ಶುಕ್ರವಾರ, ಜೂನ್ 16, 2023

ಏಕಾಗಿ

ಏಕಾಗಿ

ಕನಸನು ಕಾಣುತ ಎಲ್ಲೋ ನೋಡುತ
ಚಿಂತಿಸುತ್ತಿರುವೆ ಏಕಾಗಿ?
ಯಾರಿಗೊ ಕಾಯುತ ಏನನೋ ಹುಡುಕುತ
ಕುಳಿತಿರುವೆ ನೀ ಏಕಾಗಿ?

ಏಕಾಂಗಿಯಾಗಿ ಆಲೋಚನೆಯೂ
ನಲ್ಲೆಯ ನೆನಪೇ ನಿನಗಿಂದು?
ಮೋಡದ ಆಟವ ನೋಡಲು ಹೊರಗಡೆ
ಬರಬಾರದೇ ನೀನಿಂದು?

ವಿರಹವ ತಾಳದೆ ಕನಸನು ಕಾಣುತ
ಸುಮ್ಮನೆ ಕುಳಿತಿಹೆ ಏಕಾಗಿ?
ಓಡುತ ಹೋಗಿ ನಲ್ಲೆಯ ನೋಡಿ
ಮೋಡಿಯ ಮಾಡೋ ಏಕಾಂಗಿ!
@ಹನಿಬಿಂದು@

ಏಕಾಗಿ

ಏಕಾಗಿ

ಕನಸನು ಕಾಣುತ ಎಲ್ಲೋ ನೋಡುತ
ಚಿಂತಿಸುತ್ತಿರುವೆ ಏಕಾಗಿ?
ಯಾರಿಗೊ ಕಾಯುತ ಏನನೋ ಹುಡುಕುತ
ಕುಳಿತಿರುವೆ ನೀ ಏಕಾಗಿ?

ಏಕಾಂಗಿಯಾಗಿ ಆಲೋಚನೆಯೂ
ನಲ್ಲೆಯ ನೆನಪೇ ನಿನಗಿಂದು?
ಮೋಡದ ಆಟವ ನೋಡಲು ಹೊರಗಡೆ
ಬರಬಾರದೇ ನೀನಿಂದು?

ವಿರಹವ ತಾಳದೆ ಕನಸನು ಕಾಣುತ
ಸುಮ್ಮನೆ ಕುಳಿತಿಹೆ ಏಕಾಗಿ?
ಓಡುತ ಹೋಗಿ ನಲ್ಲೆಯ ನೋಡಿ
ಮೋಡಿಯ ಮಾಡೋ ಏಕಾಂಗಿ!
@ಹನಿಬಿಂದು@

