ಭಾನುವಾರ, ಜೂನ್ 30, 2019

1091. ಈಗಿನ ಶಿಕ್ಷಣದ ವ್ಯವಸ್ಥೆ

ಲೇಖನ

ವಿಷಯ-ಈಗಿನ ಶಿಕ್ಷಣದ ವ್ಯವಸ್ಥೆ

   ಶಿಕ್ಷಣ ಎಂದಾಗ ಮೊದಲನೆಯದಾಗಿ ನೆನಪಿಗೆ ಬರುವುದು ಮನೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಆದರೆ ಕಾಲ ಬದಲಾಗಿದೆ. ಈಗ ಮೊಬೈಲೇ ಮೊದಲ ಗುರು.ಮಗುವಿಗೆ ಪ್ರಿ ಸ್ಕೂಲ್ ಮೊದಲ ಶಾಲೆ. ಈಗಿನ ಅಮ್ಮಂದಿರಿಗೆ ಸಮಯವಿಲ್ಲವಲ್ಲ! ತಾವು ದುಡಿದು ಕೆಲಸದವರಿಗೆ ಸಂಬಳ ಕೊಡಬೇಕು! ಪಾಪ ಮಕ್ಕಳ ಗತಿ! ಯಾವುದೋ ಕೆಲಸದವಳ ಜೊತೆಯೋ, ಸಂಬಂಧಿಕರ ಮನೆಯಲ್ಲೋ, ಸಂಬಂಧವೇ ಇಲ್ಲದವರ ಮನೆಯಲ್ಲೋ ಹುಟ್ಟಿದ ತಪ್ಪಿಗೆ ಬೆಳೆಯ ಬೇಕಾದ ಪರಿಸ್ಥಿತಿ ಬಂದೊದಗಿದೆ ಇಂದು!
    ಅದೇನೇ ಇರಲಿ, ಮೂಲ ಹುಡುಕಲು ಹೋಗಬಾರದಂತೆ! ಮೊದಲು ಆರು ವರುಷವಿದ್ದ ಶಾಲಾ ವಯಸ್ಸೀಗ ಮೂರು ವರುಷಕ್ಕೆ ಇಳಿದಿದೆ. ಮೂರು ವರುಷ ಹತ್ತು ತಿಂಗಳಲ್ಲಿ ಶಾಲೆಗೆ ಸೇರಿಸುವ ನಿಯಮವಿದ್ದರೂ ಪೋಷಕರಿಗೆ ತಾಳ್ಮೆ ಎಂಬುದಿಲ್ಲ, ಅದಕ್ಕಿಂತ ಮೊದಲೇ ತಂದು ತುರುಕಿ ಬಿಡುತ್ತಾರೆ ಪ್ರಿ ಕೆಜಿ ತರಗತಿಗೆ!
     ಹಲ ಶಾಲೆಗಳೂ ಪ್ರಿಕೆಜಿಗೇ ಲಕ್ಷಗಟ್ಟಲೆ ಪಡೆದು ತಮ್ಮ ಕಟ್ಟಡ ವೃದ್ಧಿಸುತ್ತಲೇ ಹೋಗುತ್ತಿವೆ. ಇಲ್ಲಿ ನಾವು ಮಾತನಾಡಬೇಕಾದುದು ಸರಕಾರಿ ಶಾಲೆ ಅಥವಾ ಖಾಸಗಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಬಗ್ಗೆ.
     ನಾನೊಬ್ಬ ಶಿಕ್ಷಕಿಯಾಗಿದ್ದು ಖಾಸಗಿ ಶಾಲೆಯಲ್ಲೂ, ಸರಕಾರಿ ಶಾಲೆಯಲ್ಲೂ ದುಡಿದ ಅನುಭವ ಇರುವ ಕಾರಣ ನಾನು ಹೇಳುವುದಿಷ್ಟೆ. ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಂತೆಯೇ ಇದು ಕೂಡಾ. ಸರಕಾರವೂ ಶಾಲೆಗಳಿಗೆ ಬೇಕಾದ ಎಲ್ಲಾ ಅನುದಾನಗಳನ್ನು ಕೊಡುತ್ತದೆ. ಇಲ್ಲಿ ನಾವು ಭೌತಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಎಲ್ಲಾ ಕೋನಗಳಿಂದ ಹೇಳ ಹೊರಟರೆ ನಾನು ಎರಡೂ ಶಿಕ್ಷಣ ವ್ಯವಸ್ಥೆಗಳಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳನ್ನು ಪಟ್ಟಿ ಮಾಡಬಲ್ಲೆ.
   ಶಾಲಾಡಳಿತ ಬೇರೆ ಬೇರೆಯಾಗಿದ್ದರೂ ಸರಕಾರಿಯಾದರೂ, ಖಾಸಗಿಯಾದರೂ ಶಿಕ್ಷಕರು ಒಂದೇ. ಪ್ರತಿಯೊಬ್ಬರೂ ತನ್ನ ವಿದ್ಯಾರ್ಥಿ ಮೇಲೆ  ಹೋಗಬೇಕೆಂದು ಬಯಸುವವರೇ. ಆದರೆ ಖಾಸಗಿ ಶಾಲೆಗೆ ಬರುವ ಮಕ್ಕಳು ೨ನೇ, ೩ನೆ ಕೆಲವು ೪ನೇ ಜನರೇಶನ್ ಕಲಿಕಾರ್ಥಿಗಳು! ಅದೇ ಸರಕಾರಿ ಶಾಲೆಗಳಲ್ಲಿ ಓದುತ್ತಿರವ ಹೆಚ್ಚಿನ ವಿದ್ಯಾರ್ಥಿಗಳು ಮೊದಲ ತಪ್ಪಿದರೆ ಎರಡನೆ ಜನರೇಶನ್ ವಿದ್ಯಾರ್ಥಿಗಳು! ಅವರಿಂದಲೇ ಮನೆ ಬೆಳಗಬೇಕು ಅಥವಾ ಅವರು ಕಲಿತು ತಮ್ಮ ಹಿರಿಯರಿಗೆ ಹೇಳಿ ಕೊಡಬೇಕಾದವರು. ಅವನಾದರೂ ಕಲಿತು ಏನಾದರೂ ಕೆಲಸಕ್ಕೆ ಸೇರಲಿ ನಮ್ಮಂತೆ ಕಷ್ಟ ಪಡೋದು ಬೇಡ ಎಂಬ ಯೋಚನೆ ಪೋಷಕರಿಗೆ! ಆದರೇನು! ಹೆಚ್ಚಿನ ಪೋಷಕರು ಕುಡುಕರು, ಕೆಲವು ತಾಯಿ ತಂದೆ ಇಬ್ಬರೂ ಸಂಜೆಯಾದರೆ ಟೈಟು! ಪಾಪ ಮಕ್ಕಳ ಅವಸ್ಥೆ ಯಾರು ಕೇಳಬೇಕೋ! ಬುದ್ಧಿ ಹೇಳಬೇಕಾದವರಿಗೆ ಮಕ್ಕಳೇ ಬುದ್ಧಿ ಕಲಿಸುವ ಕಾರ್ಯ ಮಾಡಬೇಕು. ಇನ್ನು ಕೆಲವರ ಮನೆಯಲ್ಲಿ ಕತ್ತಲಾದ ಕೂಡಲೇ ತಂದೆ ಅನ್ನಿಸಿಕೊಂಡ ಪ್ರಾಣಿಯ ಗಲಾಟೆ, ಪೆಟ್ಟು ಪ್ರಾರಂಭವಾಗಿ ಮನೆ ರಣರಂಗವಾಗಿರುವಾಗ ಮನೆ ಯಾವ ರೀತಿಯ ಪಾಠ ಶಾಲೆಯಾಗಬಹುದು ನೀವೇ ಯೋಚಿಸಿ. ಇನ್ನು ಕಲಿಕೆ, ಸರಕಾರ ಹೇಳುವ  ಶೇಕಡಾ ನೂರರ ಫಲಿತಾಂಶ ಸಾಧ್ಯವೇ ಹೇಳಿ.
   ಆದರೆ ಈ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲಿಸಿ ಮಗುವನ್ನು ಮುಂದೆ ತರುವ ಗುರುತರ ಜವಾಬ್ದಾರಿ ಸರಕಾರಿ ಶಾಲೆಯ ಶಿಕ್ಷಕರ ಮೇಲಿದೆ. ಕೆಲವೊಂದು ಪ್ರಾಥಮಿಕ ಶಾಲೆಯ ಮಕ್ಕಳು ಅಮ್ಮನಿಗಿಂತ ತಮ್ಮ ಶಿಕ್ಷಕಿಯ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಇನ್ನು ಕೆಲವು ಮಕ್ಕಳು ಶಾಲೆಯಲ್ಲಿ ಹೊಟ್ಟೆ ತುಂಬ ಸಿಗುವ ಊಟಕ್ಕಾಗಿ,ಹಾಲಿಗಾಗಿ ಶಾಲೆಗೆ ಈಗಲೂ ಬರುತ್ತಾರೆಂದರೆ ಅತಿಶಯೋಕ್ತಿಯಿಲ್ಲ. ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಶಾಲೆಗೆ ಬಂದರಷ್ಟೆ ನೆಮ್ಮದಿ. ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಯಾಕೆ ಬರುತ್ತೇವೆಂದೇ ಗೊತ್ತಿಲ್ಲ. ಹಲವು ವಿದ್ಯಾರ್ಥಿಗಳಿಗೆ ಶಾಲೆ, ಗಣಿತ, ಇಂಗ್ಲಿಷ್, ಹಿಂದಿ ಎಂದರಾಗದು. ಬದಲಾಗಿ ಮದುವೆ ಮನೆ, ಪೂಜೆ, ಬಂಧುಗಳ ಮನೆ, ಹಬ್ಬ, ಅಜ್ಜಿಯ ಮುದ್ದು, ತೋಟ-ಗದ್ದೆಯ ಕೆಲಸ ಇಷ್ಟ. ಇಂತಹ ವಿವಿಧ ಆಯಾಮದಲ್ಲಿ ಯೋಚಿಸುವ ಕಲಿಕೆಯ ಬೆಲೆಯೇ ಅರಿತಿರದ ಮಕ್ಕಳ ಜೀವನ ರೂಪಿಸುವ ಬಹುದೊಡ್ಡ ಸವಾಲು ಸರಕಾರಿ ಶಿಕ್ಷಕರದ್ದು.
   ಅದರೊಂದಿಗೆ ತಮ್ಮದೇ ಮಕ್ಕಳೆಂಬ ಭಾವನೆಯಿಂದ ಅವರನ್ನು ನೋಡಬೇಕಿದೆ. ಅವರ ಜೀವನದ ರೂವಾರಿಗಳು ಶಿಕ್ಷಕರೇ. ಮುಂದೆ ಜೀವನದಲ್ಲಿ ಅವರು ಯಾವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು, ಅವರಲ್ಲಿ ಹುದುಗಿರುವ ಸುಪ್ತವಾದ ಗುಣ, ಕಲೆಗಳನ್ನು ಹುಡುಕಿ ತೆಗೆದು ಅವರನ್ನು ಆ ದಿಸೆಯಲ್ಲಿ ಬೆಳೆಸುವವರು ಅವರೇ. ಎಷ್ಟೋ ಜನ ಶಿಕ್ಷಕರು ಉತ್ತಮ ಕಲಿಕೆಯ ಬಡ ವಿದ್ಯಾರ್ಥಿಗೆ ತಾವೇ ಬಟ್ಟೆ ಪುಸ್ತಕ ತೆಗೆದು ಕೊಟ್ಟರೆ, ಮತ್ತೆ ಕೆಲವು ಶಿಕ್ಷಕರು ತಮ್ಮ ಮನೆಯಲ್ಲೆ ತಮ್ಮ ಮಕ್ಕಳಂತೆ ಅವರನ್ನು ಸಾಕುವವರಿದ್ದಾರೆ! ತಮ್ಮ ಪಾಠದ ಅವಧಿಯಲ್ಲಿ ಪಾಠ ಪ್ರವಚನ ಬೋಧಿಸಲು ಸಾಧ್ಯವಾಗದೆ ಇರುವ ಘಟನೆಗಳು ಅನೇಕ ಇರುತ್ತವೆ ಈಗಿನ ಸರಕಾರಿ ಶಿಕ್ಷಣ ಪದ್ಧತಿಯಲ್ಲಿ. ಉದಾಹರಣೆಗೆ ಕಂಪ್ಯೂಟರ್, ಸ್ಕೌಟ್, ಗೈಡ್, ಸೇವಾದಳ, ವಿಷಯ ತರಬೇತಿಗಳು, ಮೀಟಿಂಗ್ ಗಳು, ವಿಸಿಟ್ ಗಳು, ದಾಖಲೆಗಳ ನಿರ್ವಹಣೆ.. ಖಾಸಗಿ ಶಾಲೆಗಳಲ್ಲಿ ಆಯಾ, ಪಿಓನ್, ಕ್ಲರ್ಕ್ ಗಳಿದ್ದಂತೆ ಸರಕಾರಿ ಶಾಲೆಗಳಲ್ಲಿ ಇರುವುದಿಲ್ಲ, ಇದ್ದರೂ ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ! ಉಳಿದ ಶಾಲೆಗಳಲ್ಲೆಲ್ಲ ಮಕ್ಕಳು, ಟೀಚರ್ ಗಳೇ ಪ್ಲಂಬರ್ಗಳು, ಎಲೆಕ್ಟ್ರಿಷಿಯನ್ ಗಳು, ಪಿಓನುಗಳು,ಸಪ್ಲಾಯರ್ ಗಳು,ಆಯಾಗಳು! ಕೆಲವು ಕಡೆ ಅಡಿಗೆಯವರು ಕೂಡಾ!
