ನಮನ
ಮನದಲಿ ಮೂಡಿಪ ರೂಪಕೆ ಮಣಿವೆನು..
ನೆನಪಲಿ ಕಾಡಿದ ಯೋಗಿಗೆ ಮಣಿವೆನು..
ಬುವಿಯಲಿ ನನ್ನಯ ಜೀವವ ತಂದಾ
ಶಕ್ತಿಯು ಎನ್ನುವ ದೇವಗೆ ಮಣಿವೆನು...//
ಭಾವನೆ ಮನದಲಿ ತುಂಬಿಸಿ ಬಿಟ್ಟನು
ಕಾಮನೆ ಬಿಡಲದು ಸಲಹೆಯ ಕೊಟ್ಟನು!
ಮಾನವನಾಗಿಹೆ ನಡತೆಯ ಕಲಿಯಲು,
ದಾನವ ಗುಣವನು ತೊರೆಯಲು ತಿಳಿಸುತ..//
ಕಾಣದ ಲೋಕಕೆ ತೆರಳುತ ನುಡಿದನು
"ನಿನ್ನಯ ಜೀವನ ರೂಪಿಸಿ ಬದುಕಲು,
ಮೋಸವ ಮಾಡದೆ ಬಾಳನು ಬೆಳಗಲು,
ನ್ಯಾಯದ ಹಾದಿಯ ಹಿಡಿಯುತ ನಡೆಯಲು//
ಅರಿವನು ಕೊಡುತಲಿ ಹೃದಯದ ಸಿರಿತನ
ಬೆಳೆಸುತ, ಬಡವರ ಕಣ್ಣೀರೊರೆಸುತಲಿ,
ಹಲವಗೆ ಸಹಾಯ ಮಾಡುತ ಬಾಳಲು
ನೆಮ್ಮದಿ ಸಿಗುವುದು ಮೈಮನ ತಣಿವುದು..//
ಭೂಮಿಗೆ ಬಂದರೆ ಕುರುಹನು ಬಿಡುತಲಿ,
ಜೀವನ ಪಾವನ ಮಾಡುತ ನಲಿಯುತ
ತನ್ನಯ ಆತ್ಮದಿ ದೇವನ ಕರೆಯುತ
ನಗೆಯನು ಎಸೆಯುತ ಬಾಳ್ವೆಯ ಮಾಡುತ..//
ನನ್ನದು ಎನ್ನುವ ಮಾತದು ಏತಕೆ?
ನಮ್ಮದು ಎಂದರೆ ಸರ್ವಗೆ ಹಿತಕರ.
ಬಾಳಲಿ ಅಂದದ ಗೂಡನು ನೋಡುವೆ
ಇಲ್ಲದೆ ಇದ್ದರೆ ಗುಂಡಿಗೆ ಬೀಳುವೆ..//
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