ಬುಧವಾರ, ಜೂನ್ 14, 2023

ಒಂದಿಷ್ಟು....187

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -187

        ಎಸ್ ಎಸ್ ಎಲ್ ಸಿ ಓದಿದ ಮಕ್ಕಳು ತಮ್ಮ ತರಗತಿಯನ್ನು ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಿಯುಸಿಗೆ ಸೇರಿದ್ದಾರೆ. ಕೆಲವರು ಉತ್ತಮ ರಿಸಲ್ಟ್ ಬಂದು ಉತ್ತಮ ಅಂಕಗಳನ್ನು ಪಡೆದು ಪಾಸ್ ಆಗಿದ್ದಾರೆ.  ಅವರ ಬಗ್ಗೆ ನಾವು ಚಿಂತಿಸುವ ಅಗತ್ಯ ಇಲ್ಲ.  ಆದರೆ ಕೆಲವರಿಗೆ ತಾವು ಅಂದುಕೊಂಡದ್ದಕ್ಕಿಂತ ಪ್ರತಿ ವಿಷಯಗಳನ್ನು ನಾಲ್ಕು ನಾಲ್ಕು ಅಂಕಗಳು ಕಡಿಮೆಯಾಗಿ ಒಟ್ಟಾರೆಯಾಗಿ 30ರಷ್ಟು ಅಂಕಗಳು ಕಡಿಮೆ ಬಂದು ತುಂಬಾ ಬೇಸರವಾದದ್ದು ಕೂಡಾ ಇದೆ. ಅವರು ಅದರ ಬಗ್ಗೆ ಏನು ಬೇಸರ ಮಾಡಿಕೊಳ್ಳಬೇಕೆಂದಿಲ್ಲ ಇಲ್ಲ. ಆದರೆ ಈಗಿರುವ ಅಂಕಗಳು ಬಂದಿದೆಯಲ್ಲ  ಎಂದು ಮುಂದಿನ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು.  ಕಾರಣ ಇಷ್ಟೇ ಹರಿಯುತ್ತಿರುವ ನದಿಗೆ ಅಡೆತಡೆಗಳು ಬರುವುದು ಸಾಮಾನ್ಯ.  ಆ ಅಡೆತಡೆಗಳನ್ನೆಲ್ಲ ಬಿಟ್ಟು ದಾಟಿ ಬದುಕಿನ ಪಯಣದಲ್ಲಿ ಮುಂದುವರಿಯಬೇಕಾದದ್ದು ಜಾಣತನದ ಲಕ್ಷಣ. 
            ಹಾಗಾಗಿ ಉತ್ತಮ ಕಾಲೇಜನ್ನು ಆಯ್ಕೆ ಮಾಡಿಕೊಂಡು ತನಗೆ ಇಷ್ಟ ಬಂದ ವಿಷಯವನ್ನು ಓದಬೇಕೆಂಬ ಆಸೆಯಿಂದ ಹೊಸ ಕಾಲೇಜಿಗೆ ಸೇರಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ ಕಾಲೇಜು ವಿದ್ಯಾಭ್ಯಾಸಕ್ಕೆ ಅಡಿ ಇಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಆಲ್ ದ ಬೆಸ್ಟ್ ಅಂತ ಹೇಳ್ತಾ ಈಗ ನಾವು ಮಾತನಾಡುತ್ತಿರುವುದು ಒಂದು ಎರಡು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ. ಒಂದೆರಡು ಮಾರ್ಕ್ಸ್ ಗೋ , ಐದಾರು ಅಂಕಗಳಿಗೋ ಅಥವಾ ಅದಕ್ಕಿಂತಲೂ ಹೆಚ್ಚು ಅಂಕಗಳಿಗೂ ಕಡಿಮೆ ಬಂದು ಒಂದೋ ಎರಡೋ, ಹೆಚ್ಚೋ ವಿಷಯಗಳು ಬಾಕಿಯಾಗಿ ಎನ್.  ಸಿ.  ಅಂದರೆ ನಾಟ್ ಕಂಪ್ಲೀಟ್ ಎಂದು ಫಲಿತಾಂಶ ಬಂದಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಮರು ಮೌಲ್ಯಮಾಪನಕ್ಕೆ ತಮ್ಮ ಪತ್ರಿಕೆ ಉತ್ತರ ಪತ್ರಿಕೆಗಳನ್ನು ಹಾಕಿ ಕಾಯುತ್ತಾ ಕುಳಿತಿದ್ದಾರೆ. ಸ್ಕ್ಯಾನ್ ಡ್ ಕಾಪಿ ತರಿಸಲು ಮುನ್ನೂರ ಐವತ್ತು, ಮತ್ತೆ ಮರು .ಮೌಲ್ಯ ಮಾಪನ ಮಾಡಲು ಎಂಟುನೂರು ರೂಪಾಯಿ ಕೊಡಲು ಪ್ರತಿ ವಿಷಯಕ್ಕೆ ಕಷ್ಟ ಎನ್ನುವ, ತಂದೆ ತಾಯಿ ಕೂಲಿ ಕೆಲಸ ಮಾಡಿ, ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಬದುಕುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಇದು ಸಾಧ್ಯ ಆಗದು. ಅವರಿಗೆ ನಾನು ಹೇಳುವುದೆಂದರೆ ಜೀವನದಲ್ಲಿ ಭಯ ಪಡಬೇಕೆಂದಿಲ್ಲ.  