  ಅದರಿಂದ ಸರಕಾರಿ ಶಾಲೆಗಳಲ್ಲಿ ಕಲಿಕೆಯೊಂದಿಗೆ ಜೀವನ ಮೌಲ್ಯಗಳನ್ನೂ ಅರಿವಿಲ್ಲದೆ ಕಲಿಯುವರು. ಬಡತನ ಜೀವನದಲ್ಲಿ ಎಲ್ಲವನ್ನೂ ಕಲಿಸುವುದಂತೆ. ಅಂತೆಯೇ ಕೂಡಿ ಬಾಳುವುದು, ಪರಸ್ಪರ ಸಹಾಯ, ಒಗ್ಗಟ್ಟು  ಕಲಿಯಲು ಶಾಲೆಯೇ ದೇವಾಲಯ! ಮೇಲು-ಕೀಳು, ಜಾತಿ ಪದ್ಧತಿಯ ಕೋಟೆ ಮಕ್ಕಳಲ್ಲಿಲ್ಲ, ಅದನ್ನು ಸರಕಾರದ ಸವಲತ್ತು, ಲೆಕ್ಕ, ಫೀಜುಗಳಲ್ಲಿ ತೋರಿಸಲಾಗುತ್ತದೆಯೇ ಹೊರತು ತರಗತಿಯೊಳಗೆ ಮೈಮುನ, ಜಾರ್ಜ್, ಗಣೇಶ ಎಲ್ಲರೂ ಒಂದೇ.
     ಕಲಿಕೆ ಎಂದರೆ ಓದು ಬರಹ ಮಾತ್ರವಲ್ಲ. ಜೀವನ ಪಾಠ. ಮುಂದಿನ ಜೀವನಕ್ಕೆ ಅಡಿಗಲ್ಲು. ಭಾರತದ ಮುಂದಿನ ಬಲಿಷ್ಠ ರಾಷ್ಟ್ರ ಕಟ್ಟುವ ಪ್ರಜೆಯ ನಿರ್ಮಾಣ. ಆ ದಿಸೆಯಲ್ಲಿ ಕಲೋತ್ಸವ, ಆಟೋಟ ಸ್ಪರ್ಧೆಗಳು, ಪ್ರತಿಭಾ ಕಾರಂಜಿ, ದಿನಾಚರಣೆಗಳು, ಪ್ರವಾಸ, ಶಾಲಾ ಕ್ರೀಡೋತ್ಸವ, ವಾರ್ಷಿಕೋತ್ಸವ, ಬೀಳ್ಕೊಡುಗೆ ಸಮಾರಂಭಗಳು ಮಕ್ಕಳ ಮುಂದಿನ ಜೀವನ ರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಶಾಲೆಯಲ್ಲಿ ನಡೆಯುವ ನೃತ್ಯ, ಪ್ರಬಂಧ, ಗಾಯನ, ಲೇಖನ ಸ್ಪರ್ಧೆಗಳು, ಗುಂಪು, ನಾಯಕತ್ವ, ಸಂಸತ್, ಶಾಲಾ ನಾಯಕನ ಚುನಾವಣಾ ಆಯ್ಕೆ, ಚರಚೆಗಳು, ರಸಪ್ರಶ್ನೆ, ಜಾಣತನದ ಆಟಗಳು, ಕಾರ್ಯಕ್ರಮ ನಿರ್ವಹಣೆ, ಸ್ವಯಂ ಸೇವಕರು, ಜೀವನಕ್ಕೆ ಸರಿಯಾದ ಅಡಿಗಲ್ಲನ್ನು ಹಾಕುವಲ್ಲಿ ಯಶಸ್ವಿಯಾಗಿವೆ. ಗೆದ್ದಾಗ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವ ಪುಟ್ಟ ಕೈಗಳೇ ಬಿದ್ದಾಗ ಹಿಡಿದೆತ್ತಲು ಬರುತ್ತವೆ. ಅವುಗಳೇ ನಿಜವಾದ ಮೌಲ್ಯಗಳು. ಇವುಗಳನ್ನೆಲ್ಲ ಶಿಕ್ಷಣ ಕಲಿಸುತ್ತದೆ.
    ಇದ್ದುದರಲ್ಲಿ ಹಂಚಿ ಬದುಕುವ ಗುಣ, ಸ್ಕೌಟ್, ಗೈಡ್ಸ್ ನಲ್ಲಿ ಸಾಹಸಗಳು, ಕಾರ್ಯಕ್ರಮ, ತರಗತಿಗಳಲ್ಲಿ ತೊಡಗಿಸಿಕೊಳ್ಳುವಿಕೆ, ರಾತ್ರಿ ತರಗತಿಯಲ್ಲಿ ಪರಿಶ್ರಮದ ಮಹತ್ವ, ವಿಶೇಷ ತರಗತಿಗಳಲ್ಲಿ ಸಮಯದ ಮಹತ್ವ, ಕಾರ್ಯಕ್ರಮಗಳ ಕೊನೆಯಲ್ಲಿ ಉಳಿದ ವಸ್ತುಗಳ ಜವಾಬ್ದಾರಿ, ಪೋಲಾಗದಂತೆ ವಿಲೇವಾರಿ ಇವೆಲ್ಲ ನಿತ್ಯ ಜೀವನಕ್ಕೆ ಬೇಕಾದ ಕಲಿಕೆಗಳೇ ಅಲ್ಲವೇ?
   ಕಷ್ಟ ಪಟ್ಟು ಕಲಿತ ಯಾವುದೇ ಕೆಲಸವೂ ವ್ಯರ್ಥ ಅನ್ನಿಸದು. ಅಂತೆಯೇ ಈ ಗುಣಗಳು ಕೂಡಾ. ಖಾಸಗಿ ಶಾಲೆಯಲ್ಲಿ ಈ ಎಲ್ಲಾ ಜವಾಬ್ದಾರಿಯನ್ನು ಪೋಷಕ ವೃಂದ, ಶಾಲಾಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಹಾಗೂ ಶಿಕ್ಷಕ ಬಳಗ ಹೊತ್ತರೆ, ಸರಕಾರಿ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರೇ ಕೇಂದ್ರ ಬಿಂದುಗಳು. ವಿದ್ಯಾರ್ಥಿಗಳಿಗೆ ಅವರೇ ಮಾರ್ಗದರ್ಶಿಗಳು. ಅವರಂತಾಗಬೇಕೆಂಬುದೇ ಮೊದಲ ಗುರಿ.
  ಈ ನಿಟ್ಟಿನಲ್ಲಿ ಸರಕಾರಿ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚು ಮೌಲ್ಯಯುತವಾಗಿದೆ ಹಾಗೂ ಜವಾಬ್ದಾರಿಯುತವೂ ಆಗಿದೆ ಎಂಬುದು ನನ್ನ ಅನಿಸಿಕೆ. ನೀವೇನಂತೀರಿ?
@ಪ್ರೇಮ್@

