವ ಹುಟ್ಟುತ ಮಾಡಿಹುದು ಮೋಡಿ
ನೋವಿನಲೆಯಲು ಹೊಸ ಭಾವ ಹುಟ್ಟಲದು
ಕಾರಣವು ಸಾಹಿತ್ಯದೊಲವ ಮಳೆಯು
ಹನಿ ಹನಿಯ ಬೀಳುತಿರೆ ತುಂಬುವುದು ಸಾಗರವು
ಬದುಕ ನಾವೆಯು ಅಲ್ಲಿ ತೇಲುತಿರಲಿ
ಉದಕದಂತೆಯೆ ಬಣ್ಣರಹಿತ ತಿಳಿಯಾದ ಕ್ಷಣಗಳು ಬರಲಿ
ಮುತ್ತು ಆಕಾಶದಿಂದುದುರಿದಂತೆ ಹೊಸ ಹೊಸ ಭಾವಗಳು ಚಿಮ್ಮಿ ಬಂದು ಬಾಳು ಬೆಳಗಲಿ...
@ಪ್ರೇಮ್@
25.07.2021