ಹೆಚ್ಚು ಹೆಚ್ಚು ಹಣ್ಣು ಬಿಡುವ ಮರಕ್ಕೆ ಹೆಚ್ಚು ಜನ ಕಲ್ಲುಗಳನ್ನು ಹೊಡೆಯುತ್ತಾರೆ. ಆದ ಕಾರಣ ನಿಮ್ಮ ಮುಂದಿನ ಜೀವನ ಬಹಳವೇ ಸುಖಕರವಾಗಿದೆ ಎಂದು ಅರ್ಥ.  ಅಥವಾ ನೀವು ಮುಂದೆ ಬಹಳ ಜನರಿಗೆ ಸಿಹಿ ಸಿಹಿಯಾದ ಹಣ್ಣುಗಳನ್ನು ಕೊಡಲಿದ್ದೀರಿ ಎಂದು ನೀವು ಅರಿತುಕೊಳ್ಳಬೇಕು. 
           ಕಷ್ಟಪಡದೆ ಸುಖವಿಲ್ಲ.  ಇದು ಜೀವನಕ್ಕೂ ಅನ್ವಯಿಸುತ್ತದೆ. ಯಾರಿಗೂ ಕೂಡ ಕಷ್ಟಪಡದೆ ಯಾವುದೇ ಸುಖ ಸಿಗಲು ಸಾಧ್ಯವಿಲ್ಲ.  ಮಂತ್ರಿಗಳೇ ಆಗಿರಲಿ,  ಸಿನಿಮಾ ನಟರೆ ಆಗಿರಲಿ, ಅಥವಾ ಸಾಮಾನ್ಯ ಮನುಷ್ಯನಿಗೂ ಅವರವರ ಜೀವನದಲ್ಲಿ ಅವರದ್ದೇ ಆದ ಕಷ್ಟಗಳು ಇರುತ್ತವೆ.  ಆ ಕಷ್ಟಗಳನ್ನು ದಾಟಿಗೆ ಜೀವನದ ಗುರಿ ಕಾಣಲು ಸಾಧ್ಯ.  ಹೇಗೆ  ಎಂದರೆ ಪ್ರತಿ ರಾತ್ರಿ ಕಳೆದ ಮೇಲೆ ಹಗಲು ಹೇಗೆ  ಬರುತ್ತದೆಯೋ ಹಾಗೆ ಒಂದು ಕಷ್ಟದ ನಂತರ ಮತ್ತೊಂದು ಸುಖ ಬರಲಿದೆ.  ಇನ್ನೊಂದು ವಾರದೊಳಗೆ ಫಲಿತಾಂಶ ಬರಲಿದೆ . ಅದು ಕೂಡಾ ಫಲಿತಾಂಶ ಉತ್ತೀರ್ಣ ಆಗಿಯೇ ಇಲ್ಲವೆಂದರೆ ಇನ್ನೊಂದು ತಿಂಗಳಲ್ಲಿ ಮತ್ತೆ ಪರೀಕ್ಷೆ ಬರೆಯುವ ಅವಕಾಶವಿದೆ.  ಮತ್ತೊಂದು ತಿಂಗಳು ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುವಂತಹ ಕಾಲ ಬಂದಿದೆ.  ಹಾಗಾಗಿ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಬಹುದು. 
          ಕಷ್ಟ ಪಟ್ಟೋ, ಯಾರದೋ ಶಿಕ್ಷಕರ, ದಾನಿಗಳ ಅಥವಾ ಸಂಬಂಧಿಕರ ಸಹಾಯ ಪಡೆದೋ ಮತ್ತೊಮ್ಮೆ ಮೌಲ್ಯಮಾಪನ ಹಾಕಿದರೂ,  ಮತ್ತೊಮ್ಮೆ ಪರೀಕ್ಷೆ ಬರೆದರೂ ಉತ್ತೀರ್ಣರಾಗಲೇ ಇಲ್ಲ,  ಎನ್ನುವವರಿಗೆ ಸ್ವಲ್ಪ ದಿನ ತಮಗಿಷ್ಟ ಬಂದ ಕಡೆ ಕೆಲಸಕ್ಕೆ ಹೋಗಿ ಒಂದಷ್ಟು ಹಣವನ್ನು ಗಳಿಸಿಕೊಂಡು ಮುಂದಿನ ವರ್ಷಕ್ಕೆ ಐಟಿಐಗೆ ಸೇರುವ ಅವಕಾಶವಿದೆ.  ನೀವು ಎಂಟನೇ ತರಗತಿ ಫೇಲಾದರೂ,  9ನೇ ತರಗತಿ ಫೇಲಾದರೂ ಅಥವಾ ಹತ್ತನೇ ತರಗತಿಲ್ಲಿ ಅನುತ್ತೀರ್ಣರಾದರು ಸಹ ಐಟಿಐನಲ್ಲಿ ಬೇರೆ ಬೇರೆ ಕೋರ್ಸ್ಗಳಿವೆ.  ನೀವು ಅದನ್ನು ಮಾಡಿಕೊಳ್ಳಬಹುದು. ನಿಮಗಿಷ್ಟವಾದ ಜಾಬ್ ಓರಿಯೆಂಟೆಡ್ ಕೋರ್ಸ್ ಗಳನ್ನು ಆಯ್ಕೆಗಳಲ್ಲಿ ನಿಮಗೆ ಸರ್ಕಾರದಿಂದಲೇ ನೀಡುತ್ತಾರೆ.  ಇದಕ್ಕೆ ಹೆಚ್ಚಿನ ಫೀಸ್ ಗಳಿಲ್ಲ.  ಜಾಸ್ತಿ ಎಂದರೆ ಸರಕಾರಿ ಐಟಿಐ ಕಾಲೇಜು ಗಳಲ್ಲಿ ಒಂದೂವರೆ ಸಾವಿರದಷ್ಟು ಫೀಸ್ ಇರಬಹುದು.  