1091. ಈಗಿನ ಶಿಕ್ಷಣದ ವ್ಯವಸ್ಥೆ

ಲೇಖನ

ವಿಷಯ-ಈಗಿನ ಶಿಕ್ಷಣದ ವ್ಯವಸ್ಥೆ

   ಶಿಕ್ಷಣ ಎಂದಾಗ ಮೊದಲನೆಯದಾಗಿ ನೆನಪಿಗೆ ಬರುವುದು ಮನೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಆದರೆ ಕಾಲ ಬದಲಾಗಿದೆ. ಈಗ ಮೊಬೈಲೇ ಮೊದಲ ಗುರು.ಮಗುವಿಗೆ ಪ್ರಿ ಸ್ಕೂಲ್ ಮೊದಲ ಶಾಲೆ. ಈಗಿನ ಅಮ್ಮಂದಿರಿಗೆ ಸಮಯವಿಲ್ಲವಲ್ಲ! ತಾವು ದುಡಿದು ಕೆಲಸದವರಿಗೆ ಸಂಬಳ ಕೊಡಬೇಕು! ಪಾಪ ಮಕ್ಕಳ ಗತಿ! ಯಾವುದೋ ಕೆಲಸದವಳ ಜೊತೆಯೋ, ಸಂಬಂಧಿಕರ ಮನೆಯಲ್ಲೋ, ಸಂಬಂಧವೇ ಇಲ್ಲದವರ ಮನೆಯಲ್ಲೋ ಹುಟ್ಟಿದ ತಪ್ಪಿಗೆ ಬೆಳೆಯ ಬೇಕಾದ ಪರಿಸ್ಥಿತಿ ಬಂದೊದಗಿದೆ ಇಂದು!
    ಅದೇನೇ ಇರಲಿ, ಮೂಲ ಹುಡುಕಲು ಹೋಗಬಾರದಂತೆ! ಮೊದಲು ಆರು ವರುಷವಿದ್ದ ಶಾಲಾ ವಯಸ್ಸೀಗ ಮೂರು ವರುಷಕ್ಕೆ ಇಳಿದಿದೆ. ಮೂರು ವರುಷ ಹತ್ತು ತಿಂಗಳಲ್ಲಿ ಶಾಲೆಗೆ ಸೇರಿಸುವ ನಿಯಮವಿದ್ದರೂ ಪೋಷಕರಿಗೆ ತಾಳ್ಮೆ ಎಂಬುದಿಲ್ಲ, ಅದಕ್ಕಿಂತ ಮೊದಲೇ ತಂದು ತುರುಕಿ ಬಿಡುತ್ತಾರೆ ಪ್ರಿ ಕೆಜಿ ತರಗತಿಗೆ!
     ಹಲ ಶಾಲೆಗಳೂ ಪ್ರಿಕೆಜಿಗೇ ಲಕ್ಷಗಟ್ಟಲೆ ಪಡೆದು ತಮ್ಮ ಕಟ್ಟಡ ವೃದ್ಧಿಸುತ್ತಲೇ ಹೋಗುತ್ತಿವೆ. ಇಲ್ಲಿ ನಾವು ಮಾತನಾಡಬೇಕಾದುದು ಸರಕಾರಿ ಶಾಲೆ ಅಥವಾ ಖಾಸಗಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಬಗ್ಗೆ.
     ನಾನೊಬ್ಬ ಶಿಕ್ಷಕಿಯಾಗಿದ್ದು ಖಾಸಗಿ ಶಾಲೆಯಲ್ಲೂ, ಸರಕಾರಿ ಶಾಲೆಯಲ್ಲೂ ದುಡಿದ ಅನುಭವ ಇರುವ ಕಾರಣ ನಾನು ಹೇಳುವುದಿಷ್ಟೆ. ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಂತೆಯೇ ಇದು ಕೂಡಾ. ಸರಕಾರವೂ ಶಾಲೆಗಳಿಗೆ ಬೇಕಾದ ಎಲ್ಲಾ ಅನುದಾನಗಳನ್ನು ಕೊಡುತ್ತದೆ. ಇಲ್ಲಿ ನಾವು ಭೌತಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಎಲ್ಲಾ ಕೋನಗಳಿಂದ ಹೇಳ ಹೊರಟರೆ ನಾನು ಎರಡೂ ಶಿಕ್ಷಣ ವ್ಯವಸ್ಥೆಗಳಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳನ್ನು ಪಟ್ಟಿ ಮಾಡಬಲ್ಲೆ.
   ಶಾಲಾಡಳಿತ ಬೇರೆ ಬೇರೆಯಾಗಿದ್ದರೂ ಸರಕಾರಿಯಾದರೂ, ಖಾಸಗಿಯಾದರೂ ಶಿಕ್ಷಕರು ಒಂದೇ. ಪ್ರತಿಯೊಬ್ಬರೂ ತನ್ನ ವಿದ್ಯಾರ್ಥಿ ಮೇಲೆ  ಹೋಗಬೇಕೆಂದು ಬಯಸುವವರೇ. ಆದರೆ ಖಾಸಗಿ ಶಾಲೆಗೆ ಬರುವ ಮಕ್ಕಳು ೨ನೇ, ೩ನೆ ಕೆಲವು ೪ನೇ ಜನರೇಶನ್ ಕಲಿಕಾರ್ಥಿಗಳು! ಅದೇ ಸರಕಾರಿ ಶಾಲೆಗಳಲ್ಲಿ ಓದುತ್ತಿರವ ಹೆಚ್ಚಿನ ವಿದ್ಯಾರ್ಥಿಗಳು ಮೊದಲ ತಪ್ಪಿದರೆ ಎರಡನೆ ಜನರೇಶನ್ ವಿದ್ಯಾರ್ಥಿಗಳು! ಅವರಿಂದಲೇ ಮನೆ ಬೆಳಗಬೇಕು ಅಥವಾ ಅವರು ಕಲಿತು ತಮ್ಮ ಹಿರಿಯರಿಗೆ ಹೇಳಿ ಕೊಡಬೇಕಾದವರು. ಅವನಾದರೂ ಕಲಿತು ಏನಾದರೂ ಕೆಲಸಕ್ಕೆ ಸೇರಲಿ ನಮ್ಮಂತೆ ಕಷ್ಟ ಪಡೋದು ಬೇಡ ಎಂಬ ಯೋಚನೆ ಪೋಷಕರಿಗೆ! ಆದರೇನು! ಹೆಚ್ಚಿನ ಪೋಷಕರು ಕುಡುಕರು, ಕೆಲವು ತಾಯಿ ತಂದೆ ಇಬ್ಬರೂ ಸಂಜೆಯಾದರೆ ಟೈಟು! ಪಾಪ ಮಕ್ಕಳ ಅವಸ್ಥೆ ಯಾರು ಕೇಳಬೇಕೋ! ಬುದ್ಧಿ ಹೇಳಬೇಕಾದವರಿಗೆ ಮಕ್ಕಳೇ ಬುದ್ಧಿ ಕಲಿಸುವ ಕಾರ್ಯ ಮಾಡಬೇಕು. ಇನ್ನು ಕೆಲವರ ಮನೆಯಲ್ಲಿ ಕತ್ತಲಾದ ಕೂಡಲೇ ತಂದೆ ಅನ್ನಿಸಿಕೊಂಡ ಪ್ರಾಣಿಯ ಗಲಾಟೆ, ಪೆಟ್ಟು ಪ್ರಾರಂಭವಾಗಿ ಮನೆ ರಣರಂಗವಾಗಿರುವಾಗ ಮನೆ ಯಾವ ರೀತಿಯ ಪಾಠ ಶಾಲೆಯಾಗಬಹುದು ನೀವೇ ಯೋಚಿಸಿ. ಇನ್ನು ಕಲಿಕೆ, ಸರಕಾರ ಹೇಳುವ  ಶೇಕಡಾ ನೂರರ ಫಲಿತಾಂಶ ಸಾಧ್ಯವೇ ಹೇಳಿ.
   ಆದರೆ ಈ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲಿಸಿ ಮಗುವನ್ನು ಮುಂದೆ ತರುವ ಗುರುತರ ಜವಾಬ್ದಾರಿ ಸರಕಾರಿ ಶಾಲೆಯ ಶಿಕ್ಷಕರ ಮೇಲಿದೆ. ಕೆಲವೊಂದು ಪ್ರಾಥಮಿಕ ಶಾಲೆಯ ಮಕ್ಕಳು ಅಮ್ಮನಿಗಿಂತ ತಮ್ಮ ಶಿಕ್ಷಕಿಯ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಇನ್ನು ಕೆಲವು ಮಕ್ಕಳು ಶಾಲೆಯಲ್ಲಿ ಹೊಟ್ಟೆ ತುಂಬ ಸಿಗುವ ಊಟಕ್ಕಾಗಿ,ಹಾಲಿಗಾಗಿ ಶಾಲೆಗೆ ಈಗಲೂ ಬರುತ್ತಾರೆಂದರೆ ಅತಿಶಯೋಕ್ತಿಯಿಲ್ಲ. ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಶಾಲೆಗೆ ಬಂದರಷ್ಟೆ ನೆಮ್ಮದಿ. ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಯಾಕೆ ಬರುತ್ತೇವೆಂದೇ ಗೊತ್ತಿಲ್ಲ. ಹಲವು ವಿದ್ಯಾರ್ಥಿಗಳಿಗೆ ಶಾಲೆ, ಗಣಿತ, ಇಂಗ್ಲಿಷ್, ಹಿಂದಿ ಎಂದರಾಗದು. ಬದಲಾಗಿ ಮದುವೆ ಮನೆ, ಪೂಜೆ, ಬಂಧುಗಳ ಮನೆ, ಹಬ್ಬ, ಅಜ್ಜಿಯ ಮುದ್ದು, ತೋಟ-ಗದ್ದೆಯ ಕೆಲಸ ಇಷ್ಟ. ಇಂತಹ ವಿವಿಧ ಆಯಾಮದಲ್ಲಿ ಯೋಚಿಸುವ ಕಲಿಕೆಯ ಬೆಲೆಯೇ ಅರಿತಿರದ ಮಕ್ಕಳ ಜೀವನ ರೂಪಿಸುವ ಬಹುದೊಡ್ಡ ಸವಾಲು ಸರಕಾರಿ ಶಿಕ್ಷಕರದ್ದು.
