ಮಂಗಳವಾರ, ಮಾರ್ಚ್ 19, 2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -223

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ ಬಂಗಾರದ -223

   ಪರೀಕ್ಷಾ ಸಮಯವಿದು. ಇಲ್ಲಿ ನಾನು ಇದರ ಬಗ್ಗೆ ಶಿಕ್ಷಕಿಯಾಗಿ ಇದ್ದುಕೊಂಡು ಕೂಡಾ ಬರೆಯದೆ ಹೋದರೆ ಅದು ತಪ್ಪಾಗುತ್ತದೆ. ಈ ಅಂಕಣ ಪರೀಕ್ಷಾ ಸಿದ್ಧತೆ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮೀಸಲು. ಹಾಗಾಗಿ ಮೊದಲನೆಯದಾಗಿ ರಾಜ್ಯ, ರಾಷ್ಟ್ರದ ವಿವಿಧ ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವ , ಪರೀಕ್ಷೆಗೆ ತಯಾರಿ ನಡೆಸುತ್ತಿರುವ  ಎಲ್ಲಾ  ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಆಶಿಸುತ್ತಾ, ಪರೀಕ್ಷೆ ಎಂದರೆ ಪೆಡಂಭೂತವಲ್ಲ, ಆದರೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಲು ನಾವು ಕಲಿಯಬೇಕು. ಪರೀಕ್ಷೆ, ಅದರಲ್ಲೂ ಪಬ್ಲಿಕ್ ಪರೀಕ್ಷೆ ಎಂದರೆ ಮನದಲ್ಲಿ ಏನೋ ಅಳುಕು. ಹೇಗೆ ಆಗುವುದೋ ಎಂಬ ಭಯ. ಪ್ರತಿ ಪ್ರಶ್ನೆಗೂ ಉತ್ತರ ಇದ್ದೇ ಇದೇ ಎನ್ನುವ ಮಾತು ನೆನಪಿನಲ್ಲಿ ಉಳಿದರೆ ಸಾಕು. 
   ನನ್ನ ಸುಧೀರ್ಘ ಇಪ್ಪತ್ತು ವರ್ಷಗಳ ಬೋಧನೆಯ ಅನುಭವದಲ್ಲಿ ನಾನು ಕಂಡುಕೊಂಡದ್ದು ಏನೆಂದರೆ ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ಯಾರಿಗೆ ಇಲ್ಲವೋ ಅಂತಹ ವಿದ್ಯಾರ್ಥಿ ಹಿಂದುಳಿಯುತ್ತಾನೆ. ಯಾವ ಶಿಕ್ಷಕರೂ ಕೂಡ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಿ ಖುಷಿ ಪಡುವ ಅಥವಾ ಮಜಾ ತೆಗೆದುಕೊಳ್ಳುವ ಗುಣವನ್ನು ಹೊಂದಿಲ್ಲ. ಹಾಗೆ ಯಾರೂ ಮಾಡಲಾರರು ಕೂಡ. ಹೇಗಾದರೂ ಸರಿ , ಮಗು ಉತ್ತೀರ್ಣರಾಗಿ ಮುಂದೆ ಹೋಗಲಿ ಎಂಬುದು ಎಲ್ಲರ ಧ್ಯೇಯ ಆಗಿರುತ್ತದೆ. ಇನ್ನು ಜಿಲ್ಲೆ - ಜಿಲ್ಲೆಗಳ ನಡುವೆ, ತಾಲೂಕುಗಳ ನಡುವೆ, ಕ್ಲಸ್ಟರ್ ಗಳ ನಡುವೆ ಅಂಕಗಳ, ಕ್ಯೂಪಿಐ ಗಳ ನಡುವೆ ಸರ್ಧೆ ಯಾಕಿಟ್ಟರೋ ತಿಳಿಯದು. ಬಹುಶಃ ಆ ಸ್ಪರ್ಧಾತ್ಮಕ ಮನೋಭಾವದಿಂದಲಾದರೂ ಕಲಿಕಾ ಸಾಮರ್ಥ್ಯ ಹೆಚ್ಚಲಿ ಎಂದು ಆಗಿರಬಹುದು. ಆದರೆ  ರ್ಯಾಂಕ್ ಪದ್ಧತಿ ತೆಗೆದ ಬಳಿಕ ಇದು ಪ್ರತಿ ಜಿಲ್ಲೆಯ, ತಾಲೂಕಿನ, ಕ್ಲಸ್ಟರ್, ಶಾಲೆಯ, ಊರಿನ, ಕುಟುಂಬದ ಮರ್ಯಾದೆ ಪ್ರಶ್ನೆ ಆದ ಹಾಗಿದೆ. ಸ್ಪರ್ಧಾತ್ಮಕ ಯುಗ ನೋಡಿ, ನಾವು ಅದಕ್ಕೆ ಹೊಂದಿಕೊಂಡರೆ  ಮಾತ್ರ ಬದುಕು ಸಾಧ್ಯ. ಏಕೆಂದರೆ ಸಮಾಜವನ್ನು ಹೊರತುಪಡಿಸಿ ಮಾನವ ಒಂಟಿಯಾಗಿ ಬದುಕಲು ಕಷ್ಟ. ಮುಂದಿನ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯ ಶಾಲೆಗಳಿಂದಲೆ ಪ್ರಾರಂಭ ಆಗುವಾಗ, ನಮ್ಮ ಶಾಲೆಯ ಫಲಿತಾಂಶ ಮುಂದಿರಬೇಕು, ಚೆನ್ನಾಗಿ ಇರಬೇಕು, ಎಲ್ಲರಿಗಿಂತ ಹೆಚ್ಚಿರಬೇಕು, ನಾವೇ ಮೊದಲಿಗರಾಗಿ ಬರಬೇಕು ಮುಂತಾದ ಭಾವನೆಗಳು ಆಟೋಟ, ದುಡಿಮೆಗಳ  ಹಾಗೆ ಪಾಠದಲ್ಲಿ ಕಲಿಕೆಯಲ್ಲೂ ಬರಬೇಕೆಂಬ ಆಶಯ ಇರಬಹುದು. 