ಆದರೆ ನಿಮ್ಮ ಮನೆಯಿಂದ ಸರಕಾರಿ ಕಾಲೇಜು ದೂರವಿದ್ದರೆ ಓಡಾಡುವುದಷ್ಟೇ  ನಿಮಗೆ ಇರುವ ತೊಂದರೆ. ಅದೊಂದನ್ನು ನೀವು ನೋಡಿಕೊಂಡರೆ ನಿಮಗೆ ಸುಲಭದ ದಾರಿಯಲ್ಲಿ ಮುಂದಿನ ಓದಿಗೆ ಅವಕಾಶವಿದೆ. ಐಟಿಐಗಳೆಂದರೆ ಹುಡುಗರಿಗೆ ಮಾತ್ರವಲ್ಲ ಹುಡುಗಿಯರು ಸಹ ಐಟಿಐಗಳಲ್ಲೂ ಕಲಿತು ಇದರಲ್ಲಿ ಎಲೆಕ್ಟ್ರಾನಿಕ್ಸ್,  ಎಲೆಕ್ಟ್ರಿಷಿಯನ್,  ಪ್ಲಂಬರ್,  ಫಿಟ್ಟರ್, ಮೆಕ್ಯಾನಿಕ್, ಕಂಪ್ಯೂಟರ್ ಸೈನ್ಸ್ , ಮೊಬೈಲ್ ಇಲೆಕ್ಟ್ರೀಷಿಯನ್ , ಕೊಪಾ , ಕಾರ್ಪೆಂಟರ್, ಸ್ಟೆನೋಗ್ರಾಫರ್, ಏ ಸಿ ಮೆಕ್ಯಾನಿಕ್,  ವೆಲ್ಡರ್  ರೆಫ್ರಿಜರೇಟರ್ ರಿಪೇರಿ   ಇವೇ ಮುಂತಾದ ಹಲವಾರು ಕೆಲಸ ಸಿಗುವಂತಹ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಕಲಿಯಬಹುದು. ಇವುಗಳನ್ನು ಕಲಿತ ಬಳಿಕ ರೈಲ್ವೇ, ಸಚಿವಾಲಯ, ಸರಕಾರಿ ಕೆಲಸವೇ ಅಲ್ಲದೆ, ಕೆ ಎಸ್ ಆರ್ ಟಿ ಸಿ ಡಿಪೋಗಳು, ಟೊಯೊಟಾ ದಂತಹ ಹಲವಾರು ದೊಡ್ಡ ದೊಡ್ಡ ಕಂಪನಿಗಳಲ್ಲೂ ಕೆಲಸ ಮಾಡಲು ಅವಕಾಶ ಇದೆ. ಅಷ್ಟೇ ಅಲ್ಲ, ತಾನೇ ಸ್ವತಃ ಕೆಲಸ ಕೊಡುವವನಾಗಿ, ಬಾಸ್ ಆಗಿ ಇದ್ದು, ತನ್ನ ಕೈ ಕೆಳಗೆ ಹಲವಾರು ಜನರಿಗೆ ಕೆಲಸ ಕೊಡುವ ಕಾರ್ಯವನ್ನೂ ಮಾಡಬಹುದು. ಇದರಿಂದ ನಮ್ಮ ಜೀವನದ ಜೊತೆಗೆ ಇನ್ನೂ ನಮ್ಮ ಗೆಳೆಯರ ಜೀವನವನ್ನೂ ಉತ್ತಮ ಪಡಿಸಲು ಅವಕಾಶ ಇದೆ.
    ಕೈ ಕಟ್ಟಿ ಕುಳಿತರೆ ಏನೂ ಆಗದು. ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಬೆಳಗ್ಗೆ ಎದ್ದು ಹಲವಾರು ಮನೆಗಳಿಗೆ ಪೇಪರ್ ಹಾಕಿ, ಸರ್ ಎಂ ವಿಶ್ವೇಶ್ವರಯ್ಯನವರು ಬೀದಿ ದೀಪದ ಕೆಳಗೆ ಕುಳಿತು, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಹಳತು ಪುಸ್ತಕಗಳನ್ನು ಕೊಂಡು ಓದಿ ಕಲಿತವರು. ಕಷ್ಟ ಇಲ್ಲದೆ ಬದುಕಿಲ್ಲ. ಆದರೆ ಅದನ್ನು ಎದುರಿಸಿ ಛಲದಲ್ಲಿ ನಿಂತಾಗ ಅಲ್ಲಿ ಸುಖ ಇದ್ದೇ ಇದೆ. 
  ಆದ್ದರಿಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಕೊರಗ ಬೇಕಾಗಿಲ್ಲ,  ಸಾಯ ಬೇಕಾಗಿಲ್ಲ, ಬದಲಾಗಿ ಈ ರೀತಿಯ ಟೆಕ್ನಿಕಲ್ ಕೋರ್ಸ್ ಓದಿ ತಾನೇನು ಅಂತ ತೋರಿಸಬೇಕಿದೆ. ಉನ್ನತ ಓದಿಗೆ ಬ್ಯಾಂಕಿನವರು ಸಾಲ ಸೌಲಭ್ಯ ಕೂಡಾ ಕೊಡುತ್ತಾರೆ. ರಜೆಯ ಸಮಯದಲ್ಲಿ ಏನಾದರೂ ಪಾರ್ಟ್ ಟೈಮ್ ಕೆಲಸ ಮಾಡಿ ಒಂದಿಷ್ಟು ಹಣ ಸಂಪಾದಿಸಿ ಉನ್ನತ ವ್ಯಾಸಂಗ ಪಡೆಯಬಹುದು. ಕಷ್ಟ ಎಂದರೆ ಕಾಲೇಜು ಫೀಸ್ ಕಟ್ಟಲು ಸಹಾಯ ಮಾಡುವ ದಾನಿಗಳು ಭಾರತ ದೇಶದಲ್ಲಿ ಇನ್ನೂ ಇದ್ದಾರೆ. ಹಾಗಾಗಿ ಮುಂದೆ ಓದಲು ಕಷ್ಟ ಇಲ್ಲ. 
        ಹಾಗಾಗಿ ಓದುವುದನ್ನು ಬಿಡದೆ ಮುಂದುವರೆಸಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆರಿಸಿ. ರಾಜಕೀಯ ಇಷ್ಟವಿದ್ದರೆ ವಿಜ್ಞಾನ ವಿಷಯ ಓದುವ ಬದಲು ರಾಜಕೀಯ ಶಾಸ್ತ್ರ ಓದಿ. ಎಲ್ಲಾ ಫೀಲ್ಡ್ ಗಳ ಮುಂದಿನ ರೂವಾರಿಗಳು ನೀವೇ , ಭಾರತ ಆಳುವ ಪ್ರಜೆಗಳೂ, ನಾಯಕರೂ ನೀವೇ. ನೆನಪಿರಲಿ. ನೀವೇನಂತೀರಿ?
@ಹನಿಬಿಂದು@
03.06.2023