   ಅದರೊಂದಿಗೆ ತಮ್ಮದೇ ಮಕ್ಕಳೆಂಬ ಭಾವನೆಯಿಂದ ಅವರನ್ನು ನೋಡಬೇಕಿದೆ. ಅವರ ಜೀವನದ ರೂವಾರಿಗಳು ಶಿಕ್ಷಕರೇ. ಮುಂದೆ ಜೀವನದಲ್ಲಿ ಅವರು ಯಾವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು, ಅವರಲ್ಲಿ ಹುದುಗಿರುವ ಸುಪ್ತವಾದ ಗುಣ, ಕಲೆಗಳನ್ನು ಹುಡುಕಿ ತೆಗೆದು ಅವರನ್ನು ಆ ದಿಸೆಯಲ್ಲಿ ಬೆಳೆಸುವವರು ಅವರೇ. ಎಷ್ಟೋ ಜನ ಶಿಕ್ಷಕರು ಉತ್ತಮ ಕಲಿಕೆಯ ಬಡ ವಿದ್ಯಾರ್ಥಿಗೆ ತಾವೇ ಬಟ್ಟೆ ಪುಸ್ತಕ ತೆಗೆದು ಕೊಟ್ಟರೆ, ಮತ್ತೆ ಕೆಲವು ಶಿಕ್ಷಕರು ತಮ್ಮ ಮನೆಯಲ್ಲೆ ತಮ್ಮ ಮಕ್ಕಳಂತೆ ಅವರನ್ನು ಸಾಕುವವರಿದ್ದಾರೆ! ತಮ್ಮ ಪಾಠದ ಅವಧಿಯಲ್ಲಿ ಪಾಠ ಪ್ರವಚನ ಬೋಧಿಸಲು ಸಾಧ್ಯವಾಗದೆ ಇರುವ ಘಟನೆಗಳು ಅನೇಕ ಇರುತ್ತವೆ ಈಗಿನ ಸರಕಾರಿ ಶಿಕ್ಷಣ ಪದ್ಧತಿಯಲ್ಲಿ. ಉದಾಹರಣೆಗೆ ಕಂಪ್ಯೂಟರ್, ಸ್ಕೌಟ್, ಗೈಡ್, ಸೇವಾದಳ, ವಿಷಯ ತರಬೇತಿಗಳು, ಮೀಟಿಂಗ್ ಗಳು, ವಿಸಿಟ್ ಗಳು, ದಾಖಲೆಗಳ ನಿರ್ವಹಣೆ.. ಖಾಸಗಿ ಶಾಲೆಗಳಲ್ಲಿ ಆಯಾ, ಪಿಓನ್, ಕ್ಲರ್ಕ್ ಗಳಿದ್ದಂತೆ ಸರಕಾರಿ ಶಾಲೆಗಳಲ್ಲಿ ಇರುವುದಿಲ್ಲ, ಇದ್ದರೂ ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ! ಉಳಿದ ಶಾಲೆಗಳಲ್ಲೆಲ್ಲ ಮಕ್ಕಳು, ಟೀಚರ್ ಗಳೇ ಪ್ಲಂಬರ್ಗಳು, ಎಲೆಕ್ಟ್ರಿಷಿಯನ್ ಗಳು, ಪಿಓನುಗಳು,ಸಪ್ಲಾಯರ್ ಗಳು,ಆಯಾಗಳು! ಕೆಲವು ಕಡೆ ಅಡಿಗೆಯವರು ಕೂಡಾ!
  ಅದರಿಂದ ಸರಕಾರಿ ಶಾಲೆಗಳಲ್ಲಿ ಕಲಿಕೆಯೊಂದಿಗೆ ಜೀವನ ಮೌಲ್ಯಗಳನ್ನೂ ಅರಿವಿಲ್ಲದೆ ಕಲಿಯುವರು. ಬಡತನ ಜೀವನದಲ್ಲಿ ಎಲ್ಲವನ್ನೂ ಕಲಿಸುವುದಂತೆ. ಅಂತೆಯೇ ಕೂಡಿ ಬಾಳುವುದು, ಪರಸ್ಪರ ಸಹಾಯ, ಒಗ್ಗಟ್ಟು  ಕಲಿಯಲು ಶಾಲೆಯೇ ದೇವಾಲಯ! ಮೇಲು-ಕೀಳು, ಜಾತಿ ಪದ್ಧತಿಯ ಕೋಟೆ ಮಕ್ಕಳಲ್ಲಿಲ್ಲ, ಅದನ್ನು ಸರಕಾರದ ಸವಲತ್ತು, ಲೆಕ್ಕ, ಫೀಜುಗಳಲ್ಲಿ ತೋರಿಸಲಾಗುತ್ತದೆಯೇ ಹೊರತು ತರಗತಿಯೊಳಗೆ ಮೈಮುನ, ಜಾರ್ಜ್, ಗಣೇಶ ಎಲ್ಲರೂ ಒಂದೇ.
     ಕಲಿಕೆ ಎಂದರೆ ಓದು ಬರಹ ಮಾತ್ರವಲ್ಲ. ಜೀವನ ಪಾಠ. ಮುಂದಿನ ಜೀವನಕ್ಕೆ ಅಡಿಗಲ್ಲು. ಭಾರತದ ಮುಂದಿನ ಬಲಿಷ್ಠ ರಾಷ್ಟ್ರ ಕಟ್ಟುವ ಪ್ರಜೆಯ ನಿರ್ಮಾಣ. ಆ ದಿಸೆಯಲ್ಲಿ ಕಲೋತ್ಸವ, ಆಟೋಟ ಸ್ಪರ್ಧೆಗಳು, ಪ್ರತಿಭಾ ಕಾರಂಜಿ, ದಿನಾಚರಣೆಗಳು, ಪ್ರವಾಸ, ಶಾಲಾ ಕ್ರೀಡೋತ್ಸವ, ವಾರ್ಷಿಕೋತ್ಸವ, ಬೀಳ್ಕೊಡುಗೆ ಸಮಾರಂಭಗಳು ಮಕ್ಕಳ ಮುಂದಿನ ಜೀವನ ರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಶಾಲೆಯಲ್ಲಿ ನಡೆಯುವ ನೃತ್ಯ, ಪ್ರಬಂಧ, ಗಾಯನ, ಲೇಖನ ಸ್ಪರ್ಧೆಗಳು, ಗುಂಪು, ನಾಯಕತ್ವ, ಸಂಸತ್, ಶಾಲಾ ನಾಯಕನ ಚುನಾವಣಾ ಆಯ್ಕೆ, ಚರಚೆಗಳು, ರಸಪ್ರಶ್ನೆ, ಜಾಣತನದ ಆಟಗಳು, ಕಾರ್ಯಕ್ರಮ ನಿರ್ವಹಣೆ, ಸ್ವಯಂ ಸೇವಕರು, ಜೀವನಕ್ಕೆ ಸರಿಯಾದ ಅಡಿಗಲ್ಲನ್ನು ಹಾಕುವಲ್ಲಿ ಯಶಸ್ವಿಯಾಗಿವೆ. ಗೆದ್ದಾಗ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವ ಪುಟ್ಟ ಕೈಗಳೇ ಬಿದ್ದಾಗ ಹಿಡಿದೆತ್ತಲು ಬರುತ್ತವೆ. ಅವುಗಳೇ ನಿಜವಾದ ಮೌಲ್ಯಗಳು. ಇವುಗಳನ್ನೆಲ್ಲ ಶಿಕ್ಷಣ ಕಲಿಸುತ್ತದೆ.
    ಇದ್ದುದರಲ್ಲಿ ಹಂಚಿ ಬದುಕುವ ಗುಣ, ಸ್ಕೌಟ್, ಗೈಡ್ಸ್ ನಲ್ಲಿ ಸಾಹಸಗಳು, ಕಾರ್ಯಕ್ರಮ, ತರಗತಿಗಳಲ್ಲಿ ತೊಡಗಿಸಿಕೊಳ್ಳುವಿಕೆ, ರಾತ್ರಿ ತರಗತಿಯಲ್ಲಿ ಪರಿಶ್ರಮದ ಮಹತ್ವ, ವಿಶೇಷ ತರಗತಿಗಳಲ್ಲಿ ಸಮಯದ ಮಹತ್ವ, ಕಾರ್ಯಕ್ರಮಗಳ ಕೊನೆಯಲ್ಲಿ ಉಳಿದ ವಸ್ತುಗಳ ಜವಾಬ್ದಾರಿ, ಪೋಲಾಗದಂತೆ ವಿಲೇವಾರಿ ಇವೆಲ್ಲ ನಿತ್ಯ ಜೀವನಕ್ಕೆ ಬೇಕಾದ ಕಲಿಕೆಗಳೇ ಅಲ್ಲವೇ?
   ಕಷ್ಟ ಪಟ್ಟು ಕಲಿತ ಯಾವುದೇ ಕೆಲಸವೂ ವ್ಯರ್ಥ ಅನ್ನಿಸದು. ಅಂತೆಯೇ ಈ ಗುಣಗಳು ಕೂಡಾ. ಖಾಸಗಿ ಶಾಲೆಯಲ್ಲಿ ಈ ಎಲ್ಲಾ ಜವಾಬ್ದಾರಿಯನ್ನು ಪೋಷಕ ವೃಂದ, ಶಾಲಾಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಹಾಗೂ ಶಿಕ್ಷಕ ಬಳಗ ಹೊತ್ತರೆ, ಸರಕಾರಿ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರೇ ಕೇಂದ್ರ ಬಿಂದುಗಳು. ವಿದ್ಯಾರ್ಥಿಗಳಿಗೆ ಅವರೇ ಮಾರ್ಗದರ್ಶಿಗಳು. ಅವರಂತಾಗಬೇಕೆಂಬುದೇ ಮೊದಲ ಗುರಿ.
  ಈ ನಿಟ್ಟಿನಲ್ಲಿ ಸರಕಾರಿ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚು ಮೌಲ್ಯಯುತವಾಗಿದೆ ಹಾಗೂ ಜವಾಬ್ದಾರಿಯುತವೂ ಆಗಿದೆ ಎಂಬುದು ನನ್ನ ಅನಿಸಿಕೆ. ನೀವೇನಂತೀರಿ?
@ಪ್ರೇಮ್@

1090. ನಮಗೇಕೆ ವೈರಿಗಳಿರುತ್ತಾರೆ?

ನಾವು ಒಳ್ಳೆಯವರಾದರೂ ನಮಗೇಕೆ ವೈರಿಗಳಿರುತ್ತಾರೆ?

   ಹೌದು, ನಾವು ಕೆಟ್ಟವರಲ್ಲ, ನಾವು ಒಳ್ಳೆಯವರೇ. ನಾವು ಮಾಡುವುದು ಪರೋಪಕಾರ, ಸಹಿಷ್ಣುತೆ, ಪರರಿಗಾಗಿ ದಾನ, ಧರ್ಮ ಪಾಲನೆ, ಯಾರ ಮನ ನೋಯಿಸಲು ಇಚ್ಚಿಸೆವು, ನಾವಾಯಿತು ನಮ್ಮ ಕೆಲಸವಾಯಿತು. ಆದರೂ ಮನ ನೋಯಿಸುವವರು ಹಲವರಿಹರು. ಕಾರಣ ಇದ್ದೋ, ಇಲ್ಲದೆಯೋ ಹಲವಾರು ಕ್ಷಣಗಳಲ್ಲಿ ,ಹಲವಾರು ದಿನಗಳಲ್ಲಿ ಹಲವಾರು ಮನಗಳು ನಮ್ಮಲ್ಲಿ ದ್ವೇಷದ ಬೀಜ ಬಿತ್ತುತ್ತವೆ. ಅದು ಹೇಗೆ, ಏನು, ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರ ಯಾರ ಬಳಿಯೂ ಇರುವುದಿಲ್ಲ. ಯಾರದ್ದೂ ತಪ್ಪಿರುವುದಿಲ್ಲ, ಒಬ್ಬರು ಮತ್ತೊಬ್ಬರ ಬಗ್ಗೆ ಹೀಯಾಳಿಸುತ್ತಾ, ತೆಗಳುತ್ತಾ ದಿನ ಕಳೆಯುತ್ತಿರುತ್ತಾರೆ.
      ನೆರೆಮನೆಯಿಲ್ಲದೆ  ಅರಮನೆಯಿಲ್ಲ ಎಂಬುದೊಂದು ಗಾದೆ. ಯಾವ ಮನೆಯಾದರೂ ನೆರೆಮನೆಯಿರಲೇಬೇಕು. ನಮ್ಮ ಹಲವಾರು ಜನರಿಗೆ ನೆರೆಮನೆಯವರ ಕಂಡರಾಗದು. ಪ್ರತಿದಿನ ಜಗಳ, ಪ್ರತಿ ವಸ್ತುವಿಗೂ ಜಗಳ. ಪ್ರತಿ ಜನರ ಮುಖ ನೋಡುವಾಗಲೂ ಊದಿಸಿಕೊಳ್ಳುವ ಸ್ವಭಾವ ಹೆಂಗಸರಿಗೇ ಜಾಸ್ತಿ. ಯಾಕೆ ನಮ್ಮ ಬದುಕು ಹೀಗೆ? ನಾವ್ಯಾಕೆ ಕೆಲವರ ಜೊತೆ ಮುಖ ಸಿಂಡರಿಸುತ್ತೇವೆ? ನಮಗ್ಯಾಕೆ ಅವರು ಮಾಡಿದ್ದೆಲ್ಲಾ ತಪ್ಪೆನಿಸುತ್ತೆ? ನಮ್ಮ ಗುಣವನ್ನೇ ನಾವು ಹಲವು ಸಲ ಮೆಲುಕು ಹಾಕಿದರೂ ನಮ್ಮನ್ನು ಹಲವೆಡೆ ನಾವು ಬಿಟ್ಟು ಕೊಡಲಾರೆವು. ನಮ್ಮ ಮೆದುಳು ಅವರನ್ನು ವೈರಸ್ ಎಂದು ಮೊದಲೇ ಪತ್ತೆಹಚ್ಚಿ, ಏನು ಮಾಡಿದರೂ ಅವರನ್ನು ನಮ್ಮ ಜೀವನದೊಳಗೆ ಬಿಟ್ಟುಕೊಳ್ಳಲಾರದು! ಹಾಗೆಯೇ ಊರಿಡೀ ಸುಳ್ಳ, ಕಳ್ಳ ಎಂದು ಹೇಳಿಸಿಕೊಂಡರೂ ಕೆಲವು ಜನರ ಇನ್ನೊಂದು ಮುಖ ತಿಳಿದ ನಾವು ಪರರ ವಿರೋಧದ ಹೊರತಾಗಿಯೂ ಅವರ ಪರ ವಹಿಸಲು ಹಿಂಜರಿಯಲಾರೆವು. ನಾವೇಕೆ ಹೀಗೆ?
   ಕೆಲವೊಂದು ಅರ್ಥವಿರದ, ಉತ್ತರಗಳಿರದ ಪ್ರಶ್ನೆಗಳು. ಇಂದು ಬೇಡವೆಂದು ಬಿಟ್ಟಿರುವ ಕೆಲಸಗಳನ್ನು ನಾಳೆ ನಾವೇ ಇಷ್ಟಪಟ್ಟು ಮಾಡುವವರಾಗುತ್ತೇವೆ. ಇಂದು ಪ್ರೀತಿಸುವವರನ್ನು ಇನ್ನೊಂದು ಕ್ಷಣದಲ್ಲೆ ಪರಮ ಶತ್ರುವಿನಂತೆ ದ್ವೇಷಿಸಲಾರಂಭಿಸುತ್ತೇವೆ. ಪ್ರೇಮಿ, ಸ್ನೇಹಿತ/ಜೀವದ ಗೆಳತಿ ಅನಿಸಕೊಂಡವರ, ಬಿಟ್ಟಿರಲು ಸಾಧ್ಯವೇ ಇಲ್ಲ ಅಂದುಕೊಂಡವರು ನಮ್ಮನ್ನು ದೂರ ಮಾಡುತ್ತಾರೆ ಅಥವಾ ನಾವೇ ದೂರಾಗುತ್ತೇವೆ. ಭಾವನೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತಾ ಇರುತ್ತವೆ. ಕೆಲವೊಮ್ಮೆ ಜೀವನವನ್ನು ಅತಿಯಾಗಿ ಪ್ರೀತಿಸಿದರೆ ಮಗದೊಮ್ಮೆ ಜೀವನವೇ ಬೇಡವೆನಿಸಿ ಬಿಡುತ್ತದೆ.
    ಒಮ್ಮೆ ಕಲಿಯಲು ಪ್ರೇರೇಪಿಸುತ್ತದೆ ಮನಸ್ಸು, ಮತ್ತೊಮ್ಮೆ ಕಲಿಸಲು! ಒಮ್ಮೊಮ್ಮೆ ಹಲವರಿಗೆ ಸಜ್ಜೆಸ್ಟ್ ಮಾಡುವ ನಾವು ಮತ್ತೊಮ್ಮೆ ನಮಗೆ ಬೇಕಾದಾಗ ಅದನ್ನು ಮರೆತು, ಅದೇ ವಿಚಾರವನ್ನು ಬೇರೆಯವರಿಂದ ಮತ್ತೆ ಕೇಳಿ ತಿಳಿಯುತ್ತೇವೆ. ಮಗದೊಮ್ಮೆ ಏನೂ ಅರಿಯದ ಶೂನ್ಯರಾಗುತ್ತೇವೆ. ಒಮ್ಮೆ ಬ್ರಹ್ಮಾಂಡದಿ ನಾವೇ ಗ್ರೇಟ್ ಅನಿಸಿದರೆ ಮತ್ತೊಮ್ಮೆ ಹುಟ್ಟಿಸಿದ ದೇವರಿಗೆ ಹಿಡಿಶಾಪ ಹಾಕುತ್ತಿರುತ್ತೇವೆ. ನಾನು ಎಂದು ಮೆರೆದರೆ, ನಾವು ಎಂದು ಕಾಲಿಗೂ ಬೀಳುತ್ತೇವೆ. ಜೀವನದ ಮೂಲ, ಕಟುಸತ್ಯ, ಬದಲಾಗುವ ಭಾವ-ಭಾವನೆಗಳು ಇತರರಿಗೂ ಮುಜುಗರ, ಕಿರಿಕಿರಿಯೆನಿಸುವಷ್ಟು!
   ನಾವು ಬದಲಾಗಬೇಕು, ಸರ್ವರಿಗೂ ಹಿತವರಾಗಬೇಕೆಂದು ನಮಗೆ ನಾವೇ ಅಂದುಕೊಂಡು, ಸಂಬಾಳಿಸಿಕೊಂಡು, ತಿದ್ದಿ ನಡೆಯುತ್ತಾ ಹೋಗುತ್ತಿದ್ದರೂ ಸಹ ಬೇಲಿಯ ಮುಳ್ಳು ತಾನಾಗೇ ಸೆರಗಿನ ತುದಿಗೆ ಸಿಕ್ಕಿ ನಮ್ಮನ್ನು ಎಳೆದಾಡಿಸುತ್ತಿರುತ್ತದೆ. ಸತ್ತ ಪ್ರಾಣಿಯ ತಿನ್ನಲು ಕಾಗೆ ಹದ್ದುಗಳು ಮುತ್ತಿಕ್ಕುವಂತೆ ಕಷ್ಟ, ದು:ಖಗಳು ನಮ್ಮನ್ನರಸಿ ಬಂದು ನಮ್ಮ ದೇಹ ಹಾಗೂ ಮನಸ್ಸಿನಲ್ಲೆ ವಾಸ್ತವ್ಯ ಹೂಡಿರುತ್ತವೆ. ಅದ್ಯಾಕೋ ನಮ್ಮನ್ನು ಬಿಟ್ಟು ಹೋಗುವುದೆಂದರೆ ಅವುಗಳಿಗಿಷ್ಟವಿಲ್ಲ. ಆ ನೋವು, ಹತಾಶೆ, ನಿರಾಸೆಗಳ ದಳ್ಳುರಿಯಲ್ಲಿ ನೊಂದು ಬೆಂದ ನಮ್ಮ ಮನ ಹಲವಾರು ದಿಸೆಯಲ್ಲಿ ಆಲೋಚಿಸಿ, ಆಲೋಚಿಸಿ ತಿರುಕನಂತೆ, ಮರ್ಕಟನಂತೆ ಯೋಚಿಸುತ್ತಿರುತ್ತದೆ.
ಯಾವುದೇ ಯೋಚನೆ ಬರಲಿ, ಯಾವುದೇ ಕೆಲಸವಾಗಲಿ, ಯಾರದೇ ಗೆಳೆತನ ಪ್ರೀತಿ ಸಿಗಲಿ, ಬಿಡಲಿ, ಯಾರು ಮುಖ ತಿರುಗಿಸಲಿ, ನಮ್ಮ ಆಶಯವೊಂದೇ. ನಮ್ಮಿಂದಾಗಿ ಇತರರು ಬೆಳೆಯಬೇಕು, ಪರರಿಗೆ ನಮ್ಮಿಂದ ಉಪಕಾರವಾಗಬೇಕೇ ಹೊರತು ಉಪದ್ರವವಾಗಬಾರದು. ಪರರು ನಮ್ಮಂತಾಗಬೇಕೆಂದು ಕನಸು ಕಾಣಬೇಕು, ನಮ್ಮ ಬುದ್ಧಿ ನೋಡಿ ಇತರರೂ ಹುಟ್ಟಿದರೆ ಅವರಂತ ಮಕ್ಕಳು ಹುಟ್ಟಲಿ, ಇದ್ದರೆ ಅಂತಹ ಬಂಧು/ಗೆಳೆಯನಿರಲಿ ಎಂದು ಹೇಳುವಂಥ ಗುಣವುಳ್ಳವರು ನಾವಾಗಬೇಕು. ನೀವೇನಂತೀರಿ?
@ಪ್ರೇಮ್@