   ಇಂದಿನ ಜನಾಂಗ ಯಾರಿಗೆ ಯಾರೂ ಕಮ್ಮಿ ಇಲ್ಲ. ಎಲ್ಲರೂ ಬುದ್ದಿವಂತರೇ. ಒಬ್ಬೊಬ್ಬರ ಬಳಿ ಒಂದೊಂದು ವಿಶೇಷ ಎನ್ನುವ ಗುಣ ಅವರ ಹುಟ್ಟಿನಲ್ಲೆ ಮೆದುಳಿನ ಒಳಗೆ ಐಕ್ಯವಾಗಿ ಬೆಳೆದು ಬಿಟ್ಟಿದೆ. ಹಾಗಿರುವಾಗ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಜನ ಪರಿಪೂರ್ಣ ಅಂಕಗಳನ್ನು  ಪಡೆಯುತ್ತಾರೆ ಮತ್ತು ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ತೀರಾ ಕಡಿಮೆ, ಹಿಂದಿನ ಹಾಗಿಲ್ಲ. ಮಾಧ್ಯಮಗಳು ಬೆಳೆದ ಕಾರಣ ಸಮಯ ಒಂದಿದ್ದರೆ ಓದಲು ಸಿಗುವ ವಸ್ತುಗಳ ಸಂಖ್ಯೆ ಅಪರಿಮಿತ. ಇಂಟರ್ ನೆಟ್ ನಮ್ಮ ಕೈಯಲ್ಲೇ ಇರುವ ಕಾರಣ ಯಾರು, ಯಾವ ಮೂಲೆಯಲ್ಲಿ ಶಾಲೆಯಲ್ಲಿ ಇರುವ ಯಾವ ಶಿಕ್ಷಕ ಅಥವಾ ವಿದ್ಯಾರ್ಥಿಯ ಬಳಿ ಬೇಕಾದರೂ ಮಾತನಾಡಿ ವಿಷಯ ಸಂಪಾದಿಸಬಹುದು. ಅಷ್ಟೇ ಯಾಕೆ, ಶಿಕ್ಷಕರು ಹೇಳುವ ಮೊದಲೇ ಸಾಮಾಜಿಕ ಜಾಲ ತಾಣಗಳ ಮೂಲಕ ಯೂಟ್ಯೂಬ್ ಗಳಿಂದ ಆ ವಿಷಯದ ಹೆಚ್ಚಿನ ಮಾಹಿತಿ ಪಡೆಯಬಹುದು, ಇನ್ನು ಈಗ ಗುರುಗಳನ್ನು ಮೀರಿಸಿದ ವಿದ್ಯಾರ್ಥಿಗಳು ಹೆಚ್ಚು ಇರುವರು. 