ಒಂದಿಷ್ಟು....188

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 188

       ಈ ಬದುಕು ನಿತ್ಯ ಹೋರಾಟ. ಮನೆಯ ಒಳಗೂ,  ಮನೆಯ ಹೊರಗೂ,  ಕಚೇರಿಗಳಲ್ಲಿಯೂ, ಹಾಗೆಯೇ ನಿತ್ಯ ಹೋಗುವ ಶಾಲೆ,  ಕಾಲೇಜು,  ಅಂಗಡಿಗಳು, ಒಟ್ಟಾಗುವ ಸಂಬಂಧಿಕರು , ಸ್ನೇಹಿತರ ಜೊತೆ, ಪಕ್ಕದ ಮನೆಯವರ ಜೊತೆಗೂ ನಿತ್ಯ ಹೋರಾಟ. ಅಷ್ಟೇ ಯಾಕೆ ತನ್ನ ಆತ್ಮ,  ತನ್ನ ದೇಹದ ಅಂಗಾಂಗಗಳು,  ತನ್ನ ಆಲೋಚನೆಗಳ ಜೊತೆಗೆ ಪ್ರತಿನಿತ್ಯ ಹೋರಾಟ.  ಇದನ್ನೇ ಬದುಕು ಎಂದು ಕರೆಯುತ್ತಾರೆ. ಶ್ರೀಮಂತನಿಗೆ ಆರೋಗ್ಯದ ಸಮಸ್ಯೆ,  ಬಡವನಿಗೆ ಹಣದ ಸಮಸ್ಯೆ,  ಮಧ್ಯಮ ವರ್ಗದವನಿಗೆ ಬದುಕು ಸಾಗಿಸುವುದೇ ಸಮಸ್ಯೆ! ಹೀಗೆ ಸಮಸ್ಯೆಗಳಿಲ್ಲದ ಯಾವ ಬದುಕು ಕೂಡ ಇಲ್ಲ ಅಲ್ಲವೇ?
      ಹುಟ್ಟಿನಿಂದ ಸಾಯುವವರೆಗೂ ಕೂಡ ಸಮಸ್ಯೆಗಳ ನಡುವೆಯೇ ಬಾಳು.  " ಹೊಂದಾಣಿಕೆ" ಎಂಬ ಹಣೆಪಟ್ಟಿ ಕಟ್ಟಿಕೊಂಡು ಎಲ್ಲರ ಜೊತೆಗೂ ಒಂದಷ್ಟು,  ಮತ್ತೊಂದಷ್ಟು ಒಂದಾಗಿ ಒಪ್ಪಿಕೊಂಡು ಬದುಕುವ ನಾವು ಅಕ್ಷರಶ: ತ್ಯಾಗಿಗಳು. ನಮ್ಮನ್ನು  ಕೆಲವರು ತಮಗೆ ಬೇಕಾದ ಹಾಗೆ  ಬಳಸಿಕೊಳ್ಳುವಂತಹ ಮೇಧಾವಿಗಳು. ಇವರಿಗೆ ಬದುಕಿನಲ್ಲಿ ತನ್ನತನ , ಹಾಗೆ ತಾನೇ ಮೇಲು ಎಂಬ ಅಹಂ ಕೂಡ ಇರುತ್ತದೆ. ಉಳಿದವರನ್ನು ತಮ್ಮ ಕೆಲಸದವರ ಹಾಗೆ ಪ್ರತಿನಿತ್ಯ ಕಾಣುತ್ತಾರೆ. ಯಾರೇ ಸಿಗಲಿ ಅವರನ್ನು ಯಾವುದೇ ಗೌರವ ಕೊಡದೆ ತಮ್ಮ ಮನೆಯ ಕೂಲಿಗಳ ಹಾಗೆ ಸತ್ಕರಿಸುವ ಗುಣ ಕೆಲವರದ್ದು. ತನ್ನಲ್ಲಿರುವ ದುಡ್ಡಿನ ಮದದಿಂದಾಗಿ ಎಲ್ಲರನ್ನೂ ತಮ್ಮ ಕೆಲಸಕ್ಕಾಗಿ ಬಿಟ್ಟಿಯಾಗಿ ಬಳಸಿಕೊಳ್ಳುತ್ತಾರೆ ಇನ್ನು ಹಲವರು. ತಾನು ಅಂದುಕೊಂಡವ ತನ್ನ ಕೆಲಸಕ್ಕಾಗಿ ಸಿಗದೇ ಇದ್ದರೆ ಅವನನ್ನು ಸಾಯಿಸಲಿಕ್ಕು ಹಿಂದೆ ಮುಂದೆ ನೋಡದ ಜನರು ಕೂಡಾ ಇರುತ್ತಾರೆ ಆದರೆ ಅವರ ಜೀವನದಲ್ಲೂ  ಕೆಲವೊಂದು ಋಣಾತ್ಮಕ ಅಂಶಗಳಿರುತ್ತವೆ, ಸಿಗದ ಪ್ರೀತಿ,  ಕಳೆದುಕೊಂಡ ತಾಯಿ,  ತಂದೆಯ ಅನಾರೋಗ್ಯ,  ಮಕ್ಕಳ ಅಗಲುವಿಕೆ, ಸಂತಸವೆಲ್ಲದ ಬದುಕು,  ಬೇಕು ಎನಿಸಿದ್ದು ಸಿಗದೇ ಇರುವಾಗ ಆಗುವ ನೋವು , ಎಲ್ಲರೂ ತಮ್ಮನ್ನು ತೀರಾ ತುಚ್ಚ ದೃಷ್ಟಿಯಿಂದ ಕಾಣುವುದು ಇತ್ಯಾದಿ.  