ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -117
ನಮ್ಮ ಮಕ್ಕಳನ್ನು ನಾವು ತುಂಬಾ ಚೆನ್ನಾಗಿ ಸಾಕುತ್ತಿದ್ದೇವೆ. ಕಾರಣಗಳು ಹಲವು. ಮೊದಲನೆಯದು ನಾನು ಕಷ್ಟ ಪಟ್ಟಿದ್ದು ಅದು ನನಗೇ ಸಾಕು, ನಮ್ಮ ಮಗುವಿಗೆ ಬೇಡ ಎಂದೋ, ನಮ್ಮ ಮಗು ಸಿರಿವಂತರ ಮಕ್ಕಳ ಹಾಗೆ ಬೆಳೆಯಲಿ ಎಂದೋ, ನಮ್ಮ ಮಗು ಯಾರಿಗಿಂತ ಏನು ಕಡಿಮೆ ಎಂದೋ, ಮಕ್ಕಳು ತಪ್ಪು ಮಾಡದೇ ಇನ್ಯಾರು ಮಾಡುವರು ಎಂದೋ, ಮಗು ಅಲ್ವಾ ಇರಲಿ, ಎಂದು ಅದು ಕೇಳಿದ್ದನ್ನೆಲ್ಲಾ ತೆಗೆದು ಕೊಟ್ಟು ಅವರ ಮೆದುಳನ್ನು ನಿಷ್ಕ್ರಿಯಗೊಳಿಸುವವರು ನಾವೇ.
ಕಾಲ ಬದಲಾಗಿದೆ,ಡಿಜಿಟಲ್ ಪ್ರಪಂಚ ಚಿಕ್ಕದಾಗಿದೆ,ಮೊಬೈಲ್ ನಲ್ಲಿ ಕೆಲಸ ಮಾಡಲು ಮಕ್ಕಳು ಹಿರಿಯರಿಗಿಂತ ಹೆಚ್ಚು ಕಲಿತಿದ್ದಾರೆ. ಇನ್ನು ಹಾಡು, ನೃತ್ಯ, ಭಾಷಣ, ಸಂಭಾಷಣೆ, ನಟನೆ ಎಲ್ಲದರಲ್ಲೂ ಹಿರಿಯರನ್ನು ಮೀರಿಸಿ ಬೆಳೆದಿದ್ದಾರೆ ಮಕ್ಕಳು. ಹಾಗಿರುವಾಗ ಕಲಿಸುವ ವಿಧಾನವೂ ಬದಲಾಗ ಬೇಕು ಎಂದು ಡಿಜಿಟಲೀಕರಣಗೊಳಿಸಿ ಆಯಿತು. ಶಿಕ್ಷಕರ ಮಾತನ್ನೇ ಕೇಳದ ಮಕ್ಕಳು ಎಷ್ಟು ಹೊತ್ತು ಸ್ಕ್ರೀನ್ ಅಥವಾ ಕಂಪ್ಯೂಟರ್ ನೋಡಿಯಾರು? ಅದು ಕೂಡಾ ನೂಡಲ್ಸ್ ತಿನ್ನುವ ಮಕ್ಕಳಿಗೆ ಗಂಜಿ ಕೊಟ್ಟ ಹಾಗೆಯೇ. ಈಗಿನ ಮಕ್ಕಳಿಗೆ ಮಾಡಿ ಕಲಿ ಎನ್ನುವ ಗಾಂಧೀಜಿ ಅವರ ಕೆಲಸ ಆಧಾರಿತ ಕಲಿಕೆ ಬೇಕು. ಬರೀ ಓದು, ಬರಹದ ಹೊರತಾಗಿ ಬೇರೇನೂ ಇಲ್ಲದ ಶಿಕ್ಷಣ ಬೋರಿಂಗ್ ಅವರಿಗೆ. ಪ್ರೊಜೆಕ್ಟ್ ವರ್ಕ್ ಬೇಗ ಮುಗಿಸುವರು. ಇದಕ್ಕೆ ಬೆಸ್ಟ್ ಅಂದರೆ ಡ್ರಾಯಿಂಗ್, ಪೈಂಟಿಂಗ್, ಪಾಟರಿ, ನೂಲುವುದು, ಮರಗೆಲಸ, ಎಲೆಕ್ಟ್ರಿಕಲ್ ಕೆಲಸಗಳು, ಪ್ಲಂಬಿಂಗ್ , ಆರ್ಕಿಟೆಕ್ಚರ್ ಇತ್ಯಾದಿ.