1089. ಶರಣು

ಮನದಲಿ ಮೂಡಿಪ ರೂಪಕೆ ಶರಣು,
ನೆನಪಲಿ ಕಾಡಿದ ಯೋಗಿಗೆ ಶರಣು,
ಬುವಿಯಲಿ ನನ್ನಯ ಜೀವವ ತಂದ
ಶಕ್ತಿಯು ಎನ್ನುವ ದೇವಗೆ ಶರಣು...//

ಭಾವನೆ ಮನದಲಿ ತುಂಬಿಸಿ ಬಿಟ್ಟನು
ಕಾಮನೆ ಬಿಡಲದು ಸಲಹೆಯ ಕೊಟ್ಚನು
ಮಾನವನಾಗಿಹೆ ನಡತೆಯ ಕಲಿಯಲು
ದಾನವ ಗುಣವನು ತೊರೆಯಲು ತಿಳಿಸುತ..//

ಕಾಣದ ಲೋಕದಿ ತೆರಳುತ ನುಡಿದನು
"ನಿನ್ನಯ ಜೀವನ ರೂಪಿಸಿ ಬದುಕಲು,
ಮೋಸವ ಮಾಡದೆ ಬಾಳನು ಬೆಳಗಲು,
ನ್ಯಾಯದ ಹಾದಿಯ ಹಿಡಿಯುತ ನಡೆಯಲು//

ಅರಿವನು ಕೊಡುತಲಿ ಹೃದಯ ವಂತಿಕೆ
ಬೆಳೆಸುತ, ಬಡವರ ಕಣ್ಣೀರು ವರೆಸುತ,
ಹಲವಗೆ ಸಹಾಯ ಮಾಡುತ ಬಾಳಲು
ನೆಮ್ಮದಿ ಸಿಗುವುದು ಮೈಮನ ತಣಿವುದು..//

ಭೂಮಿಗೆ ಬಂದರೆ ಕುರುಹನು ಬಿಡುತಲಿ,
ಜೇವನ ಪಾವನ ಮಾಡುತ ನಲಿಯುತ
ತನ್ನಯ ಆತ್ಮದಿ ದೇವನ ಕರೆಯುತ
ನಗೆಯನು ಎಸೆಯುತ ಬಾಳ್ವೆಯ ಮಾಡುತ..//

ನನ್ನದು ಎನ್ನುವ ಮಾತದು ಏತಕೆ?
ಸಕಲವು ಎಂದರೆ ಸರ್ವರ ಹಿತಕ್ಕೆ,
ಬಾಳಲಿ ಅಂದದ ಗೂಡನು ನೋಡುವೆ
ಇಲ್ಲದೆ ಇದ್ದರೆ ಗುಂಡಿಗೆ ಬೀಳುವೆ..//

1088. ಗುರುವರ್ಯ

ಗುರುವರ್ಯ

ಬೆಳೆಸಿ ನನ್ನ ಕಲಿಸಿ ಜೀವನ ಪಾಠ !
ಮೊದಲ ಗುರುವೆ ನಿನಗೆ ನಮನ,
ಮಾತು ಕಲಿಸಿ, ತಿದ್ದಿ ತೀಡಿ,
ಕಲ್ಲನೊಂದು ಮೂರ್ತಿ ಮಾಡಿ!

ಹಸಿವ ನೀಗಿ, ಕಷ್ಟ ಪಟ್ಟು
ಹಗಲು ಇರುಳು ದುಡಿತವಿಟ್ಟು!
ಸಂಸಾರ ಸಾಕಿ ಬಾಳಿ ಬದುಕಿ,
ಮನುಜನಾಗಿ ಮಾಡಿದ ತಂದೆ!

ಅಕ್ಷರವ ತಿದ್ದಿ ತೀಡಿ, ಕೋಲನಿಟ್ಟು ಹೆದರಿಸಿ!
ಪೆದ್ದು ಬುದ್ಧಿ ಸಹಿಸಿಕೊಂಡು
ಓದು ಬರಹ ಬರಲು ಖುಷಿಯ ಪಡುತ
ತನ್ನತನವ ಮಕ್ಕಳಿಗೆ ಬಿಟ್ಟು ಕೊಟ್ಟು ಬದುಕಿದ ಗುರುವೇ..

ಗೌರವಕ್ಕೆ ಯೋಗ್ಯರೆಲ್ಲ ನೀವು ನಮ್ಮ ಬಾಳಿಗೆ,
ಸೌಭಾಗ್ಯ ನಿಮ್ಮ ಪಡೆದ ನಮ್ಮ ಬದುಕಿದು!
ಬಾಗಿ ನಮಿಸಿ ನಿಮ್ಮ ಆಶೀರ್ವಾದ ಬೇಡುವೆವು,
ಸದಾ ನಮ್ಮ ಜೊತೆಗಿರಬೇಕೆಂದು ಕೋರುವೆವು..
@ಪ್ರೇಮ್@
28.06.2019

1087. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-50

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-50
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-50

ನಿನ್ನೆ ಮೊನ್ನೆ ಪ್ರಾರಂಭವಾಗಿದೆ ಅನ್ನಿಸುವ ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ ಅಂಕಣ ಬರಹ ಐವತ್ತನೇ ವಾರಕ್ಕಡಿಯಿಟ್ಟು ಇ-ಪತ್ರಿಕೆಯಲ್ಲೂ ತನ್ನ ಅರ್ಧ ಸೆಂಚುರಿ ಬಾರಿಸಿದ್ದು ಖುಷಿ ತಂದ ವಿಚಾರವಾಗಿದೆ. ಓದುಗರಿಗೊಂದು ಸಲಾಂ. ನಿಮ್ಮ ಪ್ರೋತ್ಸಾಹ ನಮ್ಮ ಟಾನಿಕ್. ಬದಲಾವಣೆ ಏನಾದರೂ ಬಯಸುವಿರಾದರೆ ಖಂಡಿತಾ ಕಮೆಂಟ್ ನಲ್ಲಿ ತಿಳಿಸಿ ಎನ್ನುತ್ತಾ ಐವತ್ತನೇ ವಾರದ ಬರಹಕ್ಕೆ ಪಾದಾರ್ಪಣೆ ಮಾಡುತ್ತಿರುವೆ. ನಿಮ್ಮ ಆಶೀರ್ವಾದ, ಹಾರೈಕೆಗಳಿರಲಿ.