ಆಗ ಅರಿವಿಗೆ ಬರುವ ನೋವಿನ ಅಂಶ, ನೋವು ಕೋಪವಾಗಿ ಮಡುಗಟ್ಟಿ ಇನ್ಯಾರದೋ ಮೇಲೆ ತೋರಿಸಿಕೊಂಡು ಕೂಗಾಡುವುದು, ಒದರಾಡುವುದು ಮಾಡುತ್ತಿರುತ್ತಾರೆ. ಇವೆಲ್ಲವೂ ಮಾನವನ ಬದುಕಿನ ವಿವಿಧ ಮುಖಗಳು. 
           ಅತಿ ಹೆಚ್ಚು ಜನ ತಮ್ಮ ಬದುಕಿನಲ್ಲಿ ಅವಿವಾಹಿತರಾಗಿ ಉಳಿಯಲು ಇದೇ ಕಾರಣ.  ಹಾಗೆಯೇ ವಿವಾಹಿತರಾದವರು ವಿಚ್ಛೇದನ ಪಡೆಯಲು ಕೂಡ ಇಂತಹ  ಕಾರಣಗಳು ಇರುತ್ತವೆ.  ತನ್ನತನ ಬಿಟ್ಟು ಕೊಡದೆ ಇರುವ ಗುಣ,  ಹಠ,  ತಾನು ಮಾಡಿದ್ದೆ ಸರಿ ಎನ್ನುವ ಭಾವನೆ, ತಮ್ಮದೇ ವಾದ ಗೆಲ್ಲಬೇಕು ಎಂಬ ಪರಿ,   ಪರರಿಗೆ ನೋವು ಕೊಡುವ ಸ್ಯಾಡಿಸ್ಟ್ ಗಳ ಜೊತೆಗಿನ ಕಷ್ಟದ ಬದುಕು, ಮನೆಯ ಹೊರಗೆ ತುಂಬಾ ಚೆನ್ನಾಗಿದ್ದು, ಮನೆಯ ಒಳಗೆ ತನ್ನ ಕುಟುಂಬವನ್ನು ದುಃಖದಲ್ಲಿ ತೋಯಿಸುವ, ನೋಯಿಸುವ, ಬೇಯಿಸುವ ಜನರ ಜೊತೆಗೆ ಸಾಕಷ್ಟು ಹೊಂದಾಣಿಕೆ ನಡೆಸಿಕೊಂಡು ಬದುಕುವ ಕೆಲಸ ಇದೆಯಲ್ಲ ಅದು ತುಂಬಾ ಕಷ್ಟ. ಅನುಭವಿಸಿದವರಿಗೇ ಗೊತ್ತು ಅಲ್ಲವೇ? 
           ಮನುಷ್ಯ ಮನುಷ್ಯನಾಗಿರಬೇಕು.  ಅವನಿಗೆ 'ಮನುಷ್ಯತ್ವ' ಎಂಬ ಒಂದು ಭಾವ ಕೂಡ ಇರಬೇಕು.  ಇದು ಇಲ್ಲದಂತಹ ಮನುಷ್ಯರು ನಮ್ಮೊಂದಿಗೆ ಹಲವಾರು ಜನರಿದ್ದಾರೆ . ಮನುಷ್ಯತ್ವ ಇರುವ ಮನುಷ್ಯರು ಮನುಷ್ಯತ್ವ ಇಲ್ಲದ ಮನುಷ್ಯರ ಜೊತೆಗೆ ಹೊಂದಿಕೊಂಡು ಬಾಳುವ ಕೆಲಸ ಕೂಡ ತುಂಬಾ ನೋವಿನ ಸಂಗತಿಯಾಗಿದೆ. ಮಾನವತೆ, ದಯೆ,  ದಾನ, ಕರುಣೆ, ಪ್ರೀತಿ, ಅನುಕಂಪ, ಗೌರವ, ಕಾಳಜಿ , ಸಮಯ ಮೀಸಲು, ಮುದ್ದು, ನಲಿವು, ಸಹಕಾರ, ಸಹಾಯ, ಸಹಯೋಗ, ಸಹಕಾರ, ಸಹಬಾಳ್ವೆ, ಸಪೋರ್ಟ್ ಇವುಗಳನ್ನೆಲ್ಲ ನೀಡಿ ನಮ್ಮೊಂದಿಗೆ ಬದುಕುವವರು ತುಂಬಾ ಕಡಿಮೆ.  ನಾವು ಅದನ್ನು ಕೊಟ್ಟರೂ ನಮಗೆ ತಿರುತಿರುಗಿ ನೋವನ್ನೇ ಕೊಡುವಾಗ ಅಂತವರ ಜೊತೆ ಜೀವನಪೂರ್ತಿ ಹೊಂದಾಣಿಕೆ ಮಾಡಿಕೊಂಡು ಬದುಕುವಂತಹ ಚಾಕಚಕ್ಯತೆ, ತಾಳ್ಮೆ, ತ್ಯಾಗ ಗುಣ ಎಲ್ಲರಿಗೂ ಇರುವುದಿಲ್ಲ. 