ಮಕ್ಕಳ ಗಮನ ಯಾವುದರ ಮೇಲಿದೆ ಎಂಬ ಗಮನ ಪೋಷಕರಿಗೆ ಇಲ್ಲವಾದರೆ ಮಕ್ಕಳು ಬೇಡದ ವಿಷಯಗಳಿಗೆ ತಮ್ಮ ಗಮನ ಕೊಟ್ಟು ಜೀವನ ಹಾಳು ಮಾಡಿಕೊಳ್ಳುವುದು ಗ್ಯಾರೆಂಟಿ. ಪೋಷಕರು ಮಕ್ಕಳಿಗೆ ಬೇಕು ಬೇಕೆಂದುದನು ಅಂಗಡಿಯಿಂದ ಕೊಂಡು ತಂದು ಕೊಟ್ಟರೆ ಅವರಿಗೆ ಕಷ್ಟದ ಪರಿಸ್ಥಿತಿ ಹೇಗೆ ತಾನೇ ಅರ್ಥ ಆದೀತು? ತರಗತಿಯಲ್ಲಿ ಪ್ರತಿ ನೋಟ್ ಪುಸ್ತಕದ ಪುಟ ಹರಿಯುವಾಗ "ಇದರಲ್ಲಿ ನನ್ನ ತಂದೆಯ ಬೆವರಿನ ಹಣವಿದೆ" ಎಂದು ಅರಿತ ಮಗ ಅಥವಾ ಮಗಳು ಮತ್ತೆ ಇನ್ನೆಂದೂ ಪುಟವನ್ನು ಹರಿದು ಉಂಡೆ ಕಟ್ಟಿ ಕಸದ ಡಬ್ಬಿಗೆ ಬಿಸಾಕುವಾಗ ಯೋಚನೆ ಮಾಡುತ್ತಾರೆ. ಆದರೆ ಆ ಆಲೋಚನೆಯನ್ನು ಮಕ್ಕಳಲ್ಲಿ ಬಿತ್ತುವಲ್ಲಿ ನಾವು ವಿಫಲರಾಗಿದ್ದೇವೆ ಅಲ್ಲವೇ?
ಮಕ್ಕಳನ್ನು ನಾವು ಹೋಟೆಲ್ ಗೆ ಊಟಕ್ಕೆ ಕರೆದುಕೊಂಡು ಹೋಗುತ್ತವೆ. ಅವರಿಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡ್ತೇವೆ. ಅವರು ಸ್ವಲ್ಪ ತಿಂದು 'ಸಾಕು ' ಎಂದ ಕೂಡಲೇ ಆಯಿತು ಎಂದು ಒಪ್ಪಿ ಬಿಲ್ ಕೊಟ್ಟು ಬರುತ್ತೇವೆ. ಈಗಿನ ಅಮ್ಮಂದಿರಿಗೆ ಡಯೆಟ್ ರೋಗ ಶುರು ಆಗಿರುವ ಕಾರಣ ಮಕ್ಕಳ ಊಟ ಅವರು ತಿನ್ನಲಾರರು. ಮತ್ತೆ ಆಹಾರದ ಮಹತ್ವ ಹೆಚ್ಚಿನವರಿಗೆ ತಿಳಿದಿದ್ದರೆ ತಾನೇ? ಅದು ಹಣದ ಮದವೋ, ಸಿರಿವಂತಿಕೆಯ ಅಮಲೋ ಗೊತ್ತಿಲ್ಲ, ಅರ್ಧ ತಿಂದು ಬರುವುದೇ ಸ್ಟೈಲ್ ಅಂದುಕೊಂಡ ಅದೆಷ್ಟೋ ಜನ ಊಟ ಹಾಳು ಮಾಡಿ ಅದೆಷ್ಟೋ ಜನರ ಹೊಟ್ಟೆಗೆ ಕಲ್ಲು ಹಾಕುತ್ತಿದ್ದಾರೆ. ಒಂದು ತರಕಾರಿಯನ್ನು ಬೆಳೆಸಿ ಸಾರಿಗೆ ಹಾಕುವವರೆಗಿನ ಕಷ್ಟ ರೈತನಿಗೆ ಗೊತ್ತು. ಗಿಡಕ್ಕೆ ನೀರುಣಿಸಿ, ಗೊಬ್ಬರ ಹಾಕಿ, ಪ್ರತಿದಿನ ಪೋಷಣೆ ಮಾಡಿ, ಗಮನಿಸಿ, ಕೀಟಗಳಿಂದ ರಕ್ಷಿಸಿ, ಜೋಪಾನವಾಗಿ ಕಿತ್ತು ಗಾಡಿಯಲ್ಲಿ ಸಾಗಿಸಿ ಅಂಗಡಿಗೆ ತಲುಪಿಸುವ ಕಾರ್ಯ ಸುಲಭದ್ದಲ್ಲ. ಇದನ್ನೆಲ್ಲ ಮಕ್ಕಳಿಗೆ ತಿಳಿಸಿ ಹೇಳಿದರೆ ಅವರು ಊಟ ಮಾಡುವಾಗ ರೈತರ ಬಗ್ಗೆ ಯೋಚಿಸುತ್ತಾರೆ. ಆಗ ಊಟ ವೇಸ್ಟ್ ಮಾಡಲಾರರು.
ಒಬ್ಬರ ಬಳಿ ಮಕ್ಕಳು ಮತ್ತೊಬ್ಬರು ಮಕ್ಕಳು ಜಗಳ ಮಾಡಿಕೊಳ್ಳುತ್ತಾರೆ. ಹೆಚ್ಚು ಬೈಗುಳದ ಪದಗಳು "ನಿನ್ನಪ್ಪ, ನಿನ್ನಜ್ಜಿ "ಎಂದೇ ಇರುತ್ತವೆ. ಆ ರೀತಿ ತಂದೆ ಹಾಗೂ ಹಿರಿಯರಿಗೆ ಬೇಡದ ಮಾತುಗಳನ್ನು ಹೇಳದೆ ಪ್ರತಿಯೊಬ್ಬರ ಹಿರಿಯರಿಗೂ ಗೌರವ ಕೊಡಬೇಕು ಎನ್ನುವ ಭಾವ ಅವರಲ್ಲಿ ಬಂದಲ್ಲಿ ಅವರು ಯಾವ ಹಿರಿಯರಿಗೂ ಎದುರಾಗಿ ಏನೂ ಮಾತನಾಡಲಾರರು. ಹಿರಿಯರು ಮಕ್ಕಳ ಎದುರು ಗಲಾಟೆ ಮಾಡಿಕೊಂಡು ತಮ್ಮ ಕೋಪ ಕಂಟ್ರೋಲ್ ಮಾಡಲು ಸಾಧ್ಯ ಆಗದೇ ಇದ್ದು, ಬೇಡದ ಪದಗಳನ್ನು ಅವರ ಮುಂದೆ ಬಳಸಿದರೆ ಅವುಗಳನ್ನೇ ಮಕ್ಕಳು ಬಳಸುವರು. ಕನ್ನಡ ಚಿತ್ರರಂಗವೂ ಅಷ್ಟೆ ಕೆಟ್ಟದಾಗಿ ಹೋಗಿದೆ, ಈ ಕೆಟ್ಟ ಪದಗಳ ಬಳಕೆಯಲ್ಲಿ. ಎಷ್ಟೇ ಕಟ್ ಮಾಡಿದರೂ ಬೇಡದ ಪದಗಳ ಬಳಕೆ, ಕುಡಿತ, ಕುಣಿತ, ಹೆಣ್ಣು ಮಕ್ಕಳೊಡನೆ ಅಸಭ್ಯ ವರ್ತನೆ ಇಂದಿನ ಸಿನೆಮಾಗಳಲ್ಲಿ ಸರ್ವೇ ಸಾಮಾನ್ಯ.
