ಅಂದುಕೊಂಡಿದ್ದೆವು
ನಾವಂದುಕೊಂಡಿದ್ದೆವು ಬೇಸಿಗೆಯ ಬಿರು ಬಿಸಿಲಿಗೆ ಮರುಗಿ
ಇನ್ನೇನು ವರುಣ ತರುವನು ತಂಪು ತಂಗಾಳಿ
ತಣ್ಣನೆಯ ಮುತ್ತುಗಳ ಹಿತ ಸ್ಪರ್ಶ!
ಆದರೆ ಬಂದುದೇನು? ಹೊಸದೊಂದು ಚಂಡಮಾರುತ,
ಮನೆಮಠಗಳ ಕಿತ್ತೊಗೆವ ಫೋನಿಯ ಕರಾಮತ್ತು!
ಮಕ್ಕಳಿಗೆಲ್ಲ ಶಾಲೆಗೆ ರಜವು
ಮಜವೆಂದು ಹಾಡಲು ಕುಣಿಯಲುಂಟೆ?
ಮಳೆತರಲಿ ಬದುಕಿನಲಿ ಮಧುರ ಗಾನವೆಂದು
ನಾವಂದುಕೊಂಡು ವರುಣನಿಗಾಗಿ ಕಾದದ್ದು ತಪ್ಪೇ?
ಅದೇನು ಕೋಪವೋ ಮಳೆಹನಿಗೆ ನಮ್ಮ ಮೇಲೆ
ಕಾಡು ಕಡಿದು ನಾಡ ಮಾಡಿದ ಫಲವೋ?
ವರುಷಕೊಂದು ಸುಂಟರಗಾಳಿ, ವರುಷಕೊಂದೂರು!
ಪ್ರತಿಸಲವೂ ಮನೆ ಮಠ ಕಳೆದುಕೊಳುವವರು ನೂರಾರು!
ಫೋನಿ ಬರಬೇಡ ಭಾರತದ ಮಡಿಲಿಗೆ
ನೀ ಹೋಗಿ ಸೇರು ಬಂಗಾಳಕೊಲ್ಲಿಯ ಒಡಲಿಗೆ!
ಜನ ಸೊರಗಿ ಬಳಲಿ ಬೆಂಡಾಗಿಹರು ನಿನ್ನ ಬಿರುಸಿಗೆ,
ಚಂಡ ಮಾರುತವೆ ರುಂಡ ಚೆಂಡಾಡದಿರು ಒಡಿಶಾಗೆ..
ಚಂಡಿ ಚಾಮುಂಡಿಯ ರೂಪದಿ ಶಿಕ್ಷಿಸದಿರು ವಾರುಣಿ,
ಚೆಂಡಾಡಿ ಬಿಡಬೇಡ ವಾಯು, ಗಾಳಿ, ಮಾರುತವಾಹಿನಿ,
ನಿನಗೆದುರೆ ನಾವಲ್ಪ ಮನುಜರು , ಪ್ರಕೃತಿ ನೀ ರಾಣಿ!
ಹುಲು ಮನುಜರು ನಾವು, ನಿನ್ನ ಮುಂದೆ ಉಸಿರಾಟವೊಂದೆ ನಮ್ಮ ಖನಿ!
@ಪ್ರೇಮ್@
04.05.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