ಪ್ರಪಂಚದಲ್ಲಿ ಕೋಟಿ ಕೋಟಿ ಜೀವಿಗಳಿವೆ. ಮನುಷ್ಯ ಉತ್ತಮ ಜೀವಿಯೆಂದು ನಾವು ಹೇಳಿಕೊಳ್ಳುತ್ತೇವೆ! ಹಾಗೆಯೇ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳ ಬಿಟ್ಟು ಬದುಕಬೇಕೆಂದು ತಿಳಿದವರು, ಹಿರಿಯರು ಕರೆ ನೀಡಿರುವರು. ಅವುಗಳ ಬಿಟ್ಟರೆ ಮಾತ್ರ ಮಾನವ ದೈವತ್ವಕ್ಕೇರುವನು. ಅದನ್ನು ಪಾಲಿಸುವವರು ಪ್ರಪಂಚದಲ್ಲಿ ಶೇಕಡಾ ೧ಕ್ಕಿಂತಲೂ ಕಡಿಮೆ ಜನರು. ಹಾಗಾದರೆ ಮಾತು ಬಂದ ತಕ್ಷಣ ಮನುಜ ಮೇಲಾಗುವನೇ?
   ಮನುಷ್ಯ ಮೇಲ್ಮಟ್ಟದ ಜೀವಿಯಾಗುವುದು ಪರೋಪಕಾರ, ಪರಹಿತ, ಕೃತಜ್ಞತೆ, ಸಹಕಾರ, ಹೊಂದಾಣಿಕೆ, ಸಹನೆ ಮೊದಲಾದ ಗುಣಗಳನ್ನು ಕಲಿತುಕೊಂಡಾಗಲೇ. ಈಗಂತೂ ತಿರುಗಾಡಲು ತಮ್ಮದೇ ಕಾರು, ಪುಟ್ಟ ಸಂಸಾರ, ಯಾರೊಂದಿಗೂ ಬೆರೆಯದ ಮನೋಭಾವನೆ ಇರುವಾಗ ಇತರರೊಡನೆ ಹೊಂದಾಣಿಕೆ, ಇತರರ ಕಷ್ಟಕ್ಕೆ ಸಹಾಯ, ಸ್ಪಂದನೆ ಕರಗಿ ನಾನು, ನನ್ನದು, ನನಗೆ ಎಂಬಂತಾಗಿದೆ! ಇದೇ ಬಾವಿಯೊಳಗಿನ ಕಪ್ಪೆಯ ತೆರದಿ. ಜೀವನ ಕೂಡಾ..ಮನೆಯಲ್ಲಿ ಸಮಯ ಕಳೆಯೋಲ್ಲ! ಅದಕ್ಕಾಗಿ ವೀಕೆಂಡ್ ನಲ್ಲೂ ಪ್ರವಾಸ! ಹಿಂದಿನ ಕಾಲದಲ್ಲಿ ಮನೆಮಂದಿಯೆಲ್ಲ ಸುತ್ತಲೂ ಕುಳಿತು ಕತೆ, ಒಗಟು,ಗಾದೆ, ಯಕ್ಷಗಾನ, ನಾಟಕ ಎಂದೆಲ್ಲ ಮಾಡುತ್ತಾ ಮನೆಯೆಂದರೆ ಸದಸ್ಯರಿಗೆ ಸ್ವರ್ಗವಾಗಿರುತ್ತಿತ್ತು. ಮಕ್ಕಳ ಆಟ, ಹಿರಿಯರ ಅನುಭವದ ನುಡಿಗಳು ಉದಾತ್ತರನ್ನಾಗಿ ಮಾಡುತ್ತಿದ್ದವು. ಈಗ ಮನೆಯಲ್ಲಿ ಹಿರಿಯರೂ ಇಲ್ಲ, ಖುಷಿಪಡಲು ಮಕ್ಕಳ ಗುಂಪೂ ಇಲ್ಲ!
   ಈಗೇನಿದ್ದರೂ ಶೀತಲ ಸಮರ ಯುಗ! ಮತ್ತೊಂದೆಡೆ ವಾಗ್ಯುದ್ಧ! ಮಗದೊಂದೆಡೆ ಲಿಖಿತಯುದ್ಧ! ತನಗಾಗದವರ ಮೇಲೆ ಹರಿಹಾಯ್ದು ಜಗಳವಾಡುವುದು, ಅವರು ಮಾಡಿದ ಕಾರ್ಯವನ್ನೆಲ್ಲ ವಿರೋಧಿಸುವುದು, ಅವರನ್ನು ಹೊಗಳುವವರ ತೆಗಳುವುದು, ನಾವೇ ಮೇಲು ಎಂದು ತಾನೇ ತೋರಿಸಿಕೊಂಡು ಮೆರೆಯುವುದು, ತಮಗಾಗದವರ ಬಗ್ಗೆ ಬಾಯಿಗೆ ಬಂದ ಹಾಗೆ ಕೆಟ್ಟದಾಗಿ ಬರೆಯುವುದು,  ಇತರರಲ್ಲಿ ಸದಾ ಹುಳುಕು ಹುಡುಕುವುದು, ಇತರರ ಮನಗಳನ್ನೂ ಕೆಡಿಸುವುದು, ಚಾಡಿ ಇಂದು ಸಾಮಾಜಿಕ ಪಿಡುಗುಗಳಾಗಿವೆ.
   ಮನುಷ್ಯನ ಮನಸ್ಸು ಸಂಕುಚಿತಗೊಂಡಷ್ಟು ಕಾಲ ಈ ರೀತಿ ನಡೆಯುತ್ತಲೇ ಇರುತ್ತದೆ. ಅಧಿಕಾರಕ್ಕಾಗಿ, ಸೀಟಿಗಾಗಿ, ನೋಟಿಗಾಗಿ ಹೋರಾಟ! ಜೀವನ ನಡೆಸುವುದರಲಿ ಎಲ್ಲರೂ ಶ್ರೀಮಂತರೇ, ಬಡವರಾದುದು ಹೃದಯ ಸಿರಿವಂತಿಕೆ ಇಲ್ಲದ ಕಾರಣ!
   ನನ್ನ ಮಟ್ಟಕ್ಕೆ ನಾನು ಯೋಚಿಸುವಂತೆ ಅವರವರ ತಿಳುವಳಿಕೆಯ ಮಟ್ಟಕ್ಕೆ ಅವರು ಯೋಚಿಸುವರು! ಸದಾ ಅಲ್ಪ ಬುದ್ಧಿಯ ಮನುಜ ವಿಶಾಲ ಮನೋಭಾವ ಹೊಂದಿರಲಾರ!
    ನಾಗರ ಹಾವು ತನ್ನ ದ್ವೇಷವನ್ನು ಹನ್ನೆರಡು ವರುಷಗಳ ವರೆಗೆ ಸಾಧಿಸುತ್ತದೆ ಎಂದು ಹೇಳುತ್ತಾರೆ. ಮನುಜ ಅದಕ್ಕಿಂತಲೂ ಕೆಟ್ಟವ! ಆದರೆ ಅಲ್ಲೆಲ್ಲೋ ದೈವಾಂಶ ಗುಣಗಳ ಮನುಜರು ಅಲ್ಲೊಂದು, ಅಲ್ಲೊಂದು ಕಾಣಲಸಿಗುತ್ತಾರೆ!
  ಸಹೃದಯ ಸದಾ ಹೃದಯಗಳನ್ನು ಜೋಡಿಸುವುದಲ್ಲದೆ ಬದುಕು ಸಂತಸವಾಗಿಡಲು ಸಹಕರಿಸುತ್ತದೆ, ರೋಗಗಳಿಂದ ದೂರವಿರುತ್ತದೆ. ಸಂತಸ, ನೆಮ್ಮದಿಯ ಜೀವನ ಕೊಡುತ್ತದೆ. ಅಂತಹ ಸಹೃದಯದ ಸುಂದರ ಬದುಕು ನಮ್ಮದಾಗಲಿ. ನೀವೇನಂತೀರಿ?
@ಪ್ರೇಮ್@