           ಆಟೋಟ, ವಿಜ್ಞಾನ ಪ್ರಯೋಗ, ಬರವಣಿಗೆ, ನಾಟಕ, ಹಾಡು,  ಸಂಗೀತ ವಾದ್ಯಗಳು, ವಿವಿಧ ಪ್ರಕಾರಗಳ ನೃತ್ಯ, ಚಿತ್ರಕಲೆ , ಭಾಷಣ, ಕಾರ್ಯಕ್ರಮ ನಿರೂಪಣೆ, ಛದ್ಮವೇಷ , ಪಠಣ, ವ್ಯಾಖ್ಯಾನ, ಅಭಿನಯ, ಟೆಕ್ನಾಲಜಿಯ ಉಪಯೋಗ, ಇವೆಲ್ಲ ಕ್ಷೇತ್ರಗಳಲ್ಲೂ ಮುಂದಿರುವ ವಿದ್ಯಾರ್ಥಿ, ನಾಳಿನ ಭಾರತದ ಭವ್ಯ ಶಿಲ್ಪಿಗಳು ಹಾಗೂ ನಾಯಕರಾದ ಮಕ್ಕಳು ಕನಿಷ್ಠ ಅಂಕ ಪಡೆದು ತೇರ್ಗಡೆ ಹೊಂದುವುದು ಯಾವ ಲೆಕ್ಕ?
       ಮನಸ್ಸಿನ ಧೃಢ ಸಂಕಲ್ಪ ಮುಖ್ಯ. ನಾನು ಮಾಡಿಯೇ ತೀರುತ್ತೇನೆ ಎನ್ನುವ ಆತ್ಮ ವಿಶ್ವಾಸ ಮುಖ್ಯ. ಇಂದು ಉತ್ತೀರ್ಣರಾಗುವುದು ಕಷ್ಟದ ಮಾತೇ ಅಲ್ಲ. ಬೇಕಂತ ಬರೆಯದೆ ಹಾಗೆ ಆಗುವವರು ಕೂಡಾ ಇದ್ದಾರೆ. ಒಂದು ತರಗತಿಯಲ್ಲಿ ಒಬ್ಬರೋ ಇಬ್ಬರೋ ಕಲಿಕೆಯಲ್ಲಿ ಹಿಂದೆ ಬೀಳುವರು ಇರುವುದು ಅಪರೂಪ ಏನಲ್ಲ, ಅದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದುದು. ಅದರಲ್ಲಿ ಯಾವ ತಪ್ಪೂ ಇಲ್ಲ. ಹಾಗಿರುವಾಗ ಶೇಕಡಾ ನೂರು ಫಲಿತಾಂಶ ಎಲ್ಲಾ ಶಾಲೆಗಳಲ್ಲೂ ಬರಬೇಕು ಎಂಬ ಒತ್ತಡದ ನಡುವೆ ಬದುಕುತ್ತಿರುವ, ದುಡಿಯುತ್ತಿರುವ , ಓದುತ್ತಿರುವ ಜನರು ಪ್ರಯತ್ನ ಪಡುತ್ತಾರೆ ಅಷ್ಟೇ. ಎಲ್ಲವೂ ವಿದ್ಯಾರ್ಥಿಗಳ ಶ್ರಮ, ಕಲಿಕಾ ಮಟ್ಟದ ಜೊತೆಗೆ ಅವರ ಮನದ ಭಾವಗಳ ಮೇಲೆ ಅವಲಂಬಿತ ಆಗಿದೆ.
     ಕಡಿಮೆ  ಕಲಿಕಾ ಸಾಮರ್ಥ್ಯ ಇದ್ದ ವಿದ್ಯಾರ್ಥಿ ಒಬ್ಬ ಎಷ್ಟು ಕಲಿತರೂ ವಿಷಯ ನೆನಪಿನಲ್ಲಿ ಉಳಿಯದೆ, ಸ್ವಂತ ಬರೆಯಲು ಕೂಡಾ ಬಾರದೆ ಇದ್ದಾಗ ಏನು ಗೊತ್ತೋ ಅದನ್ನೇ ಬರೆದು ತಾನು ಪಾಸ್ ಆಗಲಿ ದೇವರೇ ನಿನಗೆ ಮಂಗಳಾರತಿ ಮಾಡಿಸ್ತೇನೆ ಅಂತ ಹರಕೆ ಹೊತ್ತುಕೊಂಡು ದೇವರ ಸಹಾಯದಿಂದ ಪಾಸ್ ಆದರೆ, ಇನ್ನೊಬ್ಬ ಪೇಪರ್ ಮೇಲೆ ದಯವಿಟ್ಟು ನನ್ನನ್ನು ಪಾಸ್ ಮಾಡಬೇಡಿ, ನನಗೆ ಕಾಲೇಜಿಗೆ ಹೋಗಲು ಇಷ್ಟ ಇಲ್ಲ, ನಾನು ಮಠಕ್ಕೆ ಸ್ವಾಮೀಜಿ ಆಗಲು ಹೋಗಬೇಕು, ಪಾಸ್ ಆದರೆ ಮನೆಯವರು  ಕಾಲೇಜಿಗೆ ಕಳುಹಿಸುತ್ತಾರೆ ಎನ್ನುತ್ತಿದ್ದ. 