                 ಕೆಲವೊಂದು ಸಲ ಕೆಲವೊಂದು ಜನರಿಗೆ ಎಲ್ಲಾ ಸಮಸ್ಯೆಗಳು ನನ್ನಿಂದಲೇ ಪ್ರಾರಂಭವಾಗುತ್ತಿದೆ,  ನಾನು ಈ ಸಮಸ್ಯೆಗಳ ಮೂಲ,  ನನ್ನ ಆಲೋಚನೆಗಳನ್ನು ನಾನು ಬದಲಾಯಿಸಿಕೊಂಡರೆ ಎಲ್ಲರಿಗೂ ನೆಮ್ಮದಿ ಸಿಗುತ್ತದೆ ಎನ್ನುವ ಒಂದು ಚಿಕ್ಕ ಅಂಶ ಒಳ್ಳೆಯದೇ. ಇಡೀ ಬದುಕಿನಲ್ಲಿ ಕುಟುಂಬ ಸಮೇತರಾಗಿ ಅವರು ನೋವನ್ನು ಅನುಭವಿಸುತ್ತಿರುತ್ತಾರೆ. ನಮ್ಮ ಒಂದು ಸಣ್ಣ ನಿರ್ಧಾರ ಕೂಡ ನಮ್ಮೊಂದಿಗೆ ಬಾಳುವವರಿಗೆ ಕಷ್ಟ ಕೊಡಬಾರದು.  ಹಾಗೆಯೇ ಅವರ ಪ್ರತಿಯೊಂದು ಮಾತುಗಳು ಮತ್ತು ಕೃತಿಗಳು ಅವರ ಜೊತೆಗಿರುವ ಇತರರಿಗೆ ನೋವು ತರಬಾರದು.  ಈ ಒಂದು ನಿಯಮವನ್ನು ಎಲ್ಲರೂ ರೂಪಿಸಿಕೊಂಡಿದ್ದೆ ಆದರೆ ಎಲ್ಲರ ಬದುಕು ಕೂಡ ನೆಮ್ಮದಿಯಿಂದ,  ಸಂತಸದಿಂದ ಕೂಡಿರುತ್ತದೆ ಅಲ್ಲವೇ?
       ಮೊದಲನೆಯದಾಗಿ ನಮ್ಮ ತಲೆಯಲ್ಲಿ ಇರುವಂತಹ ಹೆಡ್ ವೈಟನ್ನು ತೆಗೆದು ಹಾಕಬೇಕು.  ಯಾಕೆಂದರೆ ನಾವಿಲ್ಲಿ ಬಂದು ಎಷ್ಟೇ ಸಾಧಿಸಿದರು ಕೂಡ,  ಎಷ್ಟು ಕೋಟಿ ಹಣ ಮಾಡಿಟ್ಟರು ಕೂಡ, ಎಷ್ಟು ಕುಟುಂಬಗಳನ್ನು ಸಾಕಿದರು ಕೂಡ,  ಎಷ್ಟು ಜನಕ್ಕೆ ತುತ್ತನ್ನು ಇತ್ತರೂ ಕೂಡ,  ಜನ ನಾವು ಕೊಡಲಿ ಎಂದು ಕಾಯುವವರೆ ಹೊರತು ತಮಗೆ ಬೇಕಾದ ಕೆಲಸಗಳನ್ನು ತಾವೇ ಮಾಡಿಕೊಳ್ಳಲಾರರು. ಸರಕಾರದ ಉಚಿತ ಸವಲತ್ತುಗಳು ಕೂಡಾ ಹಾಗೆಯೇ. ದುರ್ಬಳಕೆ ಆಗಬಾರದು. ಸರಕಾರದಿಂದ ಹಲವು ಸವಲತ್ತುಗಳು ಸಿಗುತ್ತವೆ ಎಂದು ದುಡಿದ ಹಣವನ್ನು ಕುಡಿತಕ್ಕೆ ಬಳಸಿ ಕೊಳ್ಳುವುದು, ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಇರುವ ಬಿಪಿಎಲ್ ಪಡಿತರ ಚೀಟಿಯನ್ನು ಸಿರಿವಂತರು ಲಂಚ ಕೊಟ್ಟು ಮಾಡಿಸಿಕೊಳ್ಳುವುದು, ಯಾರದೋ ಮನೆಯ ಶೌಚಾಲಯ ತೋರಿಸಿ, ತನ್ನ ಮನೆಯ ಶೌಚಾಲಯ ಎಂದು ಹೊಸ ಶೌಚಾಲಯಕ್ಕೆ ಸರಕಾರದ ಹಣ ಪಡೆಯುವುದು, ದನದ ಕೊಟ್ಟಿಗೆ ನಿರ್ಮಾಣಕ್ಕೆ ಹಣ ಪಡೆದು ಮನೆಯಲ್ಲಿ ಒಂದು ಹೊಸ ಕೋಣೆ ನಿರ್ಮಿಸುವುದು, ಸುಳ್ಳು ಸಾಕ್ಷಿ ಒದಗಿಸಿ ಸರಕಾರದ ಹಣ ಪಡೆಯುವುದು ಇವೆಲ್ಲ ಮಾನವತೆಯ ಲಕ್ಷಣಗಳಲ್ಲ, ಅಲ್ಲವೇ? ಬಿಟ್ಟಿ ಕೊಡುತ್ತಾರೆ ಎಂದರೆ ಊಟಕ್ಕೂ ಹಲವಾರು ಸಾವಿರ ಜನ ಸೇರುತ್ತಾರೆ. ಅದೇ ಯಾರಿಗಾದರೂ ಸಹಾಯ ಬೇಕು ಎನ್ನುವ ಪ್ರಸಂಗ ಬಂದರೆ ಅಲ್ಲಿ ಒಂದಿಬ್ಬರು ಕೂಡ ಇರುವುದಿಲ್ಲ. ಇದು ಮಾನವತೆಯ ಲಕ್ಷಣವೇ?
     ನಾವು ಯಾರಿಗೂ ಏನನ್ನು ಮಾಡಲು ಆಗದೆ ಇದ್ದರೂ ಪರವಾಗಿಲ್ಲ, ಪರರಿಗೂ, ನಮ್ಮವರಿಗೂ ಕೆಟ್ಟದು ಮಾಡದೇ ಇರೋಣ. ಕೆಟ್ಟದನ್ನು ಬಯಸದೆ ಇರೋಣ. ನಮ್ಮ ಹೊಟ್ಟೆಕಿಚ್ಚು ನಮ್ಮನ್ನೇ ಸುಡುತ್ತದೆ. ಅದು ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಜನರಿಗೆ ಬೇಸರ ತರುತ್ತದೆ, ಸಂಬಂಧಗಳು ಬಿರುಕು ಬಿಡಲು ಕಾರಣವಾಗುತ್ತದೆ. ಇದರ ಜೊತೆ ಮಾನವ ಗುಣದಲ್ಲಿ ನಂಬಿಕೆ ಇರಬೇಕು. ನಂಬಿಕೆ ಇರದ ಸಂಬಂಧ ಒಡೆದ ಹಾಲಿನಂತೆ. ಅದು ಎಂದಿಗೂ ಸರಿ ಆಗದು. 
        ಮಾನವರ ಮಾನವತೆ ಕಡಿಮೆಯಾಗಿ, ಪ್ರಾಣಿಗಳಿಗಿಂತ ಕಡೆಯಾಗಿ, ಪಶುತ್ವವೂ ಹೋಗಿ, ಮೃಗತ್ವ ಬಂದಿದೆ. ಕೆಲವು ಮೃಗಗಳೂ ಮನುಷ್ಯನಷ್ಟು ಕೆಟ್ಟದಾಗಿ ವರ್ತಿಸಲಾರವು. ಅದರ ಜೊತೆ ವಿಪರೀತ ಕುಡಿತ, ಜೂಜು, ಹುಚ್ಚಾಟ, ಕುಣಿತಗಳು ತಮ್ಮ ಜೀವ ಹಾಗೂ ಜೀವನ ಎರಡರ ಜೊತೆಗೆ ತಮ್ಮೊಂದಿಗೆ ಬದುಕುವ ಇತರರ ಬಾಳನ್ನು ಸಹ ಹಾಳು ಮಾಡಿ ನೆಮ್ಮದಿಯೇ ಇಲ್ಲದ ಹಾಗೆ ಮಾಡುತ್ತವೆ. ಮುಂದಿನ ಜನಾಂಗ ಹಾಗೂ ಈಗಿರುವ ಜನರು, ಯಾವುದೂ ಬೇಡ, ಒಂದಷ್ಟು ಮಾನವತೆ ಕಲಿತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಜೊತೆ ಬಾಳುವ ಇತರರಿಗೆ, ಗೆಳೆಯರಿಗೆ, ಕುಟುಂಬದ ಸದಸ್ಯರಿಗೆ, ಬಂಧುಗಳಿಗೆ ಅಷ್ಟೇ  ಸಾಕು. ನೀವೇನಂತೀರಿ?
@ಹನಿಬಿಂದು@
10.06.2023