ಚಿಕ್ಕ ಮಕ್ಕಳು ಇದನ್ನು ನೋಡಿ ಬೇಗನೆ ಅದೇ ಜೀವನ, ನಾವೂ ಹಾಗೆಯೇ ಮಾತನಾಡಬೇಕು ಎಂದು ಅಂದುಕೊಂಡು ಅಲ್ಲಿದ್ದ ಭಾಷೆ , ಪದಗಳ ಬಳಕೆಗೆ ಪ್ರಾರಂಭಿಸುತ್ತಾರೆ. ಕೆಲವೊಂದು ಧಾರಾವಾಹಿಗಳ ನೋಡಿ ಹಲವಾರು ಮಹಿಳೆಯರು ಆಸ್ತಿಗಾಗಿ ತಮ್ಮ ಮನೆ ಒಡೆದಂತೆ. ಮಾಧ್ಯಮಗಳು ಮಕ್ಕಳ ಮೇಲೆ ಬಹಳ ಪರಿಣಾಮ ಬೀಳುತ್ತವೆ. ನಾವೇ ಯೂ ಟ್ಯೂಬ್ ತೋರಿಸಿ ಊಟ ಮಾಡಲು ಕಲಿಸುತ್ತೇವೆ. ತಂದೆ ತಾಯಿಯರು ತಪ್ಪುವುದು ಇಲ್ಲೇ. ಮಗು ಸುಮ್ಮನಿರಲು ಅವರ ಕೈಗೆ ಮೊಬೈಲ್ ಕೊಟ್ಟು ಬಿಡುವುದು. ಶಾಲೆಗೆ ಬರುವ ವೇಳೆಗೆ ಅವರು ಮೊಬೈಲ್ ನಲ್ಲಿ ಅದೇನು ಅವರ ವಯಸ್ಸಿಗೆ ಬೇಡವೋ ಅದೆಲ್ಲಾ ನೋಡಿ ಆಗಿರುತ್ತದೆ. ಒಂದನೇ ತರಗತಿಗೆ ಬಂದಾಗ ಗಂಡು ಮಗುವೊಂದು ಒಂದು ಚೀಟಿಯಲ್ಲಿ, ಐ ಲವ್ ಯು ಎಂದು ಬರೆದ ಚೀಟಿಯನ್ನು ಟಾಯ್ಲೆಟ್ ರೂಮಿನಲ್ಲಿ ಇನ್ನೊಂದು ಹೆಣ್ಣು ಮಗುವಿಗೆ ನೀಡುವುದನ್ನು, ಅದನ್ನು ನೋಡಿ ಅದೇ ತರಗತಿಯ ಮತ್ತೊಂದು ಮಗು "ಅದು ಈಗ ಅಲ್ಲ, ನೀನು ಅವಳಿಗೆ ಕಾಲೇಜಿಗೆ ಹೋಗುವಾಗ ಕೊಡಬೇಕು" ಎನ್ನುವುದನ್ನು ನಾನು ನೋಡಿದ್ದೇನೆ.
ಶಾಲೆಯಲ್ಲಿ ಏನೇನು ಒಳ್ಳೆಯ ಗುಣಗಳನ್ನು, ಕಲಿಕೆಯನ್ನು ಕಲಿಯಬೇಕು ಎಂದು ನಾವು ಅಂದುಕೊಳ್ಳುತ್ತೇವೆಯೋ ಅದನ್ನು ಮಕ್ಕಳು ಕಲಿಯುವುದಿಲ್ಲ. ಬದಲಾಗಿ ಏನು ಕಲಿಯಬಾರದು ಅದನ್ನು ಮಾಧ್ಯಮಗಳ ಸಹಾಯದಿಂದ ಬೇಗನೆ ಕಲಿತಿರುತ್ತಾರೆ. ಹುಡುಗಿ, ಮದುವೆ, ಪ್ರೀತಿ ಇದೆಲ್ಲ ಜೀವನದಲ್ಲಿ ಆಟದ ಹಾಗೆ ಎಂದು ಅಂದುಕೊಳ್ಳುತ್ತಾ, ಮುಂದೆ ಅದನ್ನೇ ಮಾಡುತ್ತಾ ಹೋಗುತ್ತಾರೆ. ಪೋಷಕರು ತಮ್ಮ ಗಂಡಾಗಲೀ, ಹೆಣ್ಣಾಗಲೀ ಮಕ್ಕಳನ್ನು