   ಶಿಕ್ಷಕರೊಬ್ಬರು ಹೇಳಿದ ಹಾಗೆ ಈಗ ಉಪ್ಪು ಗಂಜಿ ತಿಂದು ಬರುವ ಜನಾಂಗದ ಮಕ್ಕಳಲ್ಲ, ಬದಲಾಗಿ ನೂಡಲ್ಸ್, ಪಿಜ್ಜಾ, ಬರ್ಗರ್ ಅಂತ ಮಾಡ್ರನ್ ಫುಡ್ ತಿಂದು ಬೆಳೆದ ವೆರೈಟಿ ಯೋಚನೆಯ ಮಕ್ಕಳು. ಹೇಗೂ ಜನಸಂಖ್ಯೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ. ಮಾನವ ಸಂಪನ್ಮೂಲದ ಸದ್ಬಳಕೆ ದೇಶಕ್ಕೆ ಬೇಕಾಗಿದೆ. ಅದೇನೇ ಇದ್ದರೂ ಎಸೆಸೆಲ್ಸಿ, ಪಿಯುಸಿ ಪಾಸ್ ಆಗಲೇ ಬೇಕಿದೆ. ಅದು ಬದುಕಿನ ಪಾಯ. 
ಹೆದರದಿರಿ ವಿದ್ಯಾರ್ಥಿಗಳೇ, ಇನ್ನೂ ವಾರ, ತಿಂಗಳಿನ ಸಮಯವಿದೆ, ಕಾಲ ಇನ್ನೂ ಮಿಂಚಿಲ್ಲ, ಹತ್ತು ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ ಕಲಿಯಿರಿ, ಅಲ್ಲದೆ ಶಿಕ್ಷಕರು ಅತಿಮುಖ್ಯ ಎಂದು ಹೇಳಿದ್ದನ್ನು ನೂರು ಸಲ ಬರೆದಾದರೂ ಸರಿ, ಕಲಿಯಿರಿ. ಅಷ್ಟು ಸಾಕು. ಇನ್ನು ಬರವಣಿಗೆ. ಡಾನ್ಸ್ ಹೇಗೆ ಅಭ್ಯಾಸ ಮಾಡಿದರೂ ಪ್ರದರ್ಶನದ ಸಮಯದಲ್ಲಿ ಉತ್ತಮ ವೇಷ ತೊಟ್ಟು ದೂಮ್ ಧಾಮ್ ಆಗಿ ವೈಭವೀಕರಿಸಿ ಕುಣಿಯುವುದಿಲ್ಲವೆ ಈ ಹಾಗೆ, ನಿಮ್ಮ ಪರೀಕ್ಷಾ ಪತ್ರಿಕೆಯ ಎಲ್ಲಾ ವಿಷಯಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರಲಿ, ತಪ್ಪಾದರೆ ನೆಗೆಟಿವ್ ಅಂಕ ಇಲ್ಲವಷ್ಟೆ? ಸರಿ ತಪ್ಪು ತಿದ್ದಲು ಶಿಕ್ಷಕರಿದ್ದಾರೆ, ನಿಮ್ಮ ಟೀಚರ್ ಅಂತೂ ಅಲ್ಲ, ಹಾಗಾಗಿ ಇದುವರೆಗೂ ಕಲಿತ , ಈಗ ಕಲಿತ ಎಲ್ಲಾ ಭಾಷೆ, ಗಣಿತ, ವಿಜ್ಞಾನ, ಸಮಾಜ ನೆನಪಿಸಿಕೊಂಡು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ. ಪಾಸ್ ಅಂತೂ ಆಗ್ತೀರಿ. ಇನ್ನು ಹೈ ಸ್ಕೋರರ್ ಗಳಿಗೆ, ಮೂರು ಪ್ರಿಪರೇಟರಿ ಪರೀಕ್ಷೆಗಳಲ್ಲಿ ಆದ ತಪ್ಪುಗಳನ್ನು ಸರಿ ಪಡಿಸಿಕೊಳ್ಳಿ ಅಷ್ಟೇ. ಯೂ ಆರ್ ದ ವಿನ್ನರ್ಸ್.. ಆಲ್ ದ ಬೆಸ್ಟ್ ಮಕ್ಕಳೇ... ಚೆನ್ನಾಗಿ ಓದಿ ಅಭ್ಯಸಿಸಿ, ಪರೀಕ್ಷೆಗೆ ಹೇಳಿ, "ನಾನು ಒಂಭತ್ತು ವರ್ಷ ಪರೀಕ್ಷೆ ಬರೆದ ಸರ್ವೀಸ್ ಆದ ಮನುಷ್ಯ ನಿನಗೆ ಹೆದರುವ ಅಲ್ಲ " ಅಂತ  ಅಲ್ಲವೇ? ನೀವೇನಂತೀರಿ?
#ಹನಿಬಿಂದು@
16.02.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