ಗಮನಿಸದೆ ಇದ್ದರೆ ಹನ್ನೆರಡು ಹದಿಮೂರು ವರ್ಷದ ಹೆಣ್ಣು ಮಕ್ಕಳು ತಮ್ಮ ಬೆತ್ತಲೆ ಫೋಟೋ ತೆಗೆದು ಅದು ಯಾರಿಗೋ ಪರಿಚಯ ಇಲ್ಲದವರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕಳಿಸಿದ ಸುದ್ದಿಯನ್ನು ನಾವು ಓದುತ್ತೇವೆ! ಗಂಡು ಮಕ್ಕಳು ರಮ್ಮಿ ಯಂತಹ ಆಟಗಳಿಗೆ ತಂದೆ ತಾಯಿಯರ ಬ್ಯಾಂಕ್ ಖಾತೆಯಿಂದ ಹಣ ಹಾಕುವುದು, ಆನ್ ಲೈನ್ ನಲ್ಲಿ ಲಕ್ಷ ಗಟ್ಟಲೆ ಹಣದ ವಸ್ತುಗಳಿಗೆ ಆರ್ಡರ್ ಮಾಡುವುದು ಮತ್ತು ಆ ಹಣ ತಂದೆಯ ಖಾತೆಯಿಂದ ಕಟಾವಣೆ ಆಗುವುದು ಇದೆಲ್ಲ ನಡೆಯುತ್ತದೆ.
ನಾವು ಇಷ್ಟೆಲ್ಲಾ ದುಡಿಯುವುದು ಮಕ್ಕಳಿಗೇ ಆದರೂ ಮಕ್ಕಳನ್ನು ನೋಡಿಕೊಳ್ಳಲು ನಮಗೆ ಸಮಯ ಇಲ್ಲದಷ್ಟು ದುಡಿತ ಅವರ ಬದುಕನ್ನು ಹಾಳು ಮಾಡುತ್ತದೆ. ಇಂದು ಪೋಷಕರು ಮಕ್ಕಳಿಗೆ ಕೊಡ ಬೇಕಾದುದು ಸಮಯ ಮತ್ತು ಪ್ರೀತಿ. ಶಾಲೆಗೆ ಬರುವಾಗ ಹಣ ಕೊಟ್ಟು ಅವನು ಅಂಗಡಿಗೆ ಹೋಗಿ ಬೇಕಾದ್ದು ತಿಂದು, ಯಾರ್ ಯಾರಿಗೋ ತಿನ್ನಿಸಿ ಹಾಳಾಗುವಂತೆ ಮಾಡುವುದು ಕೂಡ ಪೋಷಕರೇ. ಅವರ ಮುದ್ದು ಮುಂದೊಂದು ದಿನ "ನೀ ಕೊಡದೆ ಹೋದರೆ ನಾ ಸಾಯುವೆ" ಎಂಬಲ್ಲಿ ವರೆಗೆ ಕರೆದುಕೊಂಡು ಹೋಗುತ್ತದೆ.
ಅತಿಯಾದ ಮುದ್ದು, ಅತಿಯಾದ ಹೊಗಳಿಕೆ, ಅತಿಯಾದ ಶಿಕ್ಷೆ , ಅತಿಯಾದ ಜಾಲ ತಾಣಗಳ ಬಳಕೆ, ಅತಿಯಾದ ಟಿವಿ ವೀಕ್ಷಣೆ ಯಾವುದೂ ಒಳ್ಳೆಯದಲ್ಲ. ಎಲ್ಲದಕ್ಕೂ ಸಮಯ ಸಂದರ್ಭ ಬೇಕು. 'ಇಂತಿಷ್ಟು ಸಮಯ' ಎಂದು ನಿಗದಿ ಪಡಿಸಿದಾಗಲೇ ಸ್ವಯಂ ಶಿಸ್ತು ಬೆಳೆಯುವುದು. ಇದೆಲ್ಲ ಜವಾಬ್ದಾರಿ ಪೋಷಕರಾದ ನಮ್ಮ ಮೇಲಿದೆ ಅಲ್ಲವೇ? ನೀವೇನಂತೀರಿ?
@ಪ್ರೇಮ್@
